ಬೀರವಳ್ಳಿಯ ಕೆಂಡದೋಕುಳಿಯ ವೈಶಿಷ್ಟ್ಯ

Monday, March 30, 2009

ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣವನ್ನು ಎರಚಿಕೊಂಡು ಸಂಭ್ರಮಿಸುವುದು ಎಲ್ಲೆಡೆ ಕಂಡು ಬರುವ ಸಾಮಾನ್ಯ ದೃಶ್ಯ . ಬಣ್ಣದ ಬದಲು ಉರಿಯುವ ಕೆಂಡಗಳನ್ನೇ ಎತ್ತಿ ಎರಚಿದರೆ? ನಂಬಲು ಅಸಾಧ್ಯ ಅಲ್ಲವೇ? ಆದರೆ ಇದು ನಿಜ. ಕಲಘಟಗಿ ತಾಲೂಕು ಬೀರವಳ್ಳಿ ಗ್ರಾಮದ ಕಲ್ಮೇಶ್ವರನ ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳು ಕೆಂಡದೊಕುಳಿ ಆಡಿ ಹರಕೆ ತೀರಿಸುತ್ತಾರೆ.

ಬಣ್ಣಗಳ ಬದಲು ನಿಗಿ ನಿಗಿ ಉರಿಯುತ್ತಿರುವ ಕೆಂಡಗಳನ್ನು ಎರಚಿಕೊಂಡರೆ, ಮುಂದಿನ ವರ್ಷದ ಓಕುಳಿ ಆದುವುದು ದೂರದ ಮಾತು ಬಿಡಿ; ಹಬ್ಬವನ್ನು ಸಹ ಆಚರಿಸಲು ಭಕ್ತಾದಿಗಳು ಸಬಲರಾಗಿರಲಾರರು. ನಮ್ಮ ದೇಶದಲ್ಲಿ ಪವಾಡಗಳಿ ಕೊರತೆ ಇಲ್ಲ. ಬೀರವಳ್ಳಿ ಗ್ರಾಮದಲ್ಲಿ ನಡೆಯುವ ಓಕುಳಿಯಲ್ಲಿ ಕೆಂಡಗಳನ್ನು ಪರಸ್ಪರ ಮೈಮೇಲೆರೆಚಿಕೊಂಡರೂ ಸುಟ್ಟ ಗಾಯಗಳಾಗುವುದಿಲ್ಲ. ಭಕ್ತಿ ಭಾವಗಳ ಪರವಶತೆಯಲ್ಲಿ ಭಕ್ತರು ಕೆಂಡಗಳೊಂದಿಗೆ ಓಕುಳಿ ಆಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಶ್ರೀ ಕಲ್ಮೇಶ್ವರನಿಗೆ "ಕೆಂಡದ ನೈವೇದ್ಯ" ಮಾಡುವ ಮೂಲಕ ಜಾತ್ರೆ ಆಚರಿಸುವುದು ಈ ಭಾಗದ ವಿಶೇಷ.

ಕ್ರಿಸ್ತ ಶಕೆ ೧೨ ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಅರಸು ಎರಡನೇ ವಿಕ್ರಮಾದಿತ್ಯ ಈ ದೇವಾಲಯವನ್ನು ಕಟ್ಟಿಸಿದ. ಮಲೆನಾಡಿನ ಅಂಚಿನಲ್ಲಿ ಇರುವ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಬೀರವಳ್ಳಿ ಗ್ರಾಮದ ಶ್ರೀ. ಕಲ್ಮೆಶ್ವರ ಜಾತ್ರೆ ಹೋಳಿ ಹುಣ್ಣಿಮೆ ನಂತರ ಬರುವ ಷಷ್ಠಿಯಂದು ನಡೆಯುತ್ತದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಜಾತ್ರೆ ನಡೆಯುವ ಮೊದಲು ಕಲ್ಮೇಶ್ವರ ದೇವಸ್ಥಾನದ ಎದುರು ಇರುವ ಬಯಲಿನಲ್ಲಿ ಸಮೀಪದ ಕಾಡಿನಿಂದ ಕಟ್ಟಿಗೆಗಳನ್ನು ಕಡಿದು ತಂದು ರಾಶಿ ಹಾಕಿ ಅಗ್ನಿ ಪ್ರಜ್ವಲಿಸಲಾಗುತ್ತದೆ. ಅಗ್ನಿ ದೇವ ಕಟ್ಟಿಗೆಯ ರಾಶಿಯನ್ನು ಕೆಲ ತಾಸುಗಳಲ್ಲಿ ಕೆಂಡದ ರಾಶಿಯನ್ನಾಗಿ ಪರಿವರ್ತಿಸುತ್ತಾನೆ.

ಕೆಂಡದ ರಾಶಿಯಿಂದ ಕೆಂಡಗಳನ್ನು ನೈವೇದ್ಯ ಮಾಡಿದ ನಂತರ ಊರ ಗೌಡರನ್ನು ರಾಶಿಯ ಬಳಿ ಕುಳ್ಳಿರಿಸಿ ಅವರ ಮೇಲೆ ತೆಳ್ಳನೆಯ ಬಟ್ಟೆಯನ್ನು ಹಿಡಿಯಲಾಗುತ್ತದೆ. ಅದರಲ್ಲಿ ಮರದ ಹುಟ್ಟಿನಿಂದ ಕೆಂಡಗಳನ್ನು ಹಾಕಿ ಸುತ್ತ ನಿಂತವರ ಮೇಲೆ ತೂರಲಾಗುತ್ತದೆ. ಇಲ್ಲಿಂದ ಮುಂದೆ ನಡೆಯುವುದು ಕೆಂಡದೊಕುಳಿಯ ಪರಾಕು. ಹರಕೆ ಹೊತ್ತ ಯುವಕರು ಹಾಗೂ ಗ್ರಾಮಸ್ಥರು ಕೆಂಡಗಳನ್ನು ಬರಿಗೈಯಲ್ಲಿ ಹಿಡಿದು ತೂರಲು ಆರಂಭಿಸುತ್ತಾರೆ. ಕೆಂಡವನ್ನು ಕೈಯಲ್ಲಿ ಹಿಡಿದು ತೂರುವವರಿಗಾಗಲಿ ಅಥವಾ ಮೈ ಮೇಲೆ ಕೆಂಡಗಳು ಬಿದ್ದವರಿಗಾಗಲಿ ಯಾವುದೇ ಘತವಾಗದಿರುವುದು ವಿಸ್ಮಯಕಾರಿ. ಕೆಂಡಗಳನ್ನು ಕೈಯಲ್ಲಿ ಹಿಡಿದಾಗ ಮಲ್ಲಿಗೆ ಹೂವಂತೆ ಅರಳುತ್ತವೆ ಎಂಬುದು ಗ್ರಾಮಸ್ಥರ ಶೃದ್ಧೆ.
ನಮಗೆ ಗೊತ್ತಿರುವಂತೆ ಹಿಂದೂ ಸಂಸ್ಕೃತಿ ವಿಸ್ಮಯಗಳ ಆಗರ. ಪ್ರತಿ ಹಬ್ಬಕ್ಕೊಂದು ವಿಶಿಷ್ಟ ರೀತಿಯ ಆಚರಣೆಗಳನ್ನು ಪಾಲಿಸುವುದರೊಂದಿಗೆ ಭಕ್ತರನ್ನು ಭಾವುಕರನ್ನಾಗಿಸುತ್ತದೆ. ಉದಾಹರಣೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಲಿತವಿರುವ ಸಿಡಿ ಏರುವ ಹರಕೆ. ಅದೇ ರೀತಿ ಕೆಂಡದೊಕುಳಿಯು ಸಹ ಒಂದು. ನಂಬಿಕೆಯೊಂದು ಇದ್ದರೆ ಸಾಕು ಕೆಂಡವು ಮಲ್ಲಿಗೆ ಎನ್ನುವುದಕ್ಕೆ ಬೀರವಳ್ಳಿಯ ಕೆಂಡದೊಕುಳಿ ಸಾಕ್ಷಿ. ಆಸ್ತಿಕರಿಗೆ ಇದು ವಿಶೇಷ ಓಕುಳಿ.
ಸು.ಶ್ರೀ.ಕೋಮಲ ಮೋಟಗಿ
ಪಿ.ಜಿ.ಡಿಜೆ.ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.

0 comments:

Post a Comment