ಕಾಯಕದಲ್ಲಿ ಕೈಲಾಸ ಕಾಣುವ ಟಿ. ಸೋಮಶೇಖರ

Thursday, March 5, 2009

ಲ್ಲಾರು ಮಾಡುವುದು ಹೊಟ್ಟೆಗಾಗಿ.. ಗೇಣು ಬಟ್ಟೆಗಾಗಿ’ ಈ ಮಾತು ನಿತ್ಯ ಸತ್ಯ. ಆದರೆ ಇದೇ ಕಾಯಕವನ್ನು ಶೃದ್ಧೆಯಿಂದ ಮಾಡಿದಾಗ ವಿಶೇಷವಾದುದನ್ನು ಸಾಧಿಸಲು ಸಾಧ್ಯ. ಸಮಾಜ ಇಂತಹ ಸಾಧಕರನ್ನು ಗಮನಿಸುತ್ತದೆ. ತಕ್ಕ ಮಟ್ಟಿಗೆ ಗೌರವಿಸುತ್ತದೆ. ಆದರೆ ಅವರಿಗೆ ಪ್ರಸಿದ್ಧಿ ಸಿಕ್ಕಿರಲಿಕ್ಕಿಲ್ಲ. ಅವರು ಹೋರಾಟದ ಬದುಕಿಗೊಂದು ಭಾಷ್ಯ ಬರೆಯಬಲ್ಲವರು. ಅವರ ಹೋರಾಟದ ಹಾದಿ, ಬದುಕು ಇತರರಿಗೆ ಮಾದರಿ.

ಇಂಥವರನ್ನು ನೋಡಬೇಕೆ? ಮಾತನಾಡಿಸಬೇಕೆ ಅಂತಹ ಒಬ್ಬ ವಿಶಿಷ್ಟ ಶ್ರಮ ಜೀವಿಯನ್ನು? ಧಾರವಾಡದ ಗಾಂಧಿನಗರಕ್ಕೆ ಬನ್ನಿ. ನೋಡಲು ಆಕಷರ್ಕವಾಗಿ ಕಾಣುವ ಸಾಣಿಗೆಗಳು, ಅಷ್ಟೆ ಸುಂದರವಾದ ಸೇರುಗಳು. ಕೂಡಲೇ ಮನೆಗೆ ಕೊಂಡೊಯ್ಯಬೇಕು ಎಂಬ ತುಡಿತ ನಿಮ್ಮಲ್ಲಿ ಉಂಟಾಗದೇ ಇರದು. ಹುಟ್ಟಿದಾರಭ್ಯ ಪೋಲಿಯೊ ಪೀಡಿತನಾದರೂ ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಮುಂದುವರೆಸಿಕೊಂಡು ಬಂದ ಸೋಮಶೇಖರ್ ಅವರ ಉತ್ಸಾಹ ಮೆಚ್ಚುವಂತಹದು.

ಎಲ್ಲವೂ ಸರಿಯಾಗಿದ್ದರೂ, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾಡುವ ನಾವು ಈತನಿಂದ ಕಲಿಯಬೇಕಾದದ್ದು ಬಹಳವಿದೆ. ಒಂದು ಕಾಲನ್ನು ಪೋಲಿಯೊದಿಂದ ಕಳೆದುಕೊಂಡು ಅಂಗವಿಕಲನಾಗಿರುವ ಸೋಮಶೇಖರ್ ಸಾಣಿಗೆಗಳನ್ನು ತಯಾರಿಸಿ ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಾರೆ.

ಸೋಮಶೇಖರ್ ಮೂಲತ: ಶಿವಮೊಗ್ಗ ಜಿಲ್ಲೆಯವರು. ಅವರು ಅಂಡಿಜೋಗಿ ಜನಾಂಗಕ್ಕೆ ಸೇರಿದವರು. ಮರಾಠಿ ಭಾಷೆಯಲ್ಲಿ ಮಾತು. ಕಳೆದ ೨ ವರ್ಷಗಳಿಂದ ಧಾರವಾಡದ ಗಾಂಧಿನಗರದಲ್ಲಿ ನೆಲೆಸಿ ಸಾಣಿಗೆಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಲೆಯನ್ನು ಕಂಡು ಮಾನವೀಯತೆ ದೃಷ್ಟಿಯಿಂದ ಗಾಂಧಿನಗರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಮೀಟಿಯವರು ಬ್ಯಾಂಕ್ ಎದುರಿಗಿನ ಜಾಗವನ್ನು ಯಾವುದೇ ಬಾಡಿಗೆ ಇಲ್ಲದೆ ಕೊಟ್ಟಿದ್ದಾರೆ.ಸೋಮಶೇಖರ್ ಅವರಿಗೆ ೩ ಜನ ಮಕ್ಕಳು, ಮಕ್ಕಳು ವಿದ್ಯಾವಂತರಾಗಬೇಕೆಂದು ಗಾಂಧಿನಗರದ ಶಾಲೆಗೆ ಸೇರಿಸಿದ್ದಾರೆ. ಗುಡಿಸಿಲಿನಲ್ಲಿ ವಿದ್ಯುತ್ ದೀಪವಿಲ್ಲ. ಸೀಮೆ ಎಣ್ಣೆ ಅಥವಾ ಕ್ಯಾಂಡಲ್ ನಿಂದ ಬೆಳಕು. ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಡಜನರಿಗಾಗಿ ಐಶ್ವರ್ಯ ಸೌರವಿದ್ಯುದೀಪಗಳನ್ನು (Microfinancing Scheme) ಅಡಿಯಲ್ಲಿ ಕೊಡಮಾಡುತ್ತಿದೆ.ಇವರಿಗೊಂದು ದೊರಕಿಸುಕೊಡಬಹುದೇ?

ಕಿರಾಣಿ ಅಂಗಡಿ, ಹೊಟೆಲ್ಗಳಲ್ಲಿ ಇರುವ ತಗಡಿನ ಡಬ್ಬಿಗಳು, ಎಣ್ಣೆಯ ವ್ಯಾಪಾರಸ್ಥರ ಅಂಗಡಿಗಳಲ್ಲಿನ ಮಂಡಿಗಳು ಇವರ ಕಚ್ಚಾ ವಸ್ತುಗಳು.ಈ ತಗಡಿನ ಡಬ್ಬಿಗಳನ್ನು ಸುತ್ತಿಗೆಯಿಂದ ಹೊಡೆದು ಚೌಕಾಕಾರವಾಗಿ ಮಾಡಿ ಸಾಣಿಗೆ , ಹೆರೆಮಣೆ, ಬೇಕರಿ ಟ್ರೇ, ಕೇಕ್ ಬಾಕ್ಸ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ.

ಈಗಿನ ಯಾಂತ್ರಿಕ ಯುಗದಲ್ಲಿ ಮಿಕ್ಸರ-ಗ್ರ್ಯಾಂಡರ್, ಪ್ಯಾಕ್ಡ್ ಫುಡ್ ಭರ್ಜರಿ ಬಳಕೆಯಲ್ಲಿವೆ. ಸಾಣಿಗೆಗಳ ಮಾರಾಟ ಹೇಗೆ? ಎಂದು ಕೇಳಿದರೆ, ಫ್ಯಾಕ್ಟರಿ ಸಾಣಿಗೆಗಳಲ್ಲಿ ಬಹಳ ದೊಡ್ಡ-ದೊಡ್ಡ ರಂಧ್ರಗಳಿರುವುದರಿಂದ ಬೇಡಿಕೆ ಕಡಿಮೆ. ತಮ್ಮ ಸಾಣಿಗೆಗಳಿಗೆ ಬೇಡಿಕೆ ಹೆಚ್ಚು. ಅಲ್ಲದೇ ಹಳ್ಳಿಗಾಡಿನ ಪ್ರದೇಶದಲ್ಲಿ ಜನರು ಹೆಚ್ಚು-ಹೆಚ್ಚು ಕೊಂಡುಕೊಳ್ಳುತ್ತಾರೆ. ಅದೇ ರೀತಿ ಬೇಕರಿಗಳಲ್ಲಿ ಉಪಯೋಗಿಸುವ ಬೇಕರಿ ಟ್ರೇ, ಕೇಕ್ ಬಾಕ್ಸ್ ಮೌಲ್ಡ್ ಗೂ ಅಲ್ಪ-ಸಲ್ಪ ಬೇಡಿಕೆ ಇದೆ ಎನ್ನುತ್ತಾರೆ ಸೋಮಶೇಖರ.

೨೫ ತಗಡಿನ ಡಬ್ಬಿಗಳನ್ನು ಸಾಣಿಗೆಯಾಗಿ ಮಾಡಲು ೩ ದಿನ ಬೇಕಾಗುತ್ತದೆ. ೧ ದಿನಕ್ಕೆ ೫೦ ಸಾಣಿಗೆಗಳು ಮಾರಾಟವಾದ ಉದಾಹರಣೆ ಇದೆ. ಒಂದಕ್ಕೆ ಹೋಲ್ ಸೇಲ್ ದರದಲ್ಲಿ ೧೮-೨೦ ರೂಪಾಯಿಗೆ ಕೊಡುತ್ತೇವೆ. ಇದರಿಂದ ದಿನಕ್ಕೆ ೧೦೦-೧೫೦ ರೂಪಾಯಿ ಹಣ ಸಿಗುತ್ತದೆ. ಇದರಲ್ಲಿ ಖರ್ಚು ತೆಗೆದು ೮೦-೧೦೦

ರೂಪಾಯಿ ಉಳಿತಾಯವಾಗಿ ತಿಂಗಳಿಗೆ ೨೫೦೦ ರೂಪಾಯಿ ಆದಾಯ ಬರುತ್ತದೆ. ಅಂತೂ-ಇಂತೂ ಬದುಕು ಅಷ್ಟರಲ್ಲಿಯೇ ನಡೆದಿದೆ ಎಂದು ತಮ್ಮ ಸಾಹಸ ಹೇಳಿಕೊಂಡರು.

ಮಾಡುವ ಕೆಲಸಕ್ಕೆ ಸರಿಯಾಗಿ ಆದಾಯ ಬಾರದಿದ್ದರೆ ಕೈಕಟ್ಟಿ ಕುಳಿತುಕೊಳ್ಳದೇ ಛತ್ರಿ ರಿಪೇರಿ, ಬೀಗ ರಿಪೇರಿ, ಹಾಗೂ ಬ್ಯಾಟರಿ ರಿಪೇರಿಗಳನ್ನು ಊರು-ಊರುಗಳಿಗೆ ಹೋಗಿ ರಿಪೇರಿ ಮಾಡಿ ಜೀವನ ನಡೆಸುತ್ತೇನೆ ಎಂದು ಉತ್ಸಾಹಿ ಯುವಕ ಟಿ.ಸೋಮಶೇಖರ ಹೇಳುತ್ತಾರೆ.

ಅಬ್ಬಾ! ಅವರ ಅದಮ್ಯ ಶ್ರಮ ಜೀವನಕ್ಕೆ ಹಾಗೂ ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್.

ವಸೀಮ್ ಭಾವಿಮನಿ
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.

0 comments:

Post a Comment