ಹೊಸಯಲ್ಲಾಪುರದ ಕಹಿ ಕೆರೆಯ ಮಧ್ಯೆ ಸಿಹಿ ಬಾವಿ

Saturday, March 7, 2009

ಹೆಸರಿಗೆ ಅದು ಹೊಸಯಲ್ಲಾಪುರ. ಅಲ್ಲಿ ಇರುವುದೆಲ್ಲ ಹಳೆಯದೇ! ಅಲ್ಲಿರುವ ಬಾವಿಗಳು ಕನಿಷ್ಟ ಒಂದು ಶತಮಾನದ ಮಡಿವಾಳರ ಬದುಕನ್ನು ಸಾರುತ್ತವೆ. ಪಕ್ಕದಲ್ಲಿಯೇ ಲೋಕದ ಸಂತೆ ಮುಗಿಸಿ ನಿಶ್ಚಿಂತೆಯಿಂದ ಮಲಗಿದವರೂ ಇದ್ದಾರೆ. ಸದಾ ಸುಣ್ಣದ ಭಟ್ಟಿಯ ಧೂಳೆಬ್ಬಿಸುವ ಸುಣಗಾರರೂ ಇಲ್ಲಿದ್ದಾರೆ. ಇಡೀ ದಕ್ಷಿಣ ಧಾರವಾಡದ ಹೊಲಸನ್ನೆಲ್ಲ ತನ್ನ ಉದರದಲ್ಲಿ ತುಂಬಿಕೊಂಡು ಮೂಕವಾಗಿ ರೋಧಿಸುತ್ತಿರುವ ಕೋಳಿ ಕೆರೆ ಇವಕ್ಕೆಲ್ಲ ಕಿರೀಟಪ್ರಾಯವಾದುದು.

ಮನುಷ್ಯ ಇಡೀ ಜಗತ್ತನ್ನು ನಡುಗಿಸಬಲ್ಲ ಶಕ್ತಿ, ಯುಕ್ತಿ ಎರಡನ್ನೂ ಉಳ್ಳವ. ಆದರೆ ನಿಸರ್ಗ ಎಂಬ ಕೌತುಕದ ಮುಂದೆ ತೀರ ಕುಬ್ಜ. ವೈಜ್ಞಾನಿಕ ವಿಷಯಗಳ ಖ್ಯಾತ ಅಂಕಣಕಾರ ನಾಗೇಶ ಹೆಗಡೆ ಹೇಳುತ್ತಾರೆ.." ಭೂಮಿಗೆ ಈಗ ಜ್ವರ ಬಂದಿದೆ. ಸದ್ಯದಲ್ಲಿಯೇ ನೆತ್ತಿಗೆ ಏರಲಿದೆ. ಸಕಾಲಿಕವಾಗಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸದೇ ಹೋದರೆ ನಮ್ಮ ಬದುಕು ದುರ್ಭರವಾಗಲಿದೆ".

ಪರಿಸರವಾದಿ ಡಾ.ಶಿವರಾಮ ಕಾರಂತರ ಮಾತು ಇಲ್ಲಿ ಪ್ರಸ್ತುತ ಎನಿಸುತ್ತದೆ. ‘ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ’! ಈ ಮಾತು ಧಾರವಾಡದ ಬಾವಿಗಳ ಪಾಲಿಗಂತೂ ಸತ್ಯ.

ಮೊದಲೇ ನಾನು ಉಲ್ಲೇಖಿಸಿರುವಂತೆ ಈ ಕೋಳಿಕೆರೆಗೆ ತಾಗಿಕೊಂಡು ಕುಡಿಯಲು ಯೋಗ್ಯವಾದ ೨ ಬಾವಿಗಳಿವೆ ಎಂದರೆ ನೀವು ನಂಬಬೇಕು. ಒಂದು ಬಾವಿಯನ್ನು ಮಡಿವಾಳರು ಬಟ್ಟೆ ತೊಳೆಯಲು ಹಾಗು ೭೦ ಅಡಿ ದೂರದ ಎರಡನೇ ಬಾವಿಯನ್ನು ಕುಡಿಯಲು ಬಳಸುತ್ತಾರೆ. ಈ ಬಾವಿಗಳು ಬ್ರಿಟೀಷರ ಕಾಲದಲ್ಲಿ ಕಟ್ಟಿಸಲ್ಪಟ್ಟಿವೆ. ೯೦ ವರ್ಷಗಳ ಪೂರ್ವದಲ್ಲಿ ೪೦ ಅಡಿ ಆಳ, ೧೦ ಅಡಿ ಅಗಲ ತೋಡಿಸಲ್ಪಟ್ಟಿವೆ.

ಕಮಲ ಕೆಸರಲ್ಲಿ ಹುಟ್ಟಿದರೂ ತನ್ನ ಸೌಂದರ್ಯದಿಂದಾಗಿ ಜನರನ್ನು ಆಕರ್ಷಿಸುತ್ತದೆ. ಹಾಗೆ ಈ ಬಾವಿಗಳು ಕೂಡಾ ತನ್ನ ಸುತ್ತಲೂ ಕೊಳಚೆ ನೀರು ಆವರಿಸಿ, ಗಬ್ಬೆದ್ದು ನಾರಿದರೂ ತನ್ನ ನೀರಿನ ಸಿಹಿ ಗುಣ ಮಾತ್ರ ಕಳೆದುಕೊಂಡಿಲ್ಲ. ಸುಮಾರು ವರ್ಷಗಳಿಂದ ಜನರು ಈ ಬಾವಿಯ ನೀರನ್ನು ಕುಡಿಯಲು ಬಳಸುತ್ತ ಬಂದಿದ್ದಾರೆ. ಇಂದಿಗೂ ಸಹಿತ ಮಡಿವಾಳ ಜನಾಂಗದ ಹತ್ತು ಕುಟುಂಬಗಳು ಈ ನೀರನ್ನು ಬಳಸುತ್ತಿವೆ. ಮತ್ತೊಂದು ವಿಶೇಷವೆಂದರೆ ಇಲ್ಲಿಯವರೆಗೆ ಯಾವುದೇ ಖಾಯಿಲೆಯಿಂದ ಜನ ನರಳಿಲ್ಲ. "ಈ ಸಿಹಿ ನೀರಿನ ಅಪರೂಪದ ಬಾವಿಯನ್ನು ಗಂಗಾದೇವಿ ನಮಗೆ ಕರುಣಿಸಿದ್ದಾಳೆ" ಎಂದು ಮಡಿವಾಳ ಕುಂಟುಬದ ಹಿರಿಯ ಭೀಮಸೇನ್ ಹೇಳುತ್ತಾರೆ.

ಈ ಬಾವಿಯ ಸಂಪೂರ್ಣ ಜವಾಬ್ದಾರಿ ಮಡಿವಾಳರ ಸುಪರ್ದಿಗೆ ಸೇರಿದೆ. ಇಂತಹ ವೈಶಿಷ್ಟ್ಯವನ್ನು ಉಳಿಸಿ, ಬೆಳಿಸಿಕೊಂಡು ಹೋಗಬೇಕಾಗಿರುವುದು ಇಂದಿನ ಅವಶ್ಯಕತೆ.

ಸುರೇಶ ನಾಯ್ಕ್
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.

0 comments:

Post a Comment