ಬೀರವಳ್ಳಿಯ ಕೆಂಡದೋಕುಳಿಯ ವೈಶಿಷ್ಟ್ಯ

Monday, March 30, 2009

ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣವನ್ನು ಎರಚಿಕೊಂಡು ಸಂಭ್ರಮಿಸುವುದು ಎಲ್ಲೆಡೆ ಕಂಡು ಬರುವ ಸಾಮಾನ್ಯ ದೃಶ್ಯ . ಬಣ್ಣದ ಬದಲು ಉರಿಯುವ ಕೆಂಡಗಳನ್ನೇ ಎತ್ತಿ ಎರಚಿದರೆ? ನಂಬಲು ಅಸಾಧ್ಯ ಅಲ್ಲವೇ? ಆದರೆ ಇದು ನಿಜ. ಕಲಘಟಗಿ ತಾಲೂಕು ಬೀರವಳ್ಳಿ ಗ್ರಾಮದ ಕಲ್ಮೇಶ್ವರನ ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳು ಕೆಂಡದೊಕುಳಿ ಆಡಿ ಹರಕೆ ತೀರಿಸುತ್ತಾರೆ.

ಬಣ್ಣಗಳ ಬದಲು ನಿಗಿ ನಿಗಿ ಉರಿಯುತ್ತಿರುವ ಕೆಂಡಗಳನ್ನು ಎರಚಿಕೊಂಡರೆ, ಮುಂದಿನ ವರ್ಷದ ಓಕುಳಿ ಆದುವುದು ದೂರದ ಮಾತು ಬಿಡಿ; ಹಬ್ಬವನ್ನು ಸಹ ಆಚರಿಸಲು ಭಕ್ತಾದಿಗಳು ಸಬಲರಾಗಿರಲಾರರು. ನಮ್ಮ ದೇಶದಲ್ಲಿ ಪವಾಡಗಳಿ ಕೊರತೆ ಇಲ್ಲ. ಬೀರವಳ್ಳಿ ಗ್ರಾಮದಲ್ಲಿ ನಡೆಯುವ ಓಕುಳಿಯಲ್ಲಿ ಕೆಂಡಗಳನ್ನು ಪರಸ್ಪರ ಮೈಮೇಲೆರೆಚಿಕೊಂಡರೂ ಸುಟ್ಟ ಗಾಯಗಳಾಗುವುದಿಲ್ಲ. ಭಕ್ತಿ ಭಾವಗಳ ಪರವಶತೆಯಲ್ಲಿ ಭಕ್ತರು ಕೆಂಡಗಳೊಂದಿಗೆ ಓಕುಳಿ ಆಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಶ್ರೀ ಕಲ್ಮೇಶ್ವರನಿಗೆ "ಕೆಂಡದ ನೈವೇದ್ಯ" ಮಾಡುವ ಮೂಲಕ ಜಾತ್ರೆ ಆಚರಿಸುವುದು ಈ ಭಾಗದ ವಿಶೇಷ.

ಕ್ರಿಸ್ತ ಶಕೆ ೧೨ ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಅರಸು ಎರಡನೇ ವಿಕ್ರಮಾದಿತ್ಯ ಈ ದೇವಾಲಯವನ್ನು ಕಟ್ಟಿಸಿದ. ಮಲೆನಾಡಿನ ಅಂಚಿನಲ್ಲಿ ಇರುವ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಬೀರವಳ್ಳಿ ಗ್ರಾಮದ ಶ್ರೀ. ಕಲ್ಮೆಶ್ವರ ಜಾತ್ರೆ ಹೋಳಿ ಹುಣ್ಣಿಮೆ ನಂತರ ಬರುವ ಷಷ್ಠಿಯಂದು ನಡೆಯುತ್ತದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಜಾತ್ರೆ ನಡೆಯುವ ಮೊದಲು ಕಲ್ಮೇಶ್ವರ ದೇವಸ್ಥಾನದ ಎದುರು ಇರುವ ಬಯಲಿನಲ್ಲಿ ಸಮೀಪದ ಕಾಡಿನಿಂದ ಕಟ್ಟಿಗೆಗಳನ್ನು ಕಡಿದು ತಂದು ರಾಶಿ ಹಾಕಿ ಅಗ್ನಿ ಪ್ರಜ್ವಲಿಸಲಾಗುತ್ತದೆ. ಅಗ್ನಿ ದೇವ ಕಟ್ಟಿಗೆಯ ರಾಶಿಯನ್ನು ಕೆಲ ತಾಸುಗಳಲ್ಲಿ ಕೆಂಡದ ರಾಶಿಯನ್ನಾಗಿ ಪರಿವರ್ತಿಸುತ್ತಾನೆ.

ಕೆಂಡದ ರಾಶಿಯಿಂದ ಕೆಂಡಗಳನ್ನು ನೈವೇದ್ಯ ಮಾಡಿದ ನಂತರ ಊರ ಗೌಡರನ್ನು ರಾಶಿಯ ಬಳಿ ಕುಳ್ಳಿರಿಸಿ ಅವರ ಮೇಲೆ ತೆಳ್ಳನೆಯ ಬಟ್ಟೆಯನ್ನು ಹಿಡಿಯಲಾಗುತ್ತದೆ. ಅದರಲ್ಲಿ ಮರದ ಹುಟ್ಟಿನಿಂದ ಕೆಂಡಗಳನ್ನು ಹಾಕಿ ಸುತ್ತ ನಿಂತವರ ಮೇಲೆ ತೂರಲಾಗುತ್ತದೆ. ಇಲ್ಲಿಂದ ಮುಂದೆ ನಡೆಯುವುದು ಕೆಂಡದೊಕುಳಿಯ ಪರಾಕು. ಹರಕೆ ಹೊತ್ತ ಯುವಕರು ಹಾಗೂ ಗ್ರಾಮಸ್ಥರು ಕೆಂಡಗಳನ್ನು ಬರಿಗೈಯಲ್ಲಿ ಹಿಡಿದು ತೂರಲು ಆರಂಭಿಸುತ್ತಾರೆ. ಕೆಂಡವನ್ನು ಕೈಯಲ್ಲಿ ಹಿಡಿದು ತೂರುವವರಿಗಾಗಲಿ ಅಥವಾ ಮೈ ಮೇಲೆ ಕೆಂಡಗಳು ಬಿದ್ದವರಿಗಾಗಲಿ ಯಾವುದೇ ಘತವಾಗದಿರುವುದು ವಿಸ್ಮಯಕಾರಿ. ಕೆಂಡಗಳನ್ನು ಕೈಯಲ್ಲಿ ಹಿಡಿದಾಗ ಮಲ್ಲಿಗೆ ಹೂವಂತೆ ಅರಳುತ್ತವೆ ಎಂಬುದು ಗ್ರಾಮಸ್ಥರ ಶೃದ್ಧೆ.
ನಮಗೆ ಗೊತ್ತಿರುವಂತೆ ಹಿಂದೂ ಸಂಸ್ಕೃತಿ ವಿಸ್ಮಯಗಳ ಆಗರ. ಪ್ರತಿ ಹಬ್ಬಕ್ಕೊಂದು ವಿಶಿಷ್ಟ ರೀತಿಯ ಆಚರಣೆಗಳನ್ನು ಪಾಲಿಸುವುದರೊಂದಿಗೆ ಭಕ್ತರನ್ನು ಭಾವುಕರನ್ನಾಗಿಸುತ್ತದೆ. ಉದಾಹರಣೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಲಿತವಿರುವ ಸಿಡಿ ಏರುವ ಹರಕೆ. ಅದೇ ರೀತಿ ಕೆಂಡದೊಕುಳಿಯು ಸಹ ಒಂದು. ನಂಬಿಕೆಯೊಂದು ಇದ್ದರೆ ಸಾಕು ಕೆಂಡವು ಮಲ್ಲಿಗೆ ಎನ್ನುವುದಕ್ಕೆ ಬೀರವಳ್ಳಿಯ ಕೆಂಡದೊಕುಳಿ ಸಾಕ್ಷಿ. ಆಸ್ತಿಕರಿಗೆ ಇದು ವಿಶೇಷ ಓಕುಳಿ.
ಸು.ಶ್ರೀ.ಕೋಮಲ ಮೋಟಗಿ
ಪಿ.ಜಿ.ಡಿಜೆ.ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.

ಬದುಕಿಗೆ ಗೌರವದ ಭಾಷ್ಯ ಬರೆದ ಸೋಮು

Thursday, March 26, 2009

ಗೋಧೂಳಿಯ ಹೊತ್ತಿಗೆ ಎಲ್ಲ ಶಾಲೆ, ಕಾಲೇಜುಗಳು, ಕಚೇರಿಗಳು ತಮ್ಮ ದೈನಂದಿನ ಕೆಲಸವನ್ನು ಮುಗಿಸುತ್ತವೆ. ಆದರೆ ಆ ಹೊತ್ತಿಗೆ ತಮ್ಮ ಕೆಲಸ ಶುರು ಎಂದು ಭರದಿಂದ ನಮ್ಮನ್ನು ಕೈಬೀಸಿ ಕರೆಯುತ್ತಾರೆ ನಾನಾ ತಿನಿಸುಗಳ ತಳ್ಳು ಗಾಡಿಗಳ ಮಾಲೀಕರು. ಸೀಮೆ ಎಣ್ಣೆ ಅಥವಾ ಗ್ಯಾಸ್ ನಿಂದ ಉರಿಯುವ ಒಲೆಗಳಿಗೆ ಸಂಜೆಯ ಕೆಲವು ಗಂಟೆಗಳು ಬಿಡುವಿಲ್ಲದ ಕೆಲಸ. ಅಲ್ಲಿ ಹುರಿಯುವ ಶೇಂಗಾ ಕಾಳಿಗೆ, ಬೇಯುವ ಆಮ್ಲೆಟ್ ಗೆ, ಪಾನಿಪುರಿಗೆ, ಗೋಭಿ ಮಂಚೂರಿಗೆ.. ಆಹಾ ಆ ರುಚಿಗೆ ಮನಸೋಲದವರಾರು?


ಸೌತೆಕಾಯಿಯನ್ನು ಕಲಾತ್ಮಕವಾಗಿ ಕತ್ತರಿಸಿ ಖಾದ್ಯಗಳ ಮೇಲಿಟ್ಟು, ಸ್ವಲ್ಪ ನಿಂಬೆಹಣ್ಣಿನ ರಸ ಮತ್ತೆ ಖಾರದ ಪುಡಿ, ಉಪ್ಪನ್ನು ಸವರಿಕೊಟ್ಟರೂ ವ್ಯಾಪಾರಿಯ ಜೇಬು ತುಂಬುತ್ತದೆ ಅಲ್ಲವೇ? ಪಕ್ಕದಲ್ಲಿ ಪಂಚತಾರಾ ಹೊಟೇಲುಗಳಿದ್ದರೂ ಜನ ಈ ರುಚಿಗೆ ಮನಸೋತು, ತಳ್ಳು ಗಾಡಿಗಳು ತಮ್ಮ ಕೆಲಸ ಪ್ರಾರಂಭಿಸುತ್ತಿದ್ದಂತೆ ಮುಗಿ ಬೀಳಲು ಹಾತೊರೆಯುತ್ತಾರೆ. ಇದೆಂತಹ ಸಮುದಾಯ ಮೋಡಿಯ ಸಂಗತಿಯೋ ನೋಡಿ ?

ಕುರುಕಲು ತಿಂಡಿಯ ತಳ್ಳುಗಾಡಿಯವರದು ನಿತ್ಯ ಸಂಜೆ ಕೆಲವೇ ಗಂಟೆಗಳ ವ್ಯಾಪಾರ. ಅದು ಶಹರ ದೊಡ್ಡದಿರಲಿ ಅಥವಾ ಸಣ್ಣದಿರಲಿ ಜನಕೂಡ ಸಂಜೆಯ ಹೊತ್ತಿನಲ್ಲಿ ಬಿಡುವು ಮಾಡಿಕೊಂಡು ಈ ಸಂಚಾರಿ ಹೊಟೇಲುಗಳಿಗೆ ಬಂದು ತಮಗಿಷ್ಟವಾದ ಖಾದ್ಯಗಳನ್ನು ಕುಟುಂಬ ಸಮೇತ ಸೇವಿಸುತ್ತಾರೆ. ಕಡಿಮೆ ಬೆಲೆಗೆ, ಬಾಯಿ ಚಪಲಕ್ಕೆ, ರುಚಿ ರಸಿಕತೆಯಿಂದ ಹೆಚ್ಚು ತಿನ್ನಬಹುದು ಎಂಬ ಸಣ್ಣ ದುರಾಸೆಯಿಂದಲೂ ಇರಬಹುದು!

ಮೊದಲು ಇದು ಬಡವರಿಂದ, ಬಡವರಿಗಾಗಿ ನಡೆಸಲ್ಪಡುವ ‘ವಡಾಪಾವ್’ ವ್ಯಾಪಾರ ಎಂದು ಕರೆಯಲ್ಪಡುತ್ತಿತ್ತು. ಈಗ ಎಲ್ಲ ವರ್ಗದ ಜನರಿಗೂ ಇದು ಆಕರ್ಷಣೀಯವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ ತಳ್ಳುಗಾಡಿಯನ್ನೇ ಬದುಕಿಗೆ ಆಧಾರವನ್ನಾಗಿರಿಸಿಕೊಂಡಿರುವ ಸೋಮು ಕುಮುಟಾದಿಂದ ಬಂದು ಇಲ್ಲಿ ನೆಲೆಸಿದವರು. ಮೊದಲು ಹುಬ್ಬಳ್ಳಿಯ ಎ.ಪಿ.ಎಮ್.ಸಿಯಲ್ಲಿ ಅವರಿಗೆ ಒಂದು ತಳ್ಳುಗಾಡಿ ಇತ್ತು. ಅದರಲ್ಲಿ ಮೋಟೆಯನ್ನು ಹೊತ್ತು ಅಂಗಡಿಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ಅದರೆ ಒಂದು ಸಣ್ಣ ಅಪಘಾತವಾಗಿ ಆ ಗಾಡಿ ಮುರಿದು ಹೋಯಿತು. ಅದನ್ನು ರಿಪೇರಿ ಮಾಡಿದರೂ ಅದು ಮೋಟೆಗಳನ್ನು ಎಳೆಯುವಂತಿರಲಿಲ್ಲ. ಅದರ ಚಕ್ರ ಸಂಪೂರ್ಣ ಮುರಿದಿತ್ತು. ಅದನ್ನು ಹಾಕಿಸುವ ಹಣವು ಅವರಲ್ಲಿ ಇರಲಿಲ್ಲ.

ಹಾಗಾಗಿ ಗಾಡಿಯನ್ನು ನಿಂತಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದು ಅನಿವಾರ್ಯವಾಯಿತು. ಆಗ ಅವರಿಗೆ ಹೊಳೆದದ್ದು ಈ ವ್ಯಾಪಾರ. ಹಾಗಾದರೆ ಹೇಗಿದೆ ಇವರ ವ್ಯಾಪಾರ? ಉತ್ತರಿಸುವಾಗ ಸೋಮು ಮುಖದಲ್ಲಿ ಕೊಂಚ ನಗು ಮೂಡುತ್ತದೆ. ವ್ಯಾಪಾರದ ಗುಟ್ಟು ಬಿಟ್ಟುಕೊಡದ ಜಾಣ್ಮೆ ಅವರಲ್ಲಿದೆ. "ಎ.ಪಿ.ಎಂ.ಸಿ ಯಲ್ಲಿ ಗಾಡಿ ತಳ್ಳುತ್ತಿದ್ದಾಗ ದಿನಕ್ಕೆ ೧೦೦ ರೂಪಾಯಿ ಸಿಗುತ್ತಿರಲಿಲ್ಲ. ಆದರೆ ಈಗ ಮಗನಿಗೆ ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ಮಗಳು ಎಮ್.ಎಸ್.ಡಬ್ಲು ಓದುತ್ತಿದಾಳೆ. ಒಂದು ಚಿಕ್ಕ ಸೂರು ಸಹ ಕಟ್ಟಿಕೊಂಡಿದ್ದೇನೆ" ಎಂದು ಧನ್ಯತೆ ಮೆರೆಯುತ್ತಾರೆ.

ಈ ತಳ್ಳು ಗಾಡಿಗಳು ಸೋಮು ಅವರಂತೆ ಪ್ರಾಮಾಣಿಕವಾಗಿ ದುಡಿದು, ಸ್ವಾವಲಂಬಿಯಾಗಿ ಬದುಕಬೇಕು ಎಂಬುವವರಿಗೆ ಪ್ರೇರಣಾದಾಯಿ. ಕಡಿಮೆ ಬಂಡವಾಳ, ಹೆಚ್ಚು ಲಾಭ ಬಯಸುವವರಿಗೆ ಅನುಕೂಲಕರವಾಗಿದೆ. ಈ ಗಾಡಿ ಬಳಸಿ ವ್ಯಾಪಾರ, ವ್ಯವಹಾರ ಮಾಡುವುದಕ್ಕೆ ಪರವಾನಗಿ ಶುಲ್ಕವೆಂದು ೨೫/- ರಿಂದ ೧೦೦/- ವರೆಗೆ ಕರ ವಿಧಿಸಲಾಗುತ್ತದೆ. ಬ್ಯಾಂಕುಗಳು ಕೂಡಾ ಈ ಗಾಡಿಯನ್ನು ಖರೀದಿಸಲು ಸಾಲವನ್ನು ನೀಡುತ್ತವೆ.

ಕಾಯಿದೆ ಪ್ರಕಾರ ಒಂದು ಕಡೆ ನಿಲ್ಲದೇ ನಿರಂತರ ಜಂಗಮರಾಗಿ ವ್ಯಾಪಾರ ಮಾಡಬೇಕೆಂಬ ನಿಯಮವಿದೆ. ಜೊತೆಗೆ ಉಳಿದ ಅಂಗಡಿ, ಹೊಟೇಲುಗಳವರ ತಕರಾರು ಬೇರೆ. ಅದಕ್ಕಾಗಿ ಉದ್ಯಾನ, ಕ್ರೀಡಾಂಗಣ, ಬಯಲು ನಾಟ್ಯ ಮಂದಿರಗಳು, ರಂಗ ಮಂದಿರಗಳು, ಸಿನೇಮಾ ಗ್ರಹಗಳು, ಕಾಲೇಜು ಹೊರವಲಯ ಸೇರಿದಂತೆ ಮತ್ತಿತರ ಖಾಲಿ ಇರುವ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಸೋಮು. ಇದಲ್ಲದೆ ತರಕಾರಿಗಳನ್ನು, ಹಾಲಿನ ಪ್ಯಾಕೇಟುಗಳನ್ನು, ಹಣ್ಣುಗಳನ್ನು ಸಹ ಕೆಲವು ವ್ಯಾಪಾರಿಗಳು ಈ ತಳ್ಳುಗಾಡಿಗಳಲ್ಲಿ ಹಾಕಿಕೊಂಡು ಮನೆಮನೆಗೆ ಮಾರುತ್ತಾರೆ. ಮಹಿಳೆಯರೂ ಇದಕ್ಕೆ ಹೊರತಲ್ಲ.

ಇತ್ತೀಚೆಗೆ ಈ ತಳ್ಳು ಗಾಡಿಯನ್ನು ತಯಾರಿಸುವುದರಲ್ಲೂ ಅಂಗಡಿಯವರು ಲಾಭಗಳಿಸುತ್ತಿದ್ದಾರೆ. ಮರದ ಅಥವಾ ಪ್ಲಾಸ್ಟಿಕ್ ಹಲಗೆ, ಅದಕ್ಕೊಂದು ಸೂರು ನೆರಳಿಗೆ ಆಧಾರವಾಗಿ, ಎರಡು ಚಕ್ರಗಳು ನಾಲ್ಕು ಖಂಬ ಇಷ್ಟರಲ್ಲಿಯೇ ಮೊದಲು ಗಾಡಿ ಮುಗಿಯುತ್ತಿತ್ತು. ಈಗ ಅದರಲ್ಲೂ ವಿವಿಧ ಅಲಂಕಾರಿಕ ರೂಪಗಳು ನಿರ್ಮಾಣಗೊಳ್ಳುತ್ತಿವೆ.

ಹಾಗಾಗಿ ಉದ್ಯೋಗವಿಲ್ಲ ಎಂದು ಕೊರಗುವ ಯುವಕರಿಗೆ ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಸೋಮು ಮಾದರಿಯಾಗಿದ್ದಾರೆ. ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ, ಸ್ವಾಭಿಮಾನದ ಬದುಕು ತಮಗೂ ತಮ್ಮ ಕುಟುಂಬಕ್ಕೂ ಕಲ್ಪಿಸಿ ಏಳಿಗೆ ಸಾಧಿಸಿರುವ ಸೋಮು ನಮಗೆ ಅನುಕರಣೀಯರಾಗಿ ನಿಲ್ಲುತ್ತಾರೆ.

ಹಾಗಿದ್ದರೆ ತಡಯಾಕೆ? ಒಂದು ಸಾರಿ ಸೋಮು ಅವರ ಹೊಟೇಲಿಗೆ ಭೇಟಿ ನೀಡಿ. ಅಲ್ಲಿರುವ ಖಾದ್ಯಗಳನ್ನು ಸವಿಯಿರಿ. ತಾವು ಕಲಿಯದಿದ್ದರೂ ತಮ್ಮ ಮಕ್ಕಳು ಕಲಿಯಲೆಂದು ಅವಿರತ ಶ್ರಮ ಪಡುತ್ತಿರುವ ಸೋಮು ಅವರ ಸ್ವಾಭಿಮನಿ ಬದುಕಿಗೆ ನಮ್ಮ ಕೈಲಾದ ಸಹಾಯ ಅದಾಗಬಲ್ಲದು.
ನಮ್ಮ ಸಂಸಾರದಲ್ಲಿ ಸೋಮು ಅವರಂತಹ ಇಂತಹ ಚಿಕ್ಕ ಚಿಕ್ಕ ದೀಪಗಳೇ ಕುಲ ಸಂಸಾರದ ನಿಜ ಕುಲದೀಪಗಳು ಎಂಬುದರಲ್ಲಿ ಸಂಶಯವಿಲ್ಲ.

ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

ಬೇಸಿಗೆ ಎಂದು ಮರುಗದಿರಿ..ತಂಪೆರೆಯಲು ಮುರುಗಲಿದೆ.

Friday, March 13, 2009

ಭೂಮಿ ಜೀವಿಗಳಿಗೆ ಅಸಹ್ಯವಾಗುತ್ತಿದೆ. ತಾಪಮಾನದ ಏರಿಕೆಯಿಂದ ಬದುಕು ಅಸಹನೀಯವಾಗುತ್ತಿದೆ. ಭೂಮಿಗೆ ಜ್ವರ ಬಂದಿದೆ, ನೆತ್ತಿ ಕೆಂಪಾಗಿದೆ ಹೀಗೆ ವಿಶೇಷ ವಿಶ್ಲೇಷಣೆಗಳನ್ನು ತಜ್ಞರು ಮಾಧ್ಯಮಗಳಲ್ಲಿ ತೂರಿ ಬಿಡುತ್ತಿದ್ದಾರೆ. ಈಗ ಈ ವಿಷಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ವಿಶ್ವವ್ಯಾಪಿ ವಿದ್ಯಮಾನವಾಗಿ ಪರಿಣಮಿಸಿದೆ.



ಜಾಗತಿಕ ತಾಪಮಾನದ ಬಿಸಿ ಮಾತ್ರ ಪ್ರತಿಯೊಬ್ಬರನ್ನು ತಟ್ಟುತ್ತಿದೆ. ವಯುಕ್ತಿಕ ಮಟ್ಟದಲ್ಲಿ ಈ ಸಮಸ್ಯೆಯನ್ನು ಹುಟ್ಟು ಹಾಕಿ, ಜಾಗತಿಕ ಹಂತ ತಲುಪಿರುವ ನಾವು ಈಗ ಬೇರು ಮಟ್ಟದಿಂದ ಈ ಸಮಸ್ಯೆ ಬಗೆಹರಿಸಿಕೊಳ್ಳುವದು ಹೇಗೆ?
ನಮ್ಮದೇ ಆದ ಮನೆಮದ್ದು ಅಥವಾ ಪಾರಂಪರಿಕ ಜ್ಞಾನಕ್ಕೆ ಮೊರೆ ಹೋಗುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತಮಗೆ ಆಶ್ಚರ್ಯವಾಯಿತೇ? ಬೇಸಿಗೆಯ ಬೇಗೆ ತಣಿಸಲು ಮುರುಗಲು ಪೇಯ ಈಗ ವಿಶೇಷ ಸ್ಥಾನ ಪಡೆಯುತ್ತಿದೆ.

ಆದಿ ಕಾಲದಿಂದಲೂ ಮುರುಗಲು ಹಣ್ಣಿನ ಬಗ್ಗೆ ಸಾಕಷ್ಟು ಉಲ್ಲೇಖವಿತ್ತಾದರೂ ಪ್ರಸಿದ್ಧ ತಂಪು ಪಾನೀಯಗಳಿಗೆ ಹಾಗು ಅನ್ಯ ದೇಶಿಯ ಪಾನೀಯಗಳಿಗೆ ಹೋಲಿಸಿದರೆ ಮುರುಗಲು ಪೇಯ ಜಗಜಾಹೀರಾಗಲು ಇನ್ನೂ ಶತಮಾನಗಳೇ ಉರಳಬೇಕೆನೋ?
ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಆಸರೆಗೆಂದು ‘ಕೋಕಂ’ ಬಳಸುವುದು ಖಾಯಂ. ಈ ಮುರುಗಲು ಹಣ್ಣಿನ ಪೇಯ ಪ್ರತಿ ಮನೆಯಲ್ಲಿ ಬೇಸಿಗೆಯ ಆದರಾಥಿತ್ಯದ ಸಂಕೇತ. ಈಗೀಗ ಕರ್ನಾಟಕದ ಹಲವೆಡೆ ತೀವ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ತಂಪು ಪಾನೀಯ ಕೋಕಂ ಎನ್ನಬಹುದು.
ಈ ಮುರುಗಲು ಪೇಯವನ್ನು ತಯಾರಿಸುವುದು ಹೇಗೆ? ಕೇವಲ ಹಣ್ಣುಗಳನ್ನು ಗಿಡದಿಂದ ಕಿತ್ತು ತಂದ ಮಾತ್ರಕ್ಕೆ ಕೋಕಂ ತಯಾರಾಗುವದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಹಣ್ಣುಗಳು ಲಭ್ಯ. ಸಾಧಾರಣವಾಗಿ ಎಪ್ರೀಲ್- ಮೇ ತಿಂಗಳಿನಲ್ಲಿ ಮುರುಗಲ ಗಿಡಗಳು ಫಲ ಕೊಡಲು ಪ್ರಾರಂಭಿಸುತ್ತವೆ.

ಗಿಡದಿಂದ ಕಿತ್ತು ತಂದ ನಂತರ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸುವ ಕೆಲಸ ಆಗಬೇಕು. ತಂಪು ಪಾನೀಯ ತಯಾರಿಸುವಾಗ ಈ ಹಣ್ಣಿನ ಬೀಜಗಳು ಅಪ್ರಯೋಜನಕಾರಿ. ಇಲ್ಲಿ ಹಣ್ಣಿನ ತಿರುಳು ಹಾಗು ಸಿಪ್ಪೆಗಳೇ ನಮಗೆ ಕೋಕಂ ಆಗುವ ಸರಕುಗಳು. ಸಿಪ್ಪೆಯನ್ನು ಅದರ ಗಾತ್ರದ ಅನುಸಾರ ಅಂದರೆ ೧ ಕಿಲೋ ಸಿಪ್ಪೆಗೆ ೪ ಲೀಟರ್ ನೀರನ್ನು ಹಾಕಿ ಹದ ಮಾಡಿಟ್ಟು, ೧೦ ರಿಂದ ೧೫ ದಿನಗಳವರೆಗೆ ಸೂರ್ಯನ ಬಿಸಿಲಿಗೆ ಒಡ್ಡಬೇಕು. ಪಾತ್ರೆಯ ಬಾಯಿಗೆ ಬಟ್ಟೆ ಕಟ್ಟಿ ಒಣಗಿಸಲೂ ಬಹುದು. ನಂತರ ಅದನ್ನು ಬಾಣಲೆ ಅಥವಾ ಪಾತ್ರೆಯಲ್ಲಿ ಹಾಕಿ ಗಾಳಿಯಾಡದಂತೆ ಇಡಬೇಕು. ಅವಶ್ಯಕತೆ ಬಿದ್ದಾಗ ಒಂದು ಲೋಟ ನೀರಿಗೆ ೨ ಚಮಚ ಕೋಕಂ ರಸ ಸೇರಿಸಿ ತುಸು ಶೈತ್ಯಾಗಾರದಲ್ಲಿಟ್ಟು ನೀಡಿದರೆ ದಾಹ ಇಂಗಿಸಿ, ಆರೋಗ್ಯಸಹ ವೃದ್ಧಿಸುತ್ತದೆ.

ನೀರನ್ನು ಹಾಕದೇ ಮುರುಗಲ ಹಣ್ಣಿನ ಸಿಪ್ಪೆಗಳನ್ನು ಸೂರ್ಯನ ಬಿಸಿಲಿಗೆ ಒಣಗಿಸಿಟ್ಟರೆ ೨-೩ ವರ್ಷಗಳ ಕಾಲ ಅದು ಹಾಳಾಗದೇ ಉಳಿಯುತ್ತದೆ.

ಕೋಕಂ ಕೇವಲ ಪಾನೀಯವಾಗಿ ಮಾತ್ರವಲ್ಲದೇ ಮಲೆನಾಡಿನ ನಮ್ಮ ಹವ್ಯಕರ ಮನೆಗಳಲ್ಲಿ ಊಟದಲ್ಲಿ ಅನ್ನದೊಂದಿಗೆ ತಂಬುಳಿಯಾಗಿಯೂ ಬಳಕೆಯಲ್ಲಿದೆ. ಕೆಲವು ಉಷ್ಣ ರೋಗಗಳಿಗೂ, ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳಿಗೂ ಇದು ಅಡ್ಡಪರಿಣಾಮಗಳಿಲ್ಲದೇ ಶಮನ ಮಾಡಬಲ್ಲ ಅಯುರ್ವೇದ ಮದ್ದಾಗಿದೆ. ಈಚೆಗೆ ವಿದೇಶಗಳಿಗೂ ಈ ಮುರುಗಲು ರಫ್ತಾಗುವ ಸರಕು. ರೈತರು ತಮ್ಮ ಉಪ ಆದಾಯವನ್ನಾಗಿ ಬೇಸಿಗೆಯ ಈ ದಿನಗಳಲ್ಲಿ ಮುರುಗಲನ್ನು ಬಳಸಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ! ಹಾಗಾಗಿ ದೇಹಕ್ಕೆ ಮಾತ್ರವಲ್ಲ ಮನಕ್ಕೂ ಮುದ ನೀಡುವ ಬೆಳೆ ಮುರುಗಲು.

ಗಣಪತಿ ಹೆಗಡೆ
ಎಂ.ಎ.ಜೆ.ಎಂ. ೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

ಕೊಳ್ಳುವವರಿಗೆ ಬೆತ್ತ ಕಲೆ; ಕುಶಲಕರ್ಮಿಗೆ ಬಾಸುಂಡೆ

Saturday, March 7, 2009

ನಿಮ್ಮ ಮನೆಗಳಲ್ಲಿ ಬೆತ್ತದ ಕುರ್ಚಿಗಳಿವೆಯೇ? ದಿವಾನಗಳಿವೆಯೇ? ಕನಿಷ್ಠ, ಝೂಲಾ ಇರಬಹುದಲ್ಲ? ಅಥವಾ ಅದಕ್ಕೆ ಸಂಬಂಧಿಸಿದ ಯಾವುದಾದರೂ ಅಲಂಕಾರಿಕ ಉಪಕರಣಗಳಿವೆಯೇ? ಹಳೆಯ ಮನೆಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಬೆತ್ತ ಈಗ ಹೊಸ ಮೆನಗಳಲ್ಲಿ ಅಲಂಕಾರಿಕ ವಸ್ತುವಾಗಿ ಪರಿಣಮಿಸಿದೆ. ಬೆತ್ತ ರೂಪದಿಂದ ಈ ಮನಸೆಳೆಯುವ ಅಲಂಕಾರಿಕ ರೂಪಕ್ಕೆ ತಂದವರ ಪರಿಶ್ರಮ ಎಷ್ಟಿರಬೇಕು? ಅದು ಅಮೂಲ್ಯವಾದುದು.


ಬೆತ್ತವನ್ನು ನೇಯುವ ಕುಶಲಕರ್ಮಿಗಳು ಮೂಲತ: ಕೇರಳದ ಅಲವಾಡಿ ಊರಿನವರು. ಸದ್ಯ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಕಳೆದ ಹಲವಾರು ದಶಕಗಳಿಂದ ಬಿಡಾರ ಹೂಡಿದ್ದಾರೆ. ಬೆತ್ತದಲ್ಲಿ ಕಲೆ ಅರಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಅನ್ನಕ್ಕೆ ಈ ಕಲೆ ಆಧಾರವಾದರೂ ಅಪರೂಪದ ಕಲೆಯನ್ನು ಅಪ್ರಜ್ಞಾಪೂರ್ವಕವಾಗಿ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ.


ಅವರ ಮಾತುಗಳಲ್ಲೇ ಆ ಅನುಭವ ಕೇಳಬೇಕು. "ನಮ್ಮ ಮನ್ಯಾಗ ಭಾಳ ಹಿಂದಿಂದ..ಅಂದ್ರ ಅಜ್ಜಾ-ಅಮ್ಮಗಳ ಕಾಲದಿಂದ ಈ ಬೆತ್ತ ನೇಯ್ಯುವ ಕೆಲಸ ಮಾಡಕೋತ ಬಂದಾರ. ನಮಗೂ ಸಾಲಿ ಬದ್ಲಿ ಈ ಕೆಲಸಾನ ಹೆಚ್ಚ ಒತ್ತಕೊಟ್ಟು ಕಲಿಸ್ಯಾರ. ನಮಗ ಈ ಕೆಲಸ ಬಿಟ್ರ..ಉಳದ ಯಾವ ಕೆಲಸ ಅಷ್ಟಕಷ್ಟ. ಆದ್ರ ನಮಗ ಬೇಕಾಗಿರೋ ಬೆತ್ತ ಈಗ ಸಿಗಾಕತಿಲ್ಲ. ಇಂದು ಇಲ್ಲೆ ನಾಳೆ ಮತ್ತೊಂದ ಕಡೆ. ಹೀಂಗ ಈ ಕಲೆಯನ್ನ ಕೈಗೆತ್ತಿಕೊಂಡು ಜೀವನ ಸಾಗಿಸ್ತಿದ್ದೇವೆ" ಅವರ ಮನದಾಳದ ಮಾತುಗಳಿವು.


ಅವರದು ಅವಿಭಕ್ತ ಕುಟುಂಬ. ದಿವಾನ, ಸೋಫಾ, ಟಿಪಾಯಿ, ಮಕ್ಕಳ ಖುರ್ಚಿಗಳು, ಜೋಕಾಲಿ ಹೀಗೆ ಬೆತ್ತದಿಂದ ಎಲ್ಲ ರೀತಿಯ ಉಪಯುಕ್ತ ಅಲಂಕಾರಿಕ ವಸ್ತುಗಳನ್ನು ಅವರು ತಯಾರಿಸುತ್ತಾರೆ. ಅವರು ಬಹಳ ಕಷ್ಟಪಟ್ಟು ತಯಾರಿಸಿದ ಉಪಕರಣಗಳನ್ನು ಮಧ್ಯವರ್ತಿಗಳು ಬಹಳ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮಾರುಕಟ್ಟೆಯ ಏರಿಳಿತಗಳ ಬಗ್ಗೆ, ವ್ಯವಹಾರದ ಅಂದಾಜು ಇವರಿಗೆ ಸರಿಯಾಗಿ ತಿಳಿದಿಲ್ಲ. ಹಾಗೆಯೇ ಮೊದಲು ಅರಣ್ಯ ಇಲಾಖೆ ಇವರಿಗೆ ಬೆತ್ತದ ಕಚ್ಚಾಸಾಮಗ್ರಿಗಳನ್ನು ಒದಗಿಸುತ್ತಿತ್ತು. ಆದರೆ ಇಂದು ಇಲಾಖೆ ಬೆತ್ತದ ಪೂರೈಕೆಯನ್ನು ಮಿತಿಗೊಳಿಸಿದೆ. ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಸೇರಿ ಈ ಕರಕುಶಲ ಕೆಲಸ ಮಾಡುತ್ತಾರೆ.ಆದರೆ ದೊಡ್ಡ ಕೈಗಾರಿಕೆಗಳ ಪೈಪೋಟಿ ಬೇರೆ ಇವರನ್ನು ಸದಾ ಕಾಡುತ್ತಿದೆ.

ಬೆತ್ತ ಬಲು ಉಪಯುಕ್ತ ವಸ್ತು. ಅದನ್ನು ಯಾವ ರೀತಿಯಲ್ಲಾದರು ಉಪಯೋಗಿಸಬಹುದು. ಅದು ಹಾಳಾಗುವುದು ತೀರ ಕಡಿಮೆ. ಒಂದು ವೇಳೆ ಹಾಳಾದರೆ ಅದರ ರಿಪೇರಿ ಕಾರ್ಯ ಬಲು ಸುಲಭ. ಬೆತ್ತದಿಂದ ಮನೆಯ ಮೆರುಗು ಸಹ ಹೆಚ್ಚುತ್ತದೆ. ಮೇಲಾಗಿ ಇದು ಪರಿಸರ ಸ್ನೇಹಿ.
ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ ಸೆಮ್.
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

ಹೊಸಯಲ್ಲಾಪುರದ ಕಹಿ ಕೆರೆಯ ಮಧ್ಯೆ ಸಿಹಿ ಬಾವಿ

ಹೆಸರಿಗೆ ಅದು ಹೊಸಯಲ್ಲಾಪುರ. ಅಲ್ಲಿ ಇರುವುದೆಲ್ಲ ಹಳೆಯದೇ! ಅಲ್ಲಿರುವ ಬಾವಿಗಳು ಕನಿಷ್ಟ ಒಂದು ಶತಮಾನದ ಮಡಿವಾಳರ ಬದುಕನ್ನು ಸಾರುತ್ತವೆ. ಪಕ್ಕದಲ್ಲಿಯೇ ಲೋಕದ ಸಂತೆ ಮುಗಿಸಿ ನಿಶ್ಚಿಂತೆಯಿಂದ ಮಲಗಿದವರೂ ಇದ್ದಾರೆ. ಸದಾ ಸುಣ್ಣದ ಭಟ್ಟಿಯ ಧೂಳೆಬ್ಬಿಸುವ ಸುಣಗಾರರೂ ಇಲ್ಲಿದ್ದಾರೆ. ಇಡೀ ದಕ್ಷಿಣ ಧಾರವಾಡದ ಹೊಲಸನ್ನೆಲ್ಲ ತನ್ನ ಉದರದಲ್ಲಿ ತುಂಬಿಕೊಂಡು ಮೂಕವಾಗಿ ರೋಧಿಸುತ್ತಿರುವ ಕೋಳಿ ಕೆರೆ ಇವಕ್ಕೆಲ್ಲ ಕಿರೀಟಪ್ರಾಯವಾದುದು.

ಮನುಷ್ಯ ಇಡೀ ಜಗತ್ತನ್ನು ನಡುಗಿಸಬಲ್ಲ ಶಕ್ತಿ, ಯುಕ್ತಿ ಎರಡನ್ನೂ ಉಳ್ಳವ. ಆದರೆ ನಿಸರ್ಗ ಎಂಬ ಕೌತುಕದ ಮುಂದೆ ತೀರ ಕುಬ್ಜ. ವೈಜ್ಞಾನಿಕ ವಿಷಯಗಳ ಖ್ಯಾತ ಅಂಕಣಕಾರ ನಾಗೇಶ ಹೆಗಡೆ ಹೇಳುತ್ತಾರೆ.." ಭೂಮಿಗೆ ಈಗ ಜ್ವರ ಬಂದಿದೆ. ಸದ್ಯದಲ್ಲಿಯೇ ನೆತ್ತಿಗೆ ಏರಲಿದೆ. ಸಕಾಲಿಕವಾಗಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸದೇ ಹೋದರೆ ನಮ್ಮ ಬದುಕು ದುರ್ಭರವಾಗಲಿದೆ".

ಪರಿಸರವಾದಿ ಡಾ.ಶಿವರಾಮ ಕಾರಂತರ ಮಾತು ಇಲ್ಲಿ ಪ್ರಸ್ತುತ ಎನಿಸುತ್ತದೆ. ‘ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ’! ಈ ಮಾತು ಧಾರವಾಡದ ಬಾವಿಗಳ ಪಾಲಿಗಂತೂ ಸತ್ಯ.

ಮೊದಲೇ ನಾನು ಉಲ್ಲೇಖಿಸಿರುವಂತೆ ಈ ಕೋಳಿಕೆರೆಗೆ ತಾಗಿಕೊಂಡು ಕುಡಿಯಲು ಯೋಗ್ಯವಾದ ೨ ಬಾವಿಗಳಿವೆ ಎಂದರೆ ನೀವು ನಂಬಬೇಕು. ಒಂದು ಬಾವಿಯನ್ನು ಮಡಿವಾಳರು ಬಟ್ಟೆ ತೊಳೆಯಲು ಹಾಗು ೭೦ ಅಡಿ ದೂರದ ಎರಡನೇ ಬಾವಿಯನ್ನು ಕುಡಿಯಲು ಬಳಸುತ್ತಾರೆ. ಈ ಬಾವಿಗಳು ಬ್ರಿಟೀಷರ ಕಾಲದಲ್ಲಿ ಕಟ್ಟಿಸಲ್ಪಟ್ಟಿವೆ. ೯೦ ವರ್ಷಗಳ ಪೂರ್ವದಲ್ಲಿ ೪೦ ಅಡಿ ಆಳ, ೧೦ ಅಡಿ ಅಗಲ ತೋಡಿಸಲ್ಪಟ್ಟಿವೆ.

ಕಮಲ ಕೆಸರಲ್ಲಿ ಹುಟ್ಟಿದರೂ ತನ್ನ ಸೌಂದರ್ಯದಿಂದಾಗಿ ಜನರನ್ನು ಆಕರ್ಷಿಸುತ್ತದೆ. ಹಾಗೆ ಈ ಬಾವಿಗಳು ಕೂಡಾ ತನ್ನ ಸುತ್ತಲೂ ಕೊಳಚೆ ನೀರು ಆವರಿಸಿ, ಗಬ್ಬೆದ್ದು ನಾರಿದರೂ ತನ್ನ ನೀರಿನ ಸಿಹಿ ಗುಣ ಮಾತ್ರ ಕಳೆದುಕೊಂಡಿಲ್ಲ. ಸುಮಾರು ವರ್ಷಗಳಿಂದ ಜನರು ಈ ಬಾವಿಯ ನೀರನ್ನು ಕುಡಿಯಲು ಬಳಸುತ್ತ ಬಂದಿದ್ದಾರೆ. ಇಂದಿಗೂ ಸಹಿತ ಮಡಿವಾಳ ಜನಾಂಗದ ಹತ್ತು ಕುಟುಂಬಗಳು ಈ ನೀರನ್ನು ಬಳಸುತ್ತಿವೆ. ಮತ್ತೊಂದು ವಿಶೇಷವೆಂದರೆ ಇಲ್ಲಿಯವರೆಗೆ ಯಾವುದೇ ಖಾಯಿಲೆಯಿಂದ ಜನ ನರಳಿಲ್ಲ. "ಈ ಸಿಹಿ ನೀರಿನ ಅಪರೂಪದ ಬಾವಿಯನ್ನು ಗಂಗಾದೇವಿ ನಮಗೆ ಕರುಣಿಸಿದ್ದಾಳೆ" ಎಂದು ಮಡಿವಾಳ ಕುಂಟುಬದ ಹಿರಿಯ ಭೀಮಸೇನ್ ಹೇಳುತ್ತಾರೆ.

ಈ ಬಾವಿಯ ಸಂಪೂರ್ಣ ಜವಾಬ್ದಾರಿ ಮಡಿವಾಳರ ಸುಪರ್ದಿಗೆ ಸೇರಿದೆ. ಇಂತಹ ವೈಶಿಷ್ಟ್ಯವನ್ನು ಉಳಿಸಿ, ಬೆಳಿಸಿಕೊಂಡು ಹೋಗಬೇಕಾಗಿರುವುದು ಇಂದಿನ ಅವಶ್ಯಕತೆ.

ಸುರೇಶ ನಾಯ್ಕ್
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.

ಕಾಯಕದಲ್ಲಿ ಕೈಲಾಸ ಕಾಣುವ ಟಿ. ಸೋಮಶೇಖರ

Thursday, March 5, 2009

ಲ್ಲಾರು ಮಾಡುವುದು ಹೊಟ್ಟೆಗಾಗಿ.. ಗೇಣು ಬಟ್ಟೆಗಾಗಿ’ ಈ ಮಾತು ನಿತ್ಯ ಸತ್ಯ. ಆದರೆ ಇದೇ ಕಾಯಕವನ್ನು ಶೃದ್ಧೆಯಿಂದ ಮಾಡಿದಾಗ ವಿಶೇಷವಾದುದನ್ನು ಸಾಧಿಸಲು ಸಾಧ್ಯ. ಸಮಾಜ ಇಂತಹ ಸಾಧಕರನ್ನು ಗಮನಿಸುತ್ತದೆ. ತಕ್ಕ ಮಟ್ಟಿಗೆ ಗೌರವಿಸುತ್ತದೆ. ಆದರೆ ಅವರಿಗೆ ಪ್ರಸಿದ್ಧಿ ಸಿಕ್ಕಿರಲಿಕ್ಕಿಲ್ಲ. ಅವರು ಹೋರಾಟದ ಬದುಕಿಗೊಂದು ಭಾಷ್ಯ ಬರೆಯಬಲ್ಲವರು. ಅವರ ಹೋರಾಟದ ಹಾದಿ, ಬದುಕು ಇತರರಿಗೆ ಮಾದರಿ.

ಇಂಥವರನ್ನು ನೋಡಬೇಕೆ? ಮಾತನಾಡಿಸಬೇಕೆ ಅಂತಹ ಒಬ್ಬ ವಿಶಿಷ್ಟ ಶ್ರಮ ಜೀವಿಯನ್ನು? ಧಾರವಾಡದ ಗಾಂಧಿನಗರಕ್ಕೆ ಬನ್ನಿ. ನೋಡಲು ಆಕಷರ್ಕವಾಗಿ ಕಾಣುವ ಸಾಣಿಗೆಗಳು, ಅಷ್ಟೆ ಸುಂದರವಾದ ಸೇರುಗಳು. ಕೂಡಲೇ ಮನೆಗೆ ಕೊಂಡೊಯ್ಯಬೇಕು ಎಂಬ ತುಡಿತ ನಿಮ್ಮಲ್ಲಿ ಉಂಟಾಗದೇ ಇರದು. ಹುಟ್ಟಿದಾರಭ್ಯ ಪೋಲಿಯೊ ಪೀಡಿತನಾದರೂ ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಮುಂದುವರೆಸಿಕೊಂಡು ಬಂದ ಸೋಮಶೇಖರ್ ಅವರ ಉತ್ಸಾಹ ಮೆಚ್ಚುವಂತಹದು.

ಎಲ್ಲವೂ ಸರಿಯಾಗಿದ್ದರೂ, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾಡುವ ನಾವು ಈತನಿಂದ ಕಲಿಯಬೇಕಾದದ್ದು ಬಹಳವಿದೆ. ಒಂದು ಕಾಲನ್ನು ಪೋಲಿಯೊದಿಂದ ಕಳೆದುಕೊಂಡು ಅಂಗವಿಕಲನಾಗಿರುವ ಸೋಮಶೇಖರ್ ಸಾಣಿಗೆಗಳನ್ನು ತಯಾರಿಸಿ ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಾರೆ.

ಸೋಮಶೇಖರ್ ಮೂಲತ: ಶಿವಮೊಗ್ಗ ಜಿಲ್ಲೆಯವರು. ಅವರು ಅಂಡಿಜೋಗಿ ಜನಾಂಗಕ್ಕೆ ಸೇರಿದವರು. ಮರಾಠಿ ಭಾಷೆಯಲ್ಲಿ ಮಾತು. ಕಳೆದ ೨ ವರ್ಷಗಳಿಂದ ಧಾರವಾಡದ ಗಾಂಧಿನಗರದಲ್ಲಿ ನೆಲೆಸಿ ಸಾಣಿಗೆಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಲೆಯನ್ನು ಕಂಡು ಮಾನವೀಯತೆ ದೃಷ್ಟಿಯಿಂದ ಗಾಂಧಿನಗರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಮೀಟಿಯವರು ಬ್ಯಾಂಕ್ ಎದುರಿಗಿನ ಜಾಗವನ್ನು ಯಾವುದೇ ಬಾಡಿಗೆ ಇಲ್ಲದೆ ಕೊಟ್ಟಿದ್ದಾರೆ.ಸೋಮಶೇಖರ್ ಅವರಿಗೆ ೩ ಜನ ಮಕ್ಕಳು, ಮಕ್ಕಳು ವಿದ್ಯಾವಂತರಾಗಬೇಕೆಂದು ಗಾಂಧಿನಗರದ ಶಾಲೆಗೆ ಸೇರಿಸಿದ್ದಾರೆ. ಗುಡಿಸಿಲಿನಲ್ಲಿ ವಿದ್ಯುತ್ ದೀಪವಿಲ್ಲ. ಸೀಮೆ ಎಣ್ಣೆ ಅಥವಾ ಕ್ಯಾಂಡಲ್ ನಿಂದ ಬೆಳಕು. ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಡಜನರಿಗಾಗಿ ಐಶ್ವರ್ಯ ಸೌರವಿದ್ಯುದೀಪಗಳನ್ನು (Microfinancing Scheme) ಅಡಿಯಲ್ಲಿ ಕೊಡಮಾಡುತ್ತಿದೆ.ಇವರಿಗೊಂದು ದೊರಕಿಸುಕೊಡಬಹುದೇ?

ಕಿರಾಣಿ ಅಂಗಡಿ, ಹೊಟೆಲ್ಗಳಲ್ಲಿ ಇರುವ ತಗಡಿನ ಡಬ್ಬಿಗಳು, ಎಣ್ಣೆಯ ವ್ಯಾಪಾರಸ್ಥರ ಅಂಗಡಿಗಳಲ್ಲಿನ ಮಂಡಿಗಳು ಇವರ ಕಚ್ಚಾ ವಸ್ತುಗಳು.ಈ ತಗಡಿನ ಡಬ್ಬಿಗಳನ್ನು ಸುತ್ತಿಗೆಯಿಂದ ಹೊಡೆದು ಚೌಕಾಕಾರವಾಗಿ ಮಾಡಿ ಸಾಣಿಗೆ , ಹೆರೆಮಣೆ, ಬೇಕರಿ ಟ್ರೇ, ಕೇಕ್ ಬಾಕ್ಸ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ.

ಈಗಿನ ಯಾಂತ್ರಿಕ ಯುಗದಲ್ಲಿ ಮಿಕ್ಸರ-ಗ್ರ್ಯಾಂಡರ್, ಪ್ಯಾಕ್ಡ್ ಫುಡ್ ಭರ್ಜರಿ ಬಳಕೆಯಲ್ಲಿವೆ. ಸಾಣಿಗೆಗಳ ಮಾರಾಟ ಹೇಗೆ? ಎಂದು ಕೇಳಿದರೆ, ಫ್ಯಾಕ್ಟರಿ ಸಾಣಿಗೆಗಳಲ್ಲಿ ಬಹಳ ದೊಡ್ಡ-ದೊಡ್ಡ ರಂಧ್ರಗಳಿರುವುದರಿಂದ ಬೇಡಿಕೆ ಕಡಿಮೆ. ತಮ್ಮ ಸಾಣಿಗೆಗಳಿಗೆ ಬೇಡಿಕೆ ಹೆಚ್ಚು. ಅಲ್ಲದೇ ಹಳ್ಳಿಗಾಡಿನ ಪ್ರದೇಶದಲ್ಲಿ ಜನರು ಹೆಚ್ಚು-ಹೆಚ್ಚು ಕೊಂಡುಕೊಳ್ಳುತ್ತಾರೆ. ಅದೇ ರೀತಿ ಬೇಕರಿಗಳಲ್ಲಿ ಉಪಯೋಗಿಸುವ ಬೇಕರಿ ಟ್ರೇ, ಕೇಕ್ ಬಾಕ್ಸ್ ಮೌಲ್ಡ್ ಗೂ ಅಲ್ಪ-ಸಲ್ಪ ಬೇಡಿಕೆ ಇದೆ ಎನ್ನುತ್ತಾರೆ ಸೋಮಶೇಖರ.

೨೫ ತಗಡಿನ ಡಬ್ಬಿಗಳನ್ನು ಸಾಣಿಗೆಯಾಗಿ ಮಾಡಲು ೩ ದಿನ ಬೇಕಾಗುತ್ತದೆ. ೧ ದಿನಕ್ಕೆ ೫೦ ಸಾಣಿಗೆಗಳು ಮಾರಾಟವಾದ ಉದಾಹರಣೆ ಇದೆ. ಒಂದಕ್ಕೆ ಹೋಲ್ ಸೇಲ್ ದರದಲ್ಲಿ ೧೮-೨೦ ರೂಪಾಯಿಗೆ ಕೊಡುತ್ತೇವೆ. ಇದರಿಂದ ದಿನಕ್ಕೆ ೧೦೦-೧೫೦ ರೂಪಾಯಿ ಹಣ ಸಿಗುತ್ತದೆ. ಇದರಲ್ಲಿ ಖರ್ಚು ತೆಗೆದು ೮೦-೧೦೦

ರೂಪಾಯಿ ಉಳಿತಾಯವಾಗಿ ತಿಂಗಳಿಗೆ ೨೫೦೦ ರೂಪಾಯಿ ಆದಾಯ ಬರುತ್ತದೆ. ಅಂತೂ-ಇಂತೂ ಬದುಕು ಅಷ್ಟರಲ್ಲಿಯೇ ನಡೆದಿದೆ ಎಂದು ತಮ್ಮ ಸಾಹಸ ಹೇಳಿಕೊಂಡರು.

ಮಾಡುವ ಕೆಲಸಕ್ಕೆ ಸರಿಯಾಗಿ ಆದಾಯ ಬಾರದಿದ್ದರೆ ಕೈಕಟ್ಟಿ ಕುಳಿತುಕೊಳ್ಳದೇ ಛತ್ರಿ ರಿಪೇರಿ, ಬೀಗ ರಿಪೇರಿ, ಹಾಗೂ ಬ್ಯಾಟರಿ ರಿಪೇರಿಗಳನ್ನು ಊರು-ಊರುಗಳಿಗೆ ಹೋಗಿ ರಿಪೇರಿ ಮಾಡಿ ಜೀವನ ನಡೆಸುತ್ತೇನೆ ಎಂದು ಉತ್ಸಾಹಿ ಯುವಕ ಟಿ.ಸೋಮಶೇಖರ ಹೇಳುತ್ತಾರೆ.

ಅಬ್ಬಾ! ಅವರ ಅದಮ್ಯ ಶ್ರಮ ಜೀವನಕ್ಕೆ ಹಾಗೂ ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್.

ವಸೀಮ್ ಭಾವಿಮನಿ
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.

ಗಿಡಗಳಿಗೆ ಕಸಿ; ರೈತನಿಗೆ ಖುಷಿ!

Tuesday, March 3, 2009

ಮ್ಮದು ಕೃಷಿ ಸಂಸ್ಕೃತಿ ರಾಷ್ಟ್ರ. ಇಲ್ಲಿ ಕೃಷಿ ವ್ಯವಹಾರ ಅಲ್ಲ. ರೈತ ತನ್ನ ಜೀವನೋಪಾಯಕ್ಕಾಗಿ ಕಂಡುಕೊಂಡ ಉದ್ಯೋಗ ವ್ಯವಸಾಯ. ಆದರೆ ಅಭಿವೃದ್ಧಿ ರಥದ ಅಡಿಯಲ್ಲಿ ಸಿಲುಕಿದ ರೈತಾಪಿ ವರ್ಗ, ‘ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂಬುವಂತೆ ಬಿಂಬಿಸಲ್ಪಟ್ಟು, ದೇಶ ನಡೆಸುವ ನೊಗವನ್ನೇ ಹೊತ್ತಂತೆ ಯೋಚಿಸಿದೆವು.


ನಮ್ಮ ಹಿಂದಿನ ತಲೆಮಾರಿನ ರೈತನಿಗೆ ಅಂದಿನ ಕೂಲಿ, ಅವತ್ತಿನ ಹಸಿವನ್ನು ಇಂಗಿಸಿದರೆ ಅದೇ ಸ್ವರ್ಗವಾಗಿತ್ತು.
ಕಾಲ ಬದಲಾಗುತ್ತಾ ಬಂತು. ರೈತನೂ ಆಮಿಷಗಳಿಂದ ದೂರ ಉಳಿಯಲು ಸಾದ್ಯವಾಗಲಿಲ್ಲ. ತನ್ನ ಅಪರಿಮಿತ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ದುಡಿಮೆ ಅನಿವಾರ್ಯವಾಯಿತು. ‘ಗಳಿಕೆ-ಖರ್ಚು-ದುಡಿಮೆ-ಗಳಿಕೆ’ ಈ ವರ್ತುಲ ಬ್ರಹ್ಮಾಂಡದೆತ್ತರ ಬೆಳೆಯಲು ನೀರೆರೆದಿದ್ದು ನಮ್ಮ ಬುದ್ಧಿಶಕ್ತಿ . ಹಾಗಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಹಾಗು ಲಾಭ ಪಡೆಯಲು ಈ ಕಸಿ ಪದ್ಧತಿ ಬೆಳಕಿಗೆ ಬಂದಿತು.

ಉತ್ತಮ ಇಳುವರಿ ನೀಡುವಂತಹ ಆಹಾರ ಬೆಳೆಗಳು ಅಥವಾ ವಾಣಿಜ್ಯ ಬೆಳೆಗಳ ಕಾಂಡದ ಒಂದು ಸಣ್ಣ ತುಂಡಿನಿಂದ ಅದೇ ಪ್ರಜಾತಿಯ ಮತ್ತೊಂದು ಸಸ್ಯವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಗೆ ‘ಕಸಿ ಪದ್ಧತಿ’ ಎನ್ನಲಾಗುತ್ತದೆ. ಅಂದರೆ, ಇಳುವರಿ ನೀಡಿ, ಮುಪ್ಪಡರಿದ ಒಂದು ಸಸ್ಯದ ಕಾಂಡಕ್ಕೆ ಅತೀ ಉಪಯುಕ್ತವಾದ ಅದೇ ಪ್ರಭೇದದ ಸಸ್ಯ ಕಾಂಡವನ್ನು ಬೆಸೆಯುವದರಿಂದ ‘ನಿರುಪಯುಕ್ತ’ ಸಸಿ ಕೂಡ ಉಪಯುಕ್ತ.
ಕಸಿಯನ್ನು ಮುಖ್ಯವಾಗಿ ಮಾವು, ಹಲಸು, ಚಿಕ್ಕು, ಪೇರಲ, ದಾಸವಾಳ, ಗುಲಾಬಿ, ಬದನೆ ಈ ಪ್ರಭೇದಗಳಿಗೆ ಮಾಡಲಾಗುತ್ತದೆ. ಕಸಿ ಕಟ್ಟುವ ಉದ್ದೇಶಗಳು ಹಲವು. ಪ್ರಮುಖವಾಗಿ ಕಡಿಮೆ ಸಮಯದಲ್ಲಿ ಉತ್ತಮ ಇಳುವರಿ ಮತ್ತು ಪ್ರತಿಫಲ ಅಪೇಕ್ಷೆ.

ಉದಾಹರಣೆಗೆ ಮಾವು ಮರ. ಮಾವಿನ ಬೀಜವನ್ನು ನೆಟ್ಟು, ಅದು ಬೆಳೆದು ಪ್ರತಿಫಲವನ್ನು ನೀಡುವ ಹೊತ್ತಿಗೆ ಆರೆಂಟು ವರುಷಗಳು ಬೇಕು. ಈ ಕಸಿ ಪದ್ಧತಿಯನ್ನು ಅನುಸರಿಸಿದರೆ ಸುಮಾರು ಮೂರು ಅಥವಾ ನಾಲ್ಕು ವರುಷಗಳಲ್ಲಿ ಉತ್ತಮ ಫಸಲು ಪಡೆಯಬಹುದು. ಗುಣಮಟ್ಟದಲ್ಲಿ ಉತ್ತಮವಾದ ಅಂಶವನ್ನು ಗುರುತಿಸಬಹುದು.
ಕಸಿ ಪದ್ಧತಿಯನ್ನು ಕೈಗೆತ್ತಿಕೊಳ್ಳುವ ಮುನ್ನ ಕೆಲ ಅಂಶಗಳನ್ನು ನಾವು ಗಮನಿಸಬೇಕು. ಕಸಿಮಾಡಲು ಬೇಕಿರುವ ಮಾವಿನ ಸಸ್ಯದ ಉತ್ತಮವಾದ ಮತ್ತೊಂದು ಪ್ರಬೇಧದ ತಳಿ ನಮ್ಮಲ್ಲಿ ಇರಬೇಕು. ವಾಣಿಜ್ಯ ಬೆಳೆಗಳ ನಿಲಿಂಗ್ ವಂಶಾಭಿವೃದ್ಧಿಯ ವಿಧಾನಕ್ಕೆ ಕಸಿ ಪದ್ಧತಿ ಉತ್ತಮವಾದ ಉದಾಹರಣೆ. ಒಂದೇ ಜಾತಿಯ ಎರಡು ಸಸ್ಯಗಳನ್ನು ಬೆಸೆಯುವಲ್ಲಿ ಈ ಪದ್ಧತಿ ಸಹಾಯಕವಾಗಿದೆ. ಸಧೃಢವಾದ ಬೇರುಗಿಡದ ಮೇಲೆ ಉತ್ತಮ ಜಾತಿಯ ಟೊಂಗೆಯನ್ನು ಬೆಸಿಯುವುದೆ ಕಸಿ ಪದ್ಧತಿಯಲ್ಲಿ ಬಹು ಮುಖ್ಯ. ಈ
ಪದ್ಧತಿಯ ಪ್ರಯೋಜನಗಳೆಂದರೆ-
೧ ಹಳೆಯ ತಳಿಗಳ ಪುನರ್ ಸಂಸ್ಕರಣೆ ಹಾಗು ಅಭಿವೃದ್ಧಿ.
೨ ಅಲಂಕಾರಿಕ ಸಸ್ಯಗಳ ಅಭಿವೃದ್ಧಿ.
ಹಾಗೆಯೇ ಕಸಿ ಪದ್ಧತಿ ಹಲವಾರು ವಿಧಗಳನ್ನು ಹೊಂದಿದೆ. ಅವುಗಳೆಂದರೆ
* ಗೂಟಿ ಕಸಿ -ಹದವಾಗಿ ಬಲಿತ ಗಿಡದ ಕಾಂಡವನ್ನು ಮಧ್ಯೆ ಕತ್ತರಿಸಿ ಮಧ್ಯಭಾಗದಲ್ಲಿ ಅಡ್ಡವಾಗಿ ಸೀಳಬೇಕು. ಅದೇ ಜಾತಿಯ ಮತ್ತೊಂದು ಸಸ್ಯದ ಚಿಗುರನ್ನು ಬೆಸೆಯುವುದು ಗೂಟಿ ಕಸಿ ವಿಧಾನ.
* ಸಾಮಿಪ್ಯ ಕಸಿ - ಈ ಪದ್ಧತಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಕುಂಡದಲ್ಲಿ ಬೆಳೆಸಿದ ಸಸಿಯನ್ನು ತಾಯಿ ಮರದ ಹತ್ತಿರ ಬೆಸೆಯುವ ಕ್ರಿಯೆ. ಇದು ಚಿಗುರಲು ಸುಮಾರು ೨ ರಿಂದ ೩ ತಿಂಗಳುಗಳು ಬೇಕಾಗುತ್ತವೆ. ಈ ವಿಧಾನವನ್ನು ಬೃಹತ್ ಪ್ರಮಾಣದಲ್ಲಿ
ಅನುಸರಿಸಲು ಸಾದ್ಯವಿಲ್ಲ.
*ಓಟಿ ಕಸಿ- ಇದು ಎಳೆಯ ಗಿಡಗಳಿಗೆ ಕಸಿ ಮಾಡುವ ವಿಧಾನ. ಬೀಜದಿಂದ ಚಿಗುರೊಡೆದ ಎಳೆಯ ಗಿಡಕ್ಕೆ ಕಸಿ ಮಾಡಲಾಗುತ್ತದೆ. ಓಟಿ ಕಸಿಯನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಲು ಸಾದ್ಯವಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಸಿಯು ಓಟೆಯಿಂದ ಬೇರೆಯಾಗದಂತೆ ನಿಗಾ ವಹಿಸಬೇಕು. ಒಂದು ವೇಳೆ ಬೇರೆಯಾದರೆ ಕಸಿ ಕಟ್ಟಿದ್ದು ವ್ಯರ್ಥ.
*ಮೃದು ಕಾಂಡ ಕಸಿ- ಹೆಸರೇ ಹೇಳುವಂತೆ ಮೆದುವಾದ ಸಸ್ಯಗಳಾದ ಬಾಳೆ ಮತ್ತು ಸೇವಂತಿಗೆ ಸಸ್ಯಳಿಗೆ ಕಾಂಡದ ಮೇಲಿರುವ ಲೇಪವನ್ನು ಕೊರೆದು ಆ ಜಾಗದಲ್ಲ್ಲಿ ಬೆರೆ ಕಾಂಡವನ್ನು ಬೆಸೆಯುವುದು.
*ಕುಡಿ ಕಸಿ- ಬಲಿತ ಮರಕ್ಕೆ ನಡುಭಾಗದಲ್ಲಿ ಆಂಗ್ಲ ಭಾಷೆಯ `V' ಆಕಾರದಲ್ಲಿ ಮೇಲಿನ ಕಾಂಡವನ್ನು ಸೀಳಿ ಆ ಜಾಗದಲ್ಲಿ ಉತ್ತಮ ಜಾತಿಯ ಕಾಂಡವನ್ನು ಬೇಸೆಯುವುದು. ಕಾಂಡವು ಬೆಸೆದುಕೊಂಡನಂತರ ಮರದ ಮೇಲ್ಭಾಗವನ್ನು ಕತ್ತರಿಸಲಾಗುತ್ತದೆ.
*ಗೂಟಿ ಕಟ್ಟುವುದು- ಈ ಪದ್ಧತಿಯಲ್ಲಿ ಕಸಿ ಕಟ್ಟುವ ಪೇರಲ, ದಾಳಿಂಬೆ ಗಿಡಗಳ ಕಾಂಡದ ಮಧ್ಯ ಭಾಗದಲ್ಲಿ ಮತ್ತೊಂದು ಕಾಂಡವನ್ನು ಮಣ್ಣಿನ ಉಂಡೆಯೊಂದಿಗೆ ಲೇಪಿಸಿ ಮೇಲಿನಿಂದ ಪ್ಲಾಸ್ಟಿಕ್ ಕೊಟ್ಟೆಯನ್ನು ಕಟ್ಟಬೇಕಾಗುತ್ತದೆ.
*ಕಣ್ಣು ಕಸಿ - ಸಸ್ಯದ ಎಲೆಗಳ ಕಂಕುಳಲ್ಲಿ ಇರುವ ಚಿಗುರು ಕಣ್ಣನ್ನು ಬಳಸಿಕೊಂಡು ಕಸಿ ಮಾಡುವ ವಿಶಿಷ್ಠ ವಿಧಾನ. ಬಾಳೆ,

ಗುಲಾಬಿ, ರಬ್ಬರಗಳಿಗೆ ಇದು ಸೂಕ್ತವಾಗಿದೆ. ಇದರಲ್ಲಿ ೨ ವಿಧಾನಗಳಿವೆ.
೧ ಆಯ್ ಬಡ್ಡಿಂಗ್
೨ ಪ್ಯಾಚ್ ಬಡ್ಡಿಂಗ್
ಕಸಿ ಕಟ್ಟುವ ಈ ಎರಡು ವಿಧಾನಗಳನ್ನು ಅನುಸರಿಸಲು ಸಸ್ಯಗಳ ಗಾತ್ರ ಮತ್ತು ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಕಸಿ ಪದ್ಧತಿಯು, ಹಳೆಯ ದೇಸಿ ತಳಿಗಳನ್ನು ಉಳಿಸಿಕೊಳ್ಳಲು, ನವೀಕರಿಸಲು ಮತ್ತು ಅಲಂಕಾರಿಕ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಡಿಕೆ, ತೆಂಗು, ಕಂಗು ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಕಸಿ ಕಟ್ಟುವುದನ್ನು ಉಪಕಸುಬಾಗಿ ಅಳವಡಿಸಿಕೊಂಡಿರುವುದು ಗಮನಾರ್ಹ. ಉತ್ತಮ ತಳಿ ಹಾಗು ಗುಣಮಟ್ಟದ ಇಳುವರಿ ಕೊಡುವ ಕಸಿ ಪದ್ಧತಿ ರೈತರಿಗೆ ವರದಾನವೇ ಸೈ.
ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ ಸೆಮ್.
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯