Monday, March 30, 2009


ಪಿ.ಜಿ.ಡಿಜೆ.ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.
ಗೋಧೂಳಿಯ ಹೊತ್ತಿಗೆ ಎಲ್ಲ ಶಾಲೆ, ಕಾಲೇಜುಗಳು, ಕಚೇರಿಗಳು ತಮ್ಮ ದೈನಂದಿನ ಕೆಲಸವನ್ನು ಮುಗಿಸುತ್ತವೆ. ಆದರೆ ಆ ಹೊತ್ತಿಗೆ ತಮ್ಮ ಕೆಲಸ ಶುರು ಎಂದು ಭರದಿಂದ ನಮ್ಮನ್ನು ಕೈಬೀಸಿ ಕರೆಯುತ್ತಾರೆ ನಾನಾ ತಿನಿಸುಗಳ ತಳ್ಳು ಗಾಡಿಗಳ ಮಾಲೀಕರು. ಸೀಮೆ ಎಣ್ಣೆ ಅಥವಾ ಗ್ಯಾಸ್ ನಿಂದ ಉರಿಯುವ ಒಲೆಗಳಿಗೆ ಸಂಜೆಯ ಕೆಲವು ಗಂಟೆಗಳು ಬಿಡುವಿಲ್ಲದ ಕೆಲಸ. ಅಲ್ಲಿ ಹುರಿಯುವ ಶೇಂಗಾ ಕಾಳಿಗೆ, ಬೇಯುವ ಆಮ್ಲೆಟ್ ಗೆ, ಪಾನಿಪುರಿಗೆ, ಗೋಭಿ ಮಂಚೂರಿಗೆ.. ಆಹಾ ಆ ರುಚಿಗೆ ಮನಸೋಲದವರಾರು?
ಸೌತೆಕಾಯಿಯನ್ನು ಕಲಾತ್ಮಕವಾಗಿ ಕತ್ತರಿಸಿ ಖಾದ್ಯಗಳ ಮೇಲಿಟ್ಟು, ಸ್ವಲ್ಪ ನಿಂಬೆಹಣ್ಣಿನ ರಸ ಮತ್ತೆ ಖಾರದ ಪುಡಿ, ಉಪ್ಪನ್ನು ಸವರಿಕೊಟ್ಟರೂ ವ್ಯಾಪಾರಿಯ ಜೇಬು ತುಂಬುತ್ತದೆ ಅಲ್ಲವೇ? ಪಕ್ಕದಲ್ಲಿ ಪಂಚತಾರಾ ಹೊಟೇಲುಗಳಿದ್ದರೂ ಜನ ಈ ರುಚಿಗೆ ಮನಸೋತು, ತಳ್ಳು ಗಾಡಿಗಳು ತಮ್ಮ ಕೆಲಸ ಪ್ರಾರಂಭಿಸುತ್ತಿದ್ದಂತೆ ಮುಗಿ ಬೀಳಲು ಹಾತೊರೆಯುತ್ತಾರೆ. ಇದೆಂತಹ ಸಮುದಾಯ ಮೋಡಿಯ ಸಂಗತಿಯೋ ನೋಡಿ ?
ಕುರುಕಲು ತಿಂಡಿಯ ತಳ್ಳುಗಾಡಿಯವರದು ನಿತ್ಯ ಸಂಜೆ ಕೆಲವೇ ಗಂಟೆಗಳ ವ್ಯಾಪಾರ. ಅದು ಶಹರ ದೊಡ್ಡದಿರಲಿ ಅಥವಾ ಸಣ್ಣದಿರಲಿ ಜನಕೂಡ ಸಂಜೆಯ ಹೊತ್ತಿನಲ್ಲಿ ಬಿಡುವು ಮಾಡಿಕೊಂಡು ಈ ಸಂಚಾರಿ ಹೊಟೇಲುಗಳಿಗೆ ಬಂದು ತಮಗಿಷ್ಟವಾದ ಖಾದ್ಯಗಳನ್ನು ಕುಟುಂಬ ಸಮೇತ ಸೇವಿಸುತ್ತಾರೆ. ಕಡಿಮೆ ಬೆಲೆಗೆ, ಬಾಯಿ ಚಪಲಕ್ಕೆ, ರುಚಿ ರಸಿಕತೆಯಿಂದ ಹೆಚ್ಚು ತಿನ್ನಬಹುದು ಎಂಬ ಸಣ್ಣ ದುರಾಸೆಯಿಂದಲೂ ಇರಬಹುದು!
ಮೊದಲು ಇದು ಬಡವರಿಂದ, ಬಡವರಿಗಾಗಿ ನಡೆಸಲ್ಪಡುವ ‘ವಡಾಪಾವ್’ ವ್ಯಾಪಾರ ಎಂದು ಕರೆಯಲ್ಪಡುತ್ತಿತ್ತು. ಈಗ ಎಲ್ಲ ವರ್ಗದ ಜನರಿಗೂ ಇದು ಆಕರ್ಷಣೀಯವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ ತಳ್ಳುಗಾಡಿಯನ್ನೇ ಬದುಕಿಗೆ ಆಧಾರವನ್ನಾಗಿರಿಸಿಕೊಂಡಿರುವ ಸೋಮು ಕುಮುಟಾದಿಂದ ಬಂದು ಇಲ್ಲಿ ನೆಲೆಸಿದವರು. ಮೊದಲು ಹುಬ್ಬಳ್ಳಿಯ ಎ.ಪಿ.ಎಮ್.ಸಿಯಲ್ಲಿ ಅವರಿಗೆ ಒಂದು ತಳ್ಳುಗಾಡಿ ಇತ್ತು. ಅದರಲ್ಲಿ ಮೋಟೆಯನ್ನು ಹೊತ್ತು ಅಂಗಡಿಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ಅದರೆ ಒಂದು ಸಣ್ಣ ಅಪಘಾತವಾಗಿ ಆ ಗಾಡಿ ಮುರಿದು ಹೋಯಿತು. ಅದನ್ನು ರಿಪೇರಿ ಮಾಡಿದರೂ ಅದು ಮೋಟೆಗಳನ್ನು ಎಳೆಯುವಂತಿರಲಿಲ್ಲ. ಅದರ ಚಕ್ರ ಸಂಪೂರ್ಣ ಮುರಿದಿತ್ತು. ಅದನ್ನು ಹಾಕಿಸುವ ಹಣವು ಅವರಲ್ಲಿ ಇರಲಿಲ್ಲ.
ಹಾಗಾಗಿ ಗಾಡಿಯನ್ನು ನಿಂತಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದು ಅನಿವಾರ್ಯವಾಯಿತು. ಆಗ ಅವರಿಗೆ ಹೊಳೆದದ್ದು ಈ ವ್ಯಾಪಾರ. ಹಾಗಾದರೆ ಹೇಗಿದೆ ಇವರ ವ್ಯಾಪಾರ? ಉತ್ತರಿಸುವಾಗ ಸೋಮು ಮುಖದಲ್ಲಿ ಕೊಂಚ ನಗು ಮೂಡುತ್ತದೆ. ವ್ಯಾಪಾರದ ಗುಟ್ಟು ಬಿಟ್ಟುಕೊಡದ ಜಾಣ್ಮೆ ಅವರಲ್ಲಿದೆ. "ಎ.ಪಿ.ಎಂ.ಸಿ ಯಲ್ಲಿ ಗಾಡಿ ತಳ್ಳುತ್ತಿದ್ದಾಗ ದಿನಕ್ಕೆ ೧೦೦ ರೂಪಾಯಿ ಸಿಗುತ್ತಿರಲಿಲ್ಲ. ಆದರೆ ಈಗ ಮಗನಿಗೆ ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ಮಗಳು ಎಮ್.ಎಸ್.ಡಬ್ಲು ಓದುತ್ತಿದಾಳೆ. ಒಂದು ಚಿಕ್ಕ ಸೂರು ಸಹ ಕಟ್ಟಿಕೊಂಡಿದ್ದೇನೆ" ಎಂದು ಧನ್ಯತೆ ಮೆರೆಯುತ್ತಾರೆ.
ಈ ತಳ್ಳು ಗಾಡಿಗಳು ಸೋಮು ಅವರಂತೆ ಪ್ರಾಮಾಣಿಕವಾಗಿ ದುಡಿದು, ಸ್ವಾವಲಂಬಿಯಾಗಿ ಬದುಕಬೇಕು ಎಂಬುವವರಿಗೆ ಪ್ರೇರಣಾದಾಯಿ. ಕಡಿಮೆ ಬಂಡವಾಳ, ಹೆಚ್ಚು ಲಾಭ ಬಯಸುವವರಿಗೆ ಅನುಕೂಲಕರವಾಗಿದೆ. ಈ ಗಾಡಿ ಬಳಸಿ ವ್ಯಾಪಾರ, ವ್ಯವಹಾರ ಮಾಡುವುದಕ್ಕೆ ಪರವಾನಗಿ ಶುಲ್ಕವೆಂದು ೨೫/- ರಿಂದ ೧೦೦/- ವರೆಗೆ ಕರ ವಿಧಿಸಲಾಗುತ್ತದೆ. ಬ್ಯಾಂಕುಗಳು ಕೂಡಾ ಈ ಗಾಡಿಯನ್ನು ಖರೀದಿಸಲು ಸಾಲವನ್ನು ನೀಡುತ್ತವೆ.
ಕಾಯಿದೆ ಪ್ರಕಾರ ಒಂದು ಕಡೆ ನಿಲ್ಲದೇ ನಿರಂತರ ಜಂಗಮರಾಗಿ ವ್ಯಾಪಾರ ಮಾಡಬೇಕೆಂಬ ನಿಯಮವಿದೆ. ಜೊತೆಗೆ ಉಳಿದ ಅಂಗಡಿ, ಹೊಟೇಲುಗಳವರ ತಕರಾರು ಬೇರೆ. ಅದಕ್ಕಾಗಿ ಉದ್ಯಾನ, ಕ್ರೀಡಾಂಗಣ, ಬಯಲು ನಾಟ್ಯ ಮಂದಿರಗಳು, ರಂಗ ಮಂದಿರಗಳು, ಸಿನೇಮಾ ಗ್ರಹಗಳು, ಕಾಲೇಜು ಹೊರವಲಯ ಸೇರಿದಂತೆ ಮತ್ತಿತರ ಖಾಲಿ ಇರುವ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಸೋಮು. ಇದಲ್ಲದೆ ತರಕಾರಿಗಳನ್ನು, ಹಾಲಿನ ಪ್ಯಾಕೇಟುಗಳನ್ನು, ಹಣ್ಣುಗಳನ್ನು ಸಹ ಕೆಲವು ವ್ಯಾಪಾರಿಗಳು ಈ ತಳ್ಳುಗಾಡಿಗಳಲ್ಲಿ ಹಾಕಿಕೊಂಡು ಮನೆಮನೆಗೆ ಮಾರುತ್ತಾರೆ. ಮಹಿಳೆಯರೂ ಇದಕ್ಕೆ ಹೊರತಲ್ಲ.
ಇತ್ತೀಚೆಗೆ ಈ ತಳ್ಳು ಗಾಡಿಯನ್ನು ತಯಾರಿಸುವುದರಲ್ಲೂ ಅಂಗಡಿಯವರು ಲಾಭಗಳಿಸುತ್ತಿದ್ದಾರೆ. ಮರದ ಅಥವಾ ಪ್ಲಾಸ್ಟಿಕ್ ಹಲಗೆ, ಅದಕ್ಕೊಂದು ಸೂರು ನೆರಳಿಗೆ ಆಧಾರವಾಗಿ, ಎರಡು ಚಕ್ರಗಳು ನಾಲ್ಕು ಖಂಬ ಇಷ್ಟರಲ್ಲಿಯೇ ಮೊದಲು ಗಾಡಿ ಮುಗಿಯುತ್ತಿತ್ತು. ಈಗ ಅದರಲ್ಲೂ ವಿವಿಧ ಅಲಂಕಾರಿಕ ರೂಪಗಳು ನಿರ್ಮಾಣಗೊಳ್ಳುತ್ತಿವೆ.
ಹಾಗಾಗಿ ಉದ್ಯೋಗವಿಲ್ಲ ಎಂದು ಕೊರಗುವ ಯುವಕರಿಗೆ ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಸೋಮು ಮಾದರಿಯಾಗಿದ್ದಾರೆ. ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ, ಸ್ವಾಭಿಮಾನದ ಬದುಕು ತಮಗೂ ತಮ್ಮ ಕುಟುಂಬಕ್ಕೂ ಕಲ್ಪಿಸಿ ಏಳಿಗೆ ಸಾಧಿಸಿರುವ ಸೋಮು ನಮಗೆ ಅನುಕರಣೀಯರಾಗಿ ನಿಲ್ಲುತ್ತಾರೆ.
ಹಾಗಿದ್ದರೆ ತಡಯಾಕೆ? ಒಂದು ಸಾರಿ ಸೋಮು ಅವರ ಹೊಟೇಲಿಗೆ ಭೇಟಿ ನೀಡಿ. ಅಲ್ಲಿರುವ ಖಾದ್ಯಗಳನ್ನು ಸವಿಯಿರಿ. ತಾವು ಕಲಿಯದಿದ್ದರೂ ತಮ್ಮ ಮಕ್ಕಳು ಕಲಿಯಲೆಂದು ಅವಿರತ ಶ್ರಮ ಪಡುತ್ತಿರುವ ಸೋಮು ಅವರ ಸ್ವಾಭಿಮನಿ ಬದುಕಿಗೆ ನಮ್ಮ ಕೈಲಾದ ಸಹಾಯ ಅದಾಗಬಲ್ಲದು.
ನಮ್ಮ ಸಂಸಾರದಲ್ಲಿ ಸೋಮು ಅವರಂತಹ ಇಂತಹ ಚಿಕ್ಕ ಚಿಕ್ಕ ದೀಪಗಳೇ ಕುಲ ಸಂಸಾರದ ನಿಜ ಕುಲದೀಪಗಳು ಎಂಬುದರಲ್ಲಿ ಸಂಶಯವಿಲ್ಲ.
ನಿಮ್ಮ ಮನೆಗಳಲ್ಲಿ ಬೆತ್ತದ ಕುರ್ಚಿಗಳಿವೆಯೇ? ದಿವಾನಗಳಿವೆಯೇ? ಕನಿಷ್ಠ, ಝೂಲಾ ಇರಬಹುದಲ್ಲ? ಅಥವಾ ಅದಕ್ಕೆ ಸಂಬಂಧಿಸಿದ ಯಾವುದಾದರೂ ಅಲಂಕಾರಿಕ ಉಪಕರಣಗಳಿವೆಯೇ? ಹಳೆಯ ಮನೆಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಬೆತ್ತ ಈಗ ಹೊಸ ಮೆನಗಳಲ್ಲಿ ಅಲಂಕಾರಿಕ ವಸ್ತುವಾಗಿ ಪರಿಣಮಿಸಿದೆ. ಬೆತ್ತ ರೂಪದಿಂದ ಈ ಮನಸೆಳೆಯುವ ಅಲಂಕಾರಿಕ ರೂಪಕ್ಕೆ ತಂದವರ ಪರಿಶ್ರಮ ಎಷ್ಟಿರಬೇಕು? ಅದು ಅಮೂಲ್ಯವಾದುದು.
ಬೆತ್ತವನ್ನು ನೇಯುವ ಕುಶಲಕರ್ಮಿಗಳು ಮೂಲತ: ಕೇರಳದ ಅಲವಾಡಿ ಊರಿನವರು. ಸದ್ಯ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಕಳೆದ ಹಲವಾರು ದಶಕಗಳಿಂದ ಬಿಡಾರ ಹೂಡಿದ್ದಾರೆ. ಬೆತ್ತದಲ್ಲಿ ಕಲೆ ಅರಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಅನ್ನಕ್ಕೆ ಈ ಕಲೆ ಆಧಾರವಾದರೂ ಅಪರೂಪದ ಕಲೆಯನ್ನು ಅಪ್ರಜ್ಞಾಪೂರ್ವಕವಾಗಿ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ.
ಅವರ ಮಾತುಗಳಲ್ಲೇ ಆ ಅನುಭವ ಕೇಳಬೇಕು. "ನಮ್ಮ ಮನ್ಯಾಗ ಭಾಳ ಹಿಂದಿಂದ..ಅಂದ್ರ ಅಜ್ಜಾ-ಅಮ್ಮಗಳ ಕಾಲದಿಂದ ಈ ಬೆತ್ತ ನೇಯ್ಯುವ ಕೆಲಸ ಮಾಡಕೋತ ಬಂದಾರ. ನಮಗೂ ಸಾಲಿ ಬದ್ಲಿ ಈ ಕೆಲಸಾನ ಹೆಚ್ಚ ಒತ್ತಕೊಟ್ಟು ಕಲಿಸ್ಯಾರ. ನಮಗ ಈ ಕೆಲಸ ಬಿಟ್ರ..ಉಳದ ಯಾವ ಕೆಲಸ ಅಷ್ಟಕಷ್ಟ. ಆದ್ರ ನಮಗ ಬೇಕಾಗಿರೋ ಬೆತ್ತ ಈಗ ಸಿಗಾಕತಿಲ್ಲ. ಇಂದು ಇಲ್ಲೆ ನಾಳೆ ಮತ್ತೊಂದ ಕಡೆ. ಹೀಂಗ ಈ ಕಲೆಯನ್ನ ಕೈಗೆತ್ತಿಕೊಂಡು ಜೀವನ ಸಾಗಿಸ್ತಿದ್ದೇವೆ" ಅವರ ಮನದಾಳದ ಮಾತುಗಳಿವು.
ಅವರದು ಅವಿಭಕ್ತ ಕುಟುಂಬ. ದಿವಾನ, ಸೋಫಾ, ಟಿಪಾಯಿ, ಮಕ್ಕಳ ಖುರ್ಚಿಗಳು, ಜೋಕಾಲಿ ಹೀಗೆ ಬೆತ್ತದಿಂದ ಎಲ್ಲ ರೀತಿಯ ಉಪಯುಕ್ತ ಅಲಂಕಾರಿಕ ವಸ್ತುಗಳನ್ನು ಅವರು ತಯಾರಿಸುತ್ತಾರೆ. ಅವರು ಬಹಳ ಕಷ್ಟಪಟ್ಟು ತಯಾರಿಸಿದ ಉಪಕರಣಗಳನ್ನು ಮಧ್ಯವರ್ತಿಗಳು ಬಹಳ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮಾರುಕಟ್ಟೆಯ ಏರಿಳಿತಗಳ ಬಗ್ಗೆ, ವ್ಯವಹಾರದ ಅಂದಾಜು ಇವರಿಗೆ ಸರಿಯಾಗಿ ತಿಳಿದಿಲ್ಲ. ಹಾಗೆಯೇ ಮೊದಲು ಅರಣ್ಯ ಇಲಾಖೆ ಇವರಿಗೆ ಬೆತ್ತದ ಕಚ್ಚಾಸಾಮಗ್ರಿಗಳನ್ನು ಒದಗಿಸುತ್ತಿತ್ತು. ಆದರೆ ಇಂದು ಇಲಾಖೆ ಬೆತ್ತದ ಪೂರೈಕೆಯನ್ನು ಮಿತಿಗೊಳಿಸಿದೆ. ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಸೇರಿ ಈ ಕರಕುಶಲ ಕೆಲಸ ಮಾಡುತ್ತಾರೆ.ಆದರೆ ದೊಡ್ಡ ಕೈಗಾರಿಕೆಗಳ ಪೈಪೋಟಿ ಬೇರೆ ಇವರನ್ನು ಸದಾ ಕಾಡುತ್ತಿದೆ.
ಇಂಥವರನ್ನು ನೋಡಬೇಕೆ? ಮಾತನಾಡಿಸಬೇಕೆ ಅಂತಹ ಒಬ್ಬ ವಿಶಿಷ್ಟ ಶ್ರಮ ಜೀವಿಯನ್ನು? ಧಾರವಾಡದ ಗಾಂಧಿನಗರಕ್ಕೆ ಬನ್ನಿ. ನೋಡಲು ಆಕಷರ್ಕವಾಗಿ ಕಾಣುವ ಸಾಣಿಗೆಗಳು, ಅಷ್ಟೆ ಸುಂದರವಾದ ಸೇರುಗಳು. ಕೂಡಲೇ ಮನೆಗೆ ಕೊಂಡೊಯ್ಯಬೇಕು ಎಂಬ ತುಡಿತ ನಿಮ್ಮಲ್ಲಿ ಉಂಟಾಗದೇ ಇರದು. ಹುಟ್ಟಿದಾರಭ್ಯ ಪೋಲಿಯೊ ಪೀಡಿತನಾದರೂ ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಮುಂದುವರೆಸಿಕೊಂಡು ಬಂದ ಸೋಮಶೇಖರ್ ಅವರ ಉತ್ಸಾಹ ಮೆಚ್ಚುವಂತಹದು.
ಎಲ್ಲವೂ ಸರಿಯಾಗಿದ್ದರೂ, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾಡುವ ನಾವು ಈತನಿಂದ ಕಲಿಯಬೇಕಾದದ್ದು ಬಹಳವಿದೆ. ಒಂದು ಕಾಲನ್ನು ಪೋಲಿಯೊದಿಂದ ಕಳೆದುಕೊಂಡು ಅಂಗವಿಕಲನಾಗಿರುವ ಸೋಮಶೇಖರ್ ಸಾಣಿಗೆಗಳನ್ನು ತಯಾರಿಸಿ ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಾರೆ.
ಸೋಮಶೇಖರ್ ಮೂಲತ: ಶಿವಮೊಗ್ಗ ಜಿಲ್ಲೆಯವರು. ಅವರು ಅಂಡಿಜೋಗಿ ಜನಾಂಗಕ್ಕೆ ಸೇರಿದವರು. ಮರಾಠಿ ಭಾಷೆಯಲ್ಲಿ ಮಾತು. ಕಳೆದ ೨ ವರ್ಷಗಳಿಂದ ಧಾರವಾಡದ ಗಾಂಧಿನಗರದಲ್ಲಿ ನೆಲೆಸಿ ಸಾಣಿಗೆಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಲೆಯನ್ನು ಕಂಡು ಮಾನವೀಯತೆ ದೃಷ್ಟಿಯಿಂದ ಗಾಂಧಿನಗರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಮೀಟಿಯವರು ಬ್ಯಾಂಕ್ ಎದುರಿಗಿನ ಜಾಗವನ್ನು ಯಾವುದೇ ಬಾಡಿಗೆ ಇಲ್ಲದೆ ಕೊಟ್ಟಿದ್ದಾರೆ.ಸೋಮಶೇಖರ್ ಅವರಿಗೆ ೩ ಜನ ಮಕ್ಕಳು, ಮಕ್ಕಳು ವಿದ್ಯಾವಂತರಾಗಬೇಕೆಂದು ಗಾಂಧಿನಗರದ ಶಾಲೆಗೆ ಸೇರಿಸಿದ್ದಾರೆ. ಗುಡಿಸಿಲಿನಲ್ಲಿ ವಿದ್ಯುತ್ ದೀಪವಿಲ್ಲ. ಸೀಮೆ ಎಣ್ಣೆ ಅಥವಾ ಕ್ಯಾಂಡಲ್ ನಿಂದ ಬೆಳಕು. ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಡಜನರಿಗಾಗಿ ಐಶ್ವರ್ಯ ಸೌರವಿದ್ಯುದೀಪಗಳನ್ನು (Microfinancing Scheme) ಅಡಿಯಲ್ಲಿ ಕೊಡಮಾಡುತ್ತಿದೆ.ಇವರಿಗೊಂದು ದೊರಕಿಸುಕೊಡಬಹುದೇ?
ಕಿರಾಣಿ ಅಂಗಡಿ, ಹೊಟೆಲ್ಗಳಲ್ಲಿ ಇರುವ ತಗಡಿನ ಡಬ್ಬಿಗಳು, ಎಣ್ಣೆಯ ವ್ಯಾಪಾರಸ್ಥರ ಅಂಗಡಿಗಳಲ್ಲಿನ ಮಂಡಿಗಳು ಇವರ ಕಚ್ಚಾ ವಸ್ತುಗಳು.ಈ ತಗಡಿನ ಡಬ್ಬಿಗಳನ್ನು ಸುತ್ತಿಗೆಯಿಂದ ಹೊಡೆದು ಚೌಕಾಕಾರವಾಗಿ ಮಾಡಿ ಸಾಣಿಗೆ , ಹೆರೆಮಣೆ, ಬೇಕರಿ ಟ್ರೇ, ಕೇಕ್ ಬಾಕ್ಸ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ.
ಈಗಿನ ಯಾಂತ್ರಿಕ ಯುಗದಲ್ಲಿ ಮಿಕ್ಸರ-ಗ್ರ್ಯಾಂಡರ್, ಪ್ಯಾಕ್ಡ್ ಫುಡ್ ಭರ್ಜರಿ ಬಳಕೆಯಲ್ಲಿವೆ. ಸಾಣಿಗೆಗಳ ಮಾರಾಟ ಹೇಗೆ? ಎಂದು ಕೇಳಿದರೆ, ಫ್ಯಾಕ್ಟರಿ ಸಾಣಿಗೆಗಳಲ್ಲಿ ಬಹಳ ದೊಡ್ಡ-ದೊಡ್ಡ ರಂಧ್ರಗಳಿರುವುದರಿಂದ ಬೇಡಿಕೆ ಕಡಿಮೆ. ತಮ್ಮ ಸಾಣಿಗೆಗಳಿಗೆ ಬೇಡಿಕೆ ಹೆಚ್ಚು. ಅಲ್ಲದೇ ಹಳ್ಳಿಗಾಡಿನ ಪ್ರದೇಶದಲ್ಲಿ ಜನರು ಹೆಚ್ಚು-ಹೆಚ್ಚು ಕೊಂಡುಕೊಳ್ಳುತ್ತಾರೆ. ಅದೇ ರೀತಿ ಬೇಕರಿಗಳಲ್ಲಿ ಉಪಯೋಗಿಸುವ ಬೇಕರಿ ಟ್ರೇ, ಕೇಕ್ ಬಾಕ್ಸ್ ಮೌಲ್ಡ್ ಗೂ ಅಲ್ಪ-ಸಲ್ಪ ಬೇಡಿಕೆ ಇದೆ ಎನ್ನುತ್ತಾರೆ ಸೋಮಶೇಖರ.
೨೫ ತಗಡಿನ ಡಬ್ಬಿಗಳನ್ನು ಸಾಣಿಗೆಯಾಗಿ ಮಾಡಲು ೩ ದಿನ ಬೇಕಾಗುತ್ತದೆ. ೧ ದಿನಕ್ಕೆ ೫೦ ಸಾಣಿಗೆಗಳು ಮಾರಾಟವಾದ ಉದಾಹರಣೆ ಇದೆ. ಒಂದಕ್ಕೆ ಹೋಲ್ ಸೇಲ್ ದರದಲ್ಲಿ ೧೮-೨೦ ರೂಪಾಯಿಗೆ ಕೊಡುತ್ತೇವೆ. ಇದರಿಂದ ದಿನಕ್ಕೆ ೧೦೦-೧೫೦ ರೂಪಾಯಿ ಹಣ ಸಿಗುತ್ತದೆ. ಇದರಲ್ಲಿ ಖರ್ಚು ತೆಗೆದು ೮೦-೧೦೦
ರೂಪಾಯಿ ಉಳಿತಾಯವಾಗಿ ತಿಂಗಳಿಗೆ ೨೫೦೦ ರೂಪಾಯಿ ಆದಾಯ ಬರುತ್ತದೆ. ಅಂತೂ-ಇಂತೂ ಬದುಕು ಅಷ್ಟರಲ್ಲಿಯೇ ನಡೆದಿದೆ ಎಂದು ತಮ್ಮ ಸಾಹಸ ಹೇಳಿಕೊಂಡರು.
ಮಾಡುವ ಕೆಲಸಕ್ಕೆ ಸರಿಯಾಗಿ ಆದಾಯ ಬಾರದಿದ್ದರೆ ಕೈಕಟ್ಟಿ ಕುಳಿತುಕೊಳ್ಳದೇ ಛತ್ರಿ ರಿಪೇರಿ, ಬೀಗ ರಿಪೇರಿ, ಹಾಗೂ ಬ್ಯಾಟರಿ ರಿಪೇರಿಗಳನ್ನು ಊರು-ಊರುಗಳಿಗೆ ಹೋಗಿ ರಿಪೇರಿ ಮಾಡಿ ಜೀವನ ನಡೆಸುತ್ತೇನೆ ಎಂದು ಉತ್ಸಾಹಿ ಯುವಕ ಟಿ.ಸೋಮಶೇಖರ ಹೇಳುತ್ತಾರೆ.
ಅಬ್ಬಾ! ಅವರ ಅದಮ್ಯ ಶ್ರಮ ಜೀವನಕ್ಕೆ ಹಾಗೂ ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್.
ವಸೀಮ್ ಭಾವಿಮನಿ
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.
ನಮ್ಮದು ಕೃಷಿ ಸಂಸ್ಕೃತಿ ರಾಷ್ಟ್ರ. ಇಲ್ಲಿ ಕೃಷಿ ವ್ಯವಹಾರ ಅಲ್ಲ. ರೈತ ತನ್ನ ಜೀವನೋಪಾಯಕ್ಕಾಗಿ ಕಂಡುಕೊಂಡ ಉದ್ಯೋಗ ವ್ಯವಸಾಯ. ಆದರೆ ಅಭಿವೃದ್ಧಿ ರಥದ ಅಡಿಯಲ್ಲಿ ಸಿಲುಕಿದ ರೈತಾಪಿ ವರ್ಗ, ‘ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂಬುವಂತೆ ಬಿಂಬಿಸಲ್ಪಟ್ಟು, ದೇಶ ನಡೆಸುವ ನೊಗವನ್ನೇ ಹೊತ್ತಂತೆ ಯೋಚಿಸಿದೆವು.