ಬದುಕಿಗೆ ಗೌರವದ ಭಾಷ್ಯ ಬರೆದ ಸೋಮು

Thursday, March 26, 2009

ಗೋಧೂಳಿಯ ಹೊತ್ತಿಗೆ ಎಲ್ಲ ಶಾಲೆ, ಕಾಲೇಜುಗಳು, ಕಚೇರಿಗಳು ತಮ್ಮ ದೈನಂದಿನ ಕೆಲಸವನ್ನು ಮುಗಿಸುತ್ತವೆ. ಆದರೆ ಆ ಹೊತ್ತಿಗೆ ತಮ್ಮ ಕೆಲಸ ಶುರು ಎಂದು ಭರದಿಂದ ನಮ್ಮನ್ನು ಕೈಬೀಸಿ ಕರೆಯುತ್ತಾರೆ ನಾನಾ ತಿನಿಸುಗಳ ತಳ್ಳು ಗಾಡಿಗಳ ಮಾಲೀಕರು. ಸೀಮೆ ಎಣ್ಣೆ ಅಥವಾ ಗ್ಯಾಸ್ ನಿಂದ ಉರಿಯುವ ಒಲೆಗಳಿಗೆ ಸಂಜೆಯ ಕೆಲವು ಗಂಟೆಗಳು ಬಿಡುವಿಲ್ಲದ ಕೆಲಸ. ಅಲ್ಲಿ ಹುರಿಯುವ ಶೇಂಗಾ ಕಾಳಿಗೆ, ಬೇಯುವ ಆಮ್ಲೆಟ್ ಗೆ, ಪಾನಿಪುರಿಗೆ, ಗೋಭಿ ಮಂಚೂರಿಗೆ.. ಆಹಾ ಆ ರುಚಿಗೆ ಮನಸೋಲದವರಾರು?


ಸೌತೆಕಾಯಿಯನ್ನು ಕಲಾತ್ಮಕವಾಗಿ ಕತ್ತರಿಸಿ ಖಾದ್ಯಗಳ ಮೇಲಿಟ್ಟು, ಸ್ವಲ್ಪ ನಿಂಬೆಹಣ್ಣಿನ ರಸ ಮತ್ತೆ ಖಾರದ ಪುಡಿ, ಉಪ್ಪನ್ನು ಸವರಿಕೊಟ್ಟರೂ ವ್ಯಾಪಾರಿಯ ಜೇಬು ತುಂಬುತ್ತದೆ ಅಲ್ಲವೇ? ಪಕ್ಕದಲ್ಲಿ ಪಂಚತಾರಾ ಹೊಟೇಲುಗಳಿದ್ದರೂ ಜನ ಈ ರುಚಿಗೆ ಮನಸೋತು, ತಳ್ಳು ಗಾಡಿಗಳು ತಮ್ಮ ಕೆಲಸ ಪ್ರಾರಂಭಿಸುತ್ತಿದ್ದಂತೆ ಮುಗಿ ಬೀಳಲು ಹಾತೊರೆಯುತ್ತಾರೆ. ಇದೆಂತಹ ಸಮುದಾಯ ಮೋಡಿಯ ಸಂಗತಿಯೋ ನೋಡಿ ?

ಕುರುಕಲು ತಿಂಡಿಯ ತಳ್ಳುಗಾಡಿಯವರದು ನಿತ್ಯ ಸಂಜೆ ಕೆಲವೇ ಗಂಟೆಗಳ ವ್ಯಾಪಾರ. ಅದು ಶಹರ ದೊಡ್ಡದಿರಲಿ ಅಥವಾ ಸಣ್ಣದಿರಲಿ ಜನಕೂಡ ಸಂಜೆಯ ಹೊತ್ತಿನಲ್ಲಿ ಬಿಡುವು ಮಾಡಿಕೊಂಡು ಈ ಸಂಚಾರಿ ಹೊಟೇಲುಗಳಿಗೆ ಬಂದು ತಮಗಿಷ್ಟವಾದ ಖಾದ್ಯಗಳನ್ನು ಕುಟುಂಬ ಸಮೇತ ಸೇವಿಸುತ್ತಾರೆ. ಕಡಿಮೆ ಬೆಲೆಗೆ, ಬಾಯಿ ಚಪಲಕ್ಕೆ, ರುಚಿ ರಸಿಕತೆಯಿಂದ ಹೆಚ್ಚು ತಿನ್ನಬಹುದು ಎಂಬ ಸಣ್ಣ ದುರಾಸೆಯಿಂದಲೂ ಇರಬಹುದು!

ಮೊದಲು ಇದು ಬಡವರಿಂದ, ಬಡವರಿಗಾಗಿ ನಡೆಸಲ್ಪಡುವ ‘ವಡಾಪಾವ್’ ವ್ಯಾಪಾರ ಎಂದು ಕರೆಯಲ್ಪಡುತ್ತಿತ್ತು. ಈಗ ಎಲ್ಲ ವರ್ಗದ ಜನರಿಗೂ ಇದು ಆಕರ್ಷಣೀಯವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ ತಳ್ಳುಗಾಡಿಯನ್ನೇ ಬದುಕಿಗೆ ಆಧಾರವನ್ನಾಗಿರಿಸಿಕೊಂಡಿರುವ ಸೋಮು ಕುಮುಟಾದಿಂದ ಬಂದು ಇಲ್ಲಿ ನೆಲೆಸಿದವರು. ಮೊದಲು ಹುಬ್ಬಳ್ಳಿಯ ಎ.ಪಿ.ಎಮ್.ಸಿಯಲ್ಲಿ ಅವರಿಗೆ ಒಂದು ತಳ್ಳುಗಾಡಿ ಇತ್ತು. ಅದರಲ್ಲಿ ಮೋಟೆಯನ್ನು ಹೊತ್ತು ಅಂಗಡಿಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ಅದರೆ ಒಂದು ಸಣ್ಣ ಅಪಘಾತವಾಗಿ ಆ ಗಾಡಿ ಮುರಿದು ಹೋಯಿತು. ಅದನ್ನು ರಿಪೇರಿ ಮಾಡಿದರೂ ಅದು ಮೋಟೆಗಳನ್ನು ಎಳೆಯುವಂತಿರಲಿಲ್ಲ. ಅದರ ಚಕ್ರ ಸಂಪೂರ್ಣ ಮುರಿದಿತ್ತು. ಅದನ್ನು ಹಾಕಿಸುವ ಹಣವು ಅವರಲ್ಲಿ ಇರಲಿಲ್ಲ.

ಹಾಗಾಗಿ ಗಾಡಿಯನ್ನು ನಿಂತಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದು ಅನಿವಾರ್ಯವಾಯಿತು. ಆಗ ಅವರಿಗೆ ಹೊಳೆದದ್ದು ಈ ವ್ಯಾಪಾರ. ಹಾಗಾದರೆ ಹೇಗಿದೆ ಇವರ ವ್ಯಾಪಾರ? ಉತ್ತರಿಸುವಾಗ ಸೋಮು ಮುಖದಲ್ಲಿ ಕೊಂಚ ನಗು ಮೂಡುತ್ತದೆ. ವ್ಯಾಪಾರದ ಗುಟ್ಟು ಬಿಟ್ಟುಕೊಡದ ಜಾಣ್ಮೆ ಅವರಲ್ಲಿದೆ. "ಎ.ಪಿ.ಎಂ.ಸಿ ಯಲ್ಲಿ ಗಾಡಿ ತಳ್ಳುತ್ತಿದ್ದಾಗ ದಿನಕ್ಕೆ ೧೦೦ ರೂಪಾಯಿ ಸಿಗುತ್ತಿರಲಿಲ್ಲ. ಆದರೆ ಈಗ ಮಗನಿಗೆ ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ಮಗಳು ಎಮ್.ಎಸ್.ಡಬ್ಲು ಓದುತ್ತಿದಾಳೆ. ಒಂದು ಚಿಕ್ಕ ಸೂರು ಸಹ ಕಟ್ಟಿಕೊಂಡಿದ್ದೇನೆ" ಎಂದು ಧನ್ಯತೆ ಮೆರೆಯುತ್ತಾರೆ.

ಈ ತಳ್ಳು ಗಾಡಿಗಳು ಸೋಮು ಅವರಂತೆ ಪ್ರಾಮಾಣಿಕವಾಗಿ ದುಡಿದು, ಸ್ವಾವಲಂಬಿಯಾಗಿ ಬದುಕಬೇಕು ಎಂಬುವವರಿಗೆ ಪ್ರೇರಣಾದಾಯಿ. ಕಡಿಮೆ ಬಂಡವಾಳ, ಹೆಚ್ಚು ಲಾಭ ಬಯಸುವವರಿಗೆ ಅನುಕೂಲಕರವಾಗಿದೆ. ಈ ಗಾಡಿ ಬಳಸಿ ವ್ಯಾಪಾರ, ವ್ಯವಹಾರ ಮಾಡುವುದಕ್ಕೆ ಪರವಾನಗಿ ಶುಲ್ಕವೆಂದು ೨೫/- ರಿಂದ ೧೦೦/- ವರೆಗೆ ಕರ ವಿಧಿಸಲಾಗುತ್ತದೆ. ಬ್ಯಾಂಕುಗಳು ಕೂಡಾ ಈ ಗಾಡಿಯನ್ನು ಖರೀದಿಸಲು ಸಾಲವನ್ನು ನೀಡುತ್ತವೆ.

ಕಾಯಿದೆ ಪ್ರಕಾರ ಒಂದು ಕಡೆ ನಿಲ್ಲದೇ ನಿರಂತರ ಜಂಗಮರಾಗಿ ವ್ಯಾಪಾರ ಮಾಡಬೇಕೆಂಬ ನಿಯಮವಿದೆ. ಜೊತೆಗೆ ಉಳಿದ ಅಂಗಡಿ, ಹೊಟೇಲುಗಳವರ ತಕರಾರು ಬೇರೆ. ಅದಕ್ಕಾಗಿ ಉದ್ಯಾನ, ಕ್ರೀಡಾಂಗಣ, ಬಯಲು ನಾಟ್ಯ ಮಂದಿರಗಳು, ರಂಗ ಮಂದಿರಗಳು, ಸಿನೇಮಾ ಗ್ರಹಗಳು, ಕಾಲೇಜು ಹೊರವಲಯ ಸೇರಿದಂತೆ ಮತ್ತಿತರ ಖಾಲಿ ಇರುವ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಸೋಮು. ಇದಲ್ಲದೆ ತರಕಾರಿಗಳನ್ನು, ಹಾಲಿನ ಪ್ಯಾಕೇಟುಗಳನ್ನು, ಹಣ್ಣುಗಳನ್ನು ಸಹ ಕೆಲವು ವ್ಯಾಪಾರಿಗಳು ಈ ತಳ್ಳುಗಾಡಿಗಳಲ್ಲಿ ಹಾಕಿಕೊಂಡು ಮನೆಮನೆಗೆ ಮಾರುತ್ತಾರೆ. ಮಹಿಳೆಯರೂ ಇದಕ್ಕೆ ಹೊರತಲ್ಲ.

ಇತ್ತೀಚೆಗೆ ಈ ತಳ್ಳು ಗಾಡಿಯನ್ನು ತಯಾರಿಸುವುದರಲ್ಲೂ ಅಂಗಡಿಯವರು ಲಾಭಗಳಿಸುತ್ತಿದ್ದಾರೆ. ಮರದ ಅಥವಾ ಪ್ಲಾಸ್ಟಿಕ್ ಹಲಗೆ, ಅದಕ್ಕೊಂದು ಸೂರು ನೆರಳಿಗೆ ಆಧಾರವಾಗಿ, ಎರಡು ಚಕ್ರಗಳು ನಾಲ್ಕು ಖಂಬ ಇಷ್ಟರಲ್ಲಿಯೇ ಮೊದಲು ಗಾಡಿ ಮುಗಿಯುತ್ತಿತ್ತು. ಈಗ ಅದರಲ್ಲೂ ವಿವಿಧ ಅಲಂಕಾರಿಕ ರೂಪಗಳು ನಿರ್ಮಾಣಗೊಳ್ಳುತ್ತಿವೆ.

ಹಾಗಾಗಿ ಉದ್ಯೋಗವಿಲ್ಲ ಎಂದು ಕೊರಗುವ ಯುವಕರಿಗೆ ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಸೋಮು ಮಾದರಿಯಾಗಿದ್ದಾರೆ. ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ, ಸ್ವಾಭಿಮಾನದ ಬದುಕು ತಮಗೂ ತಮ್ಮ ಕುಟುಂಬಕ್ಕೂ ಕಲ್ಪಿಸಿ ಏಳಿಗೆ ಸಾಧಿಸಿರುವ ಸೋಮು ನಮಗೆ ಅನುಕರಣೀಯರಾಗಿ ನಿಲ್ಲುತ್ತಾರೆ.

ಹಾಗಿದ್ದರೆ ತಡಯಾಕೆ? ಒಂದು ಸಾರಿ ಸೋಮು ಅವರ ಹೊಟೇಲಿಗೆ ಭೇಟಿ ನೀಡಿ. ಅಲ್ಲಿರುವ ಖಾದ್ಯಗಳನ್ನು ಸವಿಯಿರಿ. ತಾವು ಕಲಿಯದಿದ್ದರೂ ತಮ್ಮ ಮಕ್ಕಳು ಕಲಿಯಲೆಂದು ಅವಿರತ ಶ್ರಮ ಪಡುತ್ತಿರುವ ಸೋಮು ಅವರ ಸ್ವಾಭಿಮನಿ ಬದುಕಿಗೆ ನಮ್ಮ ಕೈಲಾದ ಸಹಾಯ ಅದಾಗಬಲ್ಲದು.
ನಮ್ಮ ಸಂಸಾರದಲ್ಲಿ ಸೋಮು ಅವರಂತಹ ಇಂತಹ ಚಿಕ್ಕ ಚಿಕ್ಕ ದೀಪಗಳೇ ಕುಲ ಸಂಸಾರದ ನಿಜ ಕುಲದೀಪಗಳು ಎಂಬುದರಲ್ಲಿ ಸಂಶಯವಿಲ್ಲ.

ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

0 comments:

Post a Comment