ಬೇಸಿಗೆ ಎಂದು ಮರುಗದಿರಿ..ತಂಪೆರೆಯಲು ಮುರುಗಲಿದೆ.

Friday, March 13, 2009

ಭೂಮಿ ಜೀವಿಗಳಿಗೆ ಅಸಹ್ಯವಾಗುತ್ತಿದೆ. ತಾಪಮಾನದ ಏರಿಕೆಯಿಂದ ಬದುಕು ಅಸಹನೀಯವಾಗುತ್ತಿದೆ. ಭೂಮಿಗೆ ಜ್ವರ ಬಂದಿದೆ, ನೆತ್ತಿ ಕೆಂಪಾಗಿದೆ ಹೀಗೆ ವಿಶೇಷ ವಿಶ್ಲೇಷಣೆಗಳನ್ನು ತಜ್ಞರು ಮಾಧ್ಯಮಗಳಲ್ಲಿ ತೂರಿ ಬಿಡುತ್ತಿದ್ದಾರೆ. ಈಗ ಈ ವಿಷಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ವಿಶ್ವವ್ಯಾಪಿ ವಿದ್ಯಮಾನವಾಗಿ ಪರಿಣಮಿಸಿದೆ.



ಜಾಗತಿಕ ತಾಪಮಾನದ ಬಿಸಿ ಮಾತ್ರ ಪ್ರತಿಯೊಬ್ಬರನ್ನು ತಟ್ಟುತ್ತಿದೆ. ವಯುಕ್ತಿಕ ಮಟ್ಟದಲ್ಲಿ ಈ ಸಮಸ್ಯೆಯನ್ನು ಹುಟ್ಟು ಹಾಕಿ, ಜಾಗತಿಕ ಹಂತ ತಲುಪಿರುವ ನಾವು ಈಗ ಬೇರು ಮಟ್ಟದಿಂದ ಈ ಸಮಸ್ಯೆ ಬಗೆಹರಿಸಿಕೊಳ್ಳುವದು ಹೇಗೆ?
ನಮ್ಮದೇ ಆದ ಮನೆಮದ್ದು ಅಥವಾ ಪಾರಂಪರಿಕ ಜ್ಞಾನಕ್ಕೆ ಮೊರೆ ಹೋಗುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತಮಗೆ ಆಶ್ಚರ್ಯವಾಯಿತೇ? ಬೇಸಿಗೆಯ ಬೇಗೆ ತಣಿಸಲು ಮುರುಗಲು ಪೇಯ ಈಗ ವಿಶೇಷ ಸ್ಥಾನ ಪಡೆಯುತ್ತಿದೆ.

ಆದಿ ಕಾಲದಿಂದಲೂ ಮುರುಗಲು ಹಣ್ಣಿನ ಬಗ್ಗೆ ಸಾಕಷ್ಟು ಉಲ್ಲೇಖವಿತ್ತಾದರೂ ಪ್ರಸಿದ್ಧ ತಂಪು ಪಾನೀಯಗಳಿಗೆ ಹಾಗು ಅನ್ಯ ದೇಶಿಯ ಪಾನೀಯಗಳಿಗೆ ಹೋಲಿಸಿದರೆ ಮುರುಗಲು ಪೇಯ ಜಗಜಾಹೀರಾಗಲು ಇನ್ನೂ ಶತಮಾನಗಳೇ ಉರಳಬೇಕೆನೋ?
ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಆಸರೆಗೆಂದು ‘ಕೋಕಂ’ ಬಳಸುವುದು ಖಾಯಂ. ಈ ಮುರುಗಲು ಹಣ್ಣಿನ ಪೇಯ ಪ್ರತಿ ಮನೆಯಲ್ಲಿ ಬೇಸಿಗೆಯ ಆದರಾಥಿತ್ಯದ ಸಂಕೇತ. ಈಗೀಗ ಕರ್ನಾಟಕದ ಹಲವೆಡೆ ತೀವ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ತಂಪು ಪಾನೀಯ ಕೋಕಂ ಎನ್ನಬಹುದು.
ಈ ಮುರುಗಲು ಪೇಯವನ್ನು ತಯಾರಿಸುವುದು ಹೇಗೆ? ಕೇವಲ ಹಣ್ಣುಗಳನ್ನು ಗಿಡದಿಂದ ಕಿತ್ತು ತಂದ ಮಾತ್ರಕ್ಕೆ ಕೋಕಂ ತಯಾರಾಗುವದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಹಣ್ಣುಗಳು ಲಭ್ಯ. ಸಾಧಾರಣವಾಗಿ ಎಪ್ರೀಲ್- ಮೇ ತಿಂಗಳಿನಲ್ಲಿ ಮುರುಗಲ ಗಿಡಗಳು ಫಲ ಕೊಡಲು ಪ್ರಾರಂಭಿಸುತ್ತವೆ.

ಗಿಡದಿಂದ ಕಿತ್ತು ತಂದ ನಂತರ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸುವ ಕೆಲಸ ಆಗಬೇಕು. ತಂಪು ಪಾನೀಯ ತಯಾರಿಸುವಾಗ ಈ ಹಣ್ಣಿನ ಬೀಜಗಳು ಅಪ್ರಯೋಜನಕಾರಿ. ಇಲ್ಲಿ ಹಣ್ಣಿನ ತಿರುಳು ಹಾಗು ಸಿಪ್ಪೆಗಳೇ ನಮಗೆ ಕೋಕಂ ಆಗುವ ಸರಕುಗಳು. ಸಿಪ್ಪೆಯನ್ನು ಅದರ ಗಾತ್ರದ ಅನುಸಾರ ಅಂದರೆ ೧ ಕಿಲೋ ಸಿಪ್ಪೆಗೆ ೪ ಲೀಟರ್ ನೀರನ್ನು ಹಾಕಿ ಹದ ಮಾಡಿಟ್ಟು, ೧೦ ರಿಂದ ೧೫ ದಿನಗಳವರೆಗೆ ಸೂರ್ಯನ ಬಿಸಿಲಿಗೆ ಒಡ್ಡಬೇಕು. ಪಾತ್ರೆಯ ಬಾಯಿಗೆ ಬಟ್ಟೆ ಕಟ್ಟಿ ಒಣಗಿಸಲೂ ಬಹುದು. ನಂತರ ಅದನ್ನು ಬಾಣಲೆ ಅಥವಾ ಪಾತ್ರೆಯಲ್ಲಿ ಹಾಕಿ ಗಾಳಿಯಾಡದಂತೆ ಇಡಬೇಕು. ಅವಶ್ಯಕತೆ ಬಿದ್ದಾಗ ಒಂದು ಲೋಟ ನೀರಿಗೆ ೨ ಚಮಚ ಕೋಕಂ ರಸ ಸೇರಿಸಿ ತುಸು ಶೈತ್ಯಾಗಾರದಲ್ಲಿಟ್ಟು ನೀಡಿದರೆ ದಾಹ ಇಂಗಿಸಿ, ಆರೋಗ್ಯಸಹ ವೃದ್ಧಿಸುತ್ತದೆ.

ನೀರನ್ನು ಹಾಕದೇ ಮುರುಗಲ ಹಣ್ಣಿನ ಸಿಪ್ಪೆಗಳನ್ನು ಸೂರ್ಯನ ಬಿಸಿಲಿಗೆ ಒಣಗಿಸಿಟ್ಟರೆ ೨-೩ ವರ್ಷಗಳ ಕಾಲ ಅದು ಹಾಳಾಗದೇ ಉಳಿಯುತ್ತದೆ.

ಕೋಕಂ ಕೇವಲ ಪಾನೀಯವಾಗಿ ಮಾತ್ರವಲ್ಲದೇ ಮಲೆನಾಡಿನ ನಮ್ಮ ಹವ್ಯಕರ ಮನೆಗಳಲ್ಲಿ ಊಟದಲ್ಲಿ ಅನ್ನದೊಂದಿಗೆ ತಂಬುಳಿಯಾಗಿಯೂ ಬಳಕೆಯಲ್ಲಿದೆ. ಕೆಲವು ಉಷ್ಣ ರೋಗಗಳಿಗೂ, ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳಿಗೂ ಇದು ಅಡ್ಡಪರಿಣಾಮಗಳಿಲ್ಲದೇ ಶಮನ ಮಾಡಬಲ್ಲ ಅಯುರ್ವೇದ ಮದ್ದಾಗಿದೆ. ಈಚೆಗೆ ವಿದೇಶಗಳಿಗೂ ಈ ಮುರುಗಲು ರಫ್ತಾಗುವ ಸರಕು. ರೈತರು ತಮ್ಮ ಉಪ ಆದಾಯವನ್ನಾಗಿ ಬೇಸಿಗೆಯ ಈ ದಿನಗಳಲ್ಲಿ ಮುರುಗಲನ್ನು ಬಳಸಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ! ಹಾಗಾಗಿ ದೇಹಕ್ಕೆ ಮಾತ್ರವಲ್ಲ ಮನಕ್ಕೂ ಮುದ ನೀಡುವ ಬೆಳೆ ಮುರುಗಲು.

ಗಣಪತಿ ಹೆಗಡೆ
ಎಂ.ಎ.ಜೆ.ಎಂ. ೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

0 comments:

Post a Comment