Tuesday, February 24, 2009


ಪಿ.ಜಿ.ಡಿ.ಜೆ.ಎಂ. ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯
ನೀರಿಗೂ ನವಲಗುಂದಕ್ಕೂ ದಶಕಗಳ ಎಣ್ಣೆ-ಸೀಗಿಕಾಯಿ ಸಂಬಂಧ! ಕುಡಿಯುವ ನೀರಿನ ಬರ ಎಂದರೆ ನವಲಗುಂದದ್ದು ಎಂಬುವಷ್ಟು ಜನಜನಿತ ಇಲ್ಲಿನ ಪರಿಸ್ಥಿತಿ. 'ನೀರಿಲ್ಲದ ಊರು ನವಲಗುಂದ' ಕ್ಕೆ ಕುಡಿಯುವ ನೀರಿನ ಕೆರೆಯನ್ನು ೧೯೩೮ರಲ್ಲಿ ಕಟ್ಟಿಸಿ, ಪುಣ್ಯ ಕಟ್ಟಿಕೊಂಡವರು ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯರ ಸಹೋದರಿ ನೀಲಮ್ಮನವರು. ಅನೇಕ ದಶಕಗಳಿಂದ ಇಡೀ ನವಲಗುಂದ ಊರಿಗೆ ಅವರ ಹೆಸರಿನಲ್ಲಿಯೇ ಇರುವ ಈ ಕೆರೆ ಜೀವದಾಯಿಯಾಗಿತ್ತು. ಶಿರಸಂಗಿಯ ಲಿಂಗರಾಜ ದೇಸಾಯರು ತಮ್ಮ ತಂಗಿ ನೀಲಮ್ಮನವರಿಗೆ ೧೯ ಎಕರೆ ಜಮೀನನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ಈ ತಾಯಿ ನವಲಗುಂದದ ಜನಕ್ಕೆ ಸ್ವಚ್ಛ ಕುಡಿಯುವ ನೀರು ಒದಗಿಸುವ ಘನ ಉದ್ದೇಶದಿಂದ ತಮ್ಮ ಜಮೀನಿನಲ್ಲಿಯೇ ದೊಡ್ಡ ಕೆರೆಯನ್ನು ನಿರ್ಮಿಸಿದರು. ಜನತೆಗೆ ಕುಡಿಯುವ ನೀರನ್ನು ಒದಗಿಸಿ ಅವಿಸ್ಮರಣೀಯ ಕಾರ್ಯ ಮಾಡಿದರು.
ತೋಳನಕೆರೆಯು ಈಗ ನಾಡತೋಳಗಳ ದಾಳಿಗೆ ಸಿಲುಕಿ 'ತೋಳನಕೇರಿ' ಆಗುವತ್ತ ದಾಪುಗಾಲು ಇಡುತ್ತಿದೆ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೩೫ನೇ ವಾರ್ಡಿನ ತೋಳನಕೆರೆಯ ಒಟ್ಟು ವಿಸ್ತೀರ್ಣ ೨೩ ಎಕರೆ, ೩೨ ಗುಂಟೆ.
ವಾಣಿಜ್ಯ ನಗರಿಯ ವಾಣಿಜ್ಯ ಪಟುಗಳ ಕಣ್ಣು ಕುಕ್ಕದಿರುತ್ತದೆಯೇ? ಕೆರೆಯ ಸುತ್ತಲೂ ವ್ಯವಸ್ಥಿತ ಬಡಾವಣೆ ನಿರ್ಮಾಣಗೊಂಡು ದಶಕವೇ ಉರುಳುತ್ತಿದೆ. ಅತಿಕ್ರಮಣದ ಪರಿಣಾಮವಾಗಿ ಸದ್ಯ ೧೦ ರಿಂದ ೧೨ ಎಕರೆಗಳಷ್ಟು ಮಾತ್ರ ಕೆರೆ ಉಳಿದಿದೆ. ಸುತ್ತಲೂ ಅಷ್ಟೇ ಅವ್ಯವಸ್ಥೆ ರಾರಾಜಿಸುತ್ತಿದೆ. ಬಡಾವಣೆಯ ಫಲವಾಗಿ ಗಬ್ಬೆದ್ದು ನಾರುವ ಹೊಲಸೆಲ್ಲವನ್ನು ತನ್ನ ಉದರದಲ್ಲಿ ತುಂಬಿಕೊಂಡು ಮೂಕ ವೇದನೆ ಕೆರೆ ಅನುಭವಿಸುತ್ತಿದೆ.
೧೯೮೦ರಲ್ಲಿ ಇದೊಂದು ನಯನಮನೋಹರ ಕೆರೆಯಾಗಿತ್ತು. ಈ ಕೆರೆಯ ನೀರನ್ನು ಸುತ್ತಲಿನ ಬಡಾವಣೆಗಳಲ್ಲಿ ಬಳಸಲಾಗುತ್ತಿತ್ತು. ಪಟ್ಟಣ ಬೆಳೆದಂತೆ ಕೆರೆಯ ಸುತ್ತಲೂ ವಸತಿ ಸಂಕೀರ್ಣ ನಿರ್ಮಾಣಗೊಂಡಿತು. ಈಗ ಅದು ಕೇರಿ. ರವಿ ನಗರ, ಬಸವೇಶ್ವರ ನಗರ, ಲಕ್ಷ್ಮೀ ನಗರ, ಮಠಪತಿ ಲೇಔಟ್, ರೇಣುಕಾನಗರ, ಗಾಂಧಿ ನಗರ, ವಿವೇಕಾನಂದನಗರ, ಸೆಂಟ್ರಲ್ ಎಕ್ಸೈಜ್ ಕಾಲೋನಿ, ನೆಹರೂ ನಗರ ಒಂದನೇ ಹಂತ, ಕುಮಾರ ಪಾರ್ಕ್, ಸನ್ಮಾರ್ಗ ನಗರ, ಕಲ್ಬುರ್ಗಿ ಲೇಔಟ್, ಪದ್ಮಾವತಿ ಹೌಸಿಂಗ್ ಸೊಸಾಯಿಟಿ, ಗಣೇಶ್ ಲೇಔಟ್ ಹೀಗೆ ಅನೇಕ ಬಡಾವಣೆಗಳ ಒಳಚರಂಡಿ ನೀರನ್ನು ತೋಳನಕೆರೆಗೆ ಹರಿ ಬಿಡಲಾಗುತ್ತಿದೆ. ಹೀಗಾಗಿ ಮೊದಲು ಉಪಯೋಗಿಸಲು ಯೋಗ್ಯವಾಗಿದ್ದ ನೀರು ಈಗ ಚರಂಡಿ ನೀರಾಗಿ ಪರಿವರ್ತನೆಗೊಳ್ಳುತ್ತಿದೆ. ಈ ನೀರಿನ ದುರ್ವಾಸನೆ ಹಾಗು ಅನಾರೋಗ್ಯಪೂರ್ಣಾ ವಾತಾವರಣದಿಂದಾಗಿ ಜನ ದವಾಖಾನೆಗೆ ನಿತ್ಯ ಎಡತಾಕುವಂತಾಗಿದೆ.
ತೋಳನಕೆರೆಯ ದಂಡೆಯ ಹತ್ತಿರವೇ ವಾಸವಾಗಿರುವ ಶ್ಯಾಮಲಾ ಅವರು ಹೇಳುತ್ತಾರೆ.."ಅಯ್ಯೋ..ಈಗ ಗಬ್ಬು ನಾಥ. ಮೊದಲು ನಾವೆಲ್ಲ ಕುಡಿಯಾಕ ಬಳಸ್ತಿದ್ವಿ. ಈಗ ಕಸ ಹಾಕೋ ತೊಟ್ಟಿ ಥರ ಆಗಿಹೋಗೇತಿ. ನಮ್ಮ ಜನಕ್ಕೂ ಕಾಳಜಿ ಅಷ್ಟಕ್ಕಷ್ಟ".
ಕಳೆದ ೪ ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಿಂದ ಹೊತ್ತು ತರಲಾದ ಮಣ್ಣು, ಕಾಂಕ್ರೀಟ್ ತ್ಯಾಜ್ಯವನ್ನು ಕೆರೆಗೆ ಹಾಕಿ ಹೂಳು ತುಂಬುವಂತೆ ಸಹ ಮಾಡಲಾಗುತ್ತಿದೆ. ಕೆರೆಯ ಈ ದಯನೀಯ ಪರಿಸ್ಥಿತಿ ಗಮನಕ್ಕೆ ಬರುತ್ತಲೇ ಅವಳಿ ನಗರ ಪಾಲಿಕೆಯ ಅಂದಿನ ಆಯುಕ್ತರಾಗಿದ್ದ ಪಿ.ಮಣಿವಣ್ಣನ್ ಸ್ವತ: ಭೇಟಿ ನೀಡಿ, ಸಮೀಕ್ಷೆ ಕೈಗೊಂಡಿದ್ದರು. ಕೆರೆಯ ಪುನರುಜ್ಜೀವನಕ್ಕೆ ಕ್ರಿಯಾಯೋಜನೆ ಸಲ್ಲಿಸುವಂತೆ ಸ್ಥಳೀಯ ವಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಈ ನಿರ್ಣಯ ಕೈಗೊಂಡ ಒಂದೇ ವಾರದಲ್ಲಿ ಮೈಸೂರಿಗೆ ಅವರ ವರ್ಗಾವಣೆಯಾಯಿತು. ಇದು ಬಹುಶ: ಕೆರೆಯ ದುರ್ದೈವ.
ಈ ಕೆರೆಯನ್ನು ಭೂ ಮತ್ತು ವಿಜ್ಞಾನ ಇಲಾಖೆಯವರು (ಸದ್ಯ ೧೨) ಇಟ್ಟಂಗಿ ಭಟ್ಟಿಯವರಿಗೆ ಕರಾರಿನ ಮೇರೆಗೆ ಉಪಯೋಗಿಸಲು ನೀಡಿದ್ದರು. ಆದರೆ ಇಲ್ಲಿನ ಇಟ್ಟಂಗಿ ಭಟ್ಟಿಯವರು ಕರಾರು ಅವಧಿ ಮುಗಿದಿದ್ದರೂ ಕೆರೆಯ ಸುತ್ತಮುತ್ತಲೂ ಇಟ್ಟಂಗಿ ತಯಾರಿಸುವಲ್ಲಿ ಮಗ್ನರಾಗಿದ್ದಾರೆ.
ತೋಳನಕೇರಿಗೆ ಸೇರಿಸಲಾಗಿರುವ ಸುತ್ತಮುತ್ತಲಿನ ಬಡಾವಣೆಗಳ ಗಟಾರುಗಳನ್ನು ಬೇರೆಡೆ ತಿರುಗಿಸಿ ಕೆರೆ ಕಾಪಾಡುವಂತೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆಯ ಗಮನ ಸೆಳೆಯುವ ಪ್ರಯತ್ನ ಮತ್ತೊಮ್ಮೆ ಕೂಡ ಮಾಡಿದ್ದಾರೆ. ಪಾಲಿಕೆ ಮಾತ್ರ ಕೆರೆಯ 'ಪಾಲಕ'ನಾಗಲು ಸಿದ್ಧವಿಲ್ಲ. ಈ ಚರಂಡಿ ನೀರನ್ನು ಬೇರೆ ಮಾರ್ಗವಾಗಿ ಕೆರೆ ದಾಟಿಸಿ ಸಾಗುಹಾಕಿದ್ದಾದರೆ ಮರಣ ಶೆಯ್ಯೆಯಲ್ಲಿರುವ ಕೆರೆ ತುಸು ಚೇತರಿಸಿಕೊಳ್ಳಬಹುದು. ಸ್ಥಳೀಯರು ಕೂಡ ತಮ್ಮ ಕೈಜೋಡಿಸಲು ಸಿದ್ಧರಿದ್ದಾರೆ. ಪಾಲಿಕೆ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಯ ಪುನರುಜ್ಜೀವಕ್ಕೆ ಮುಂದಾಗಬೇಕಿದೆ. ಕೆರೆಗಳನ್ನು ಹಾಳುಗೆಡವಿ ಕೇರಿಗಳನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಕೇರಿಗಳನ್ನು ಕೆರೆಗಳನ್ನಾಗಿ ಅಷ್ಟು ಸುಲಭವಾಗಿ ಪರಿವರ್ತಿಸಬಹುದೇ?
ಖ್ಯಾತ ಪರಿಸರವಾದಿ ಡಾ.ಶಿವರಾಮ ಕಾರಂತರು ಹೇಳುತ್ತಿದ್ದರು.."ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ" ಈ ಮಾತು ಇಂದಿಗೂ ಪ್ರಸ್ತುತ.
ಕೋಮಲ ರಾಜಶೇಖರ ಮೋಟಗಿ
ಪಿ.ಜಿ.ಡಿ.ಜೆ.ಎಂ. ೧ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ- ಹುಬ್ಬಳ್ಳಿ- ೨೯.
ಪ್ರಕೃತಿದತ್ತ ಜೀವಿ ದ್ರವ್ಯ ನೀರು. ಜಗತ್ತಿನ ಎಲ್ಲ ಜೀವ ಕೋಟಿಗಳಿಗೆ ಇದು ಬದುಕಿಗೆ ಆಧಾರ. ನೀರನ್ನು ಸತತವಾಗಿ ಕುಡಿಯುವುದರಿಂದ ನೈಸರ್ಗಿಕವಾಗಿಯೇ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು. ಭಾರತೀಯ ಯೋಗ ವಿಜ್ಞಾನ ನೀರಿನ ಅಮೂಲ್ಯತೆಯನ್ನು ಸಮರ್ಪಕವಾಗಿ ಸಾರಿದೆ. ಆದರೂ ನಾವು ನೀರಿನ ಮೂಲಗಳನ್ನು ನ್ಯಾಯೋಚಿತವಾಗಿ ಬಳಸುವ ಮಾರ್ಗಗಳನ್ನು ಶೋಧಿಸುತ್ತಿಲ್ಲ ಎಂಬುದು ಆರೋಪ. ನಮ್ಮ ಭೂಮಿಯನ್ನು ಆವರಿಸಿರುವ ಒಟ್ಟು ನೀರಿನಲ್ಲಿ ಬಳಕೆಗೆ ಯೋಗ್ಯವಾದ ನೀರು ಶೇ. ೩ ರಷ್ಟು ಮಾತ್ರ! ಇದು ಚಿಂತನೆಗೆ ಈಡುಮಾಡುವಂತಹುದು.
ನಮ್ಮ ಹೂಬಳ್ಳಿಯ ಹತ್ತಿರದ ಉಣಕಲ್ ಕೆರೆ ಇಡೀ ನಗರಕ್ಕೆ ಮೆರಗು. ನಿತ್ಯ ಅವಳಿ ನಗರಗಳ ಮಧ್ಯೆ ಸಂಚರಿಸುವವರಿಗೆ ಈ ಕೆರೆ ವಿಶೇಷ ಆಕರ್ಷಣೆ. ಪ್ರಯಾಣಿಸುವವರು ಅತ್ತ ತಿರುಗಿ ಒಮ್ಮೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡ ಭಾವ. ಧಾರವಾಡದಿಂದ ಬರುವಾಗ ಎಡಬದಿಗೆ, ಹುಬ್ಬಳ್ಳಿಯಿಂದ ಹೋಗುವಾಗ ಬಲಬದಿಗೆ ಕಿಟಕಿಯ ಸೀಟು ಅಪೇಕ್ಷಿಸುವುದು ನಿತ್ಯದ ಪ್ರಯಾಸ. ಕಾರಣ ೧೮ ಕಿ.ಮೀ. ತಾಸುಗಟ್ಟಲೇ ಪ್ರವಾಸ ಪ್ರಯಾಸವಾಗದಿರಲಿ ಎಂದು! ಹಾಗೆಯೇ ಇಳಿಯಬೇಕಾದ ಸ್ಟಾಪ್ ಲೆಕ್ಕಹಾಕುವ ಗುಂಗಿನಲ್ಲಿ ಕೆರೆಯತ್ತ ಕಣ್ಣು ಹಾಯಿಸುವುದನ್ನು ಮರೆತಿದ್ದರೆ ಸಂಜೆ ಮರಳುವಾಗಾದರೂ ಒಮ್ಮೆ ನೋಡಿಯೇ ಹೋಗಬೇಕು ಎಂಬ ಮನದ ಇಂಗಿತ ತಣಿಸುವುದು ಸುಲಭವಲ್ಲ.
೧೮೯೩ರಲ್ಲಿ ಈ ಕೆರಯನ್ನು ಕಟ್ಟಲಾಯಿತು. ಇದು ಭಾರತರತ್ನ, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕಲ್ಪನೆಯ ಕೂಸು. ಅವರ ಕೆರೆ ಅಭಿವೃದ್ಧಿ ಯೋಜನೆಯ ಫಲವಾಗಿ ಹೂಬಳ್ಳಿಯವರಿಗೆ ದೊರಕಿದ ಕೆರೆ ಉಣಕಲ್ ಕೆರೆ.
"ನೀರು ಕೊಡಲ್ಯಾಕೆ ನಾನ್ಯಾರೋ..ನೀನ್ಯಾರೋಹೋಗಯ್ಯಾ ಹರಿಯೋ ಹೊಳೆಗಾಗಿ//
ಹರಿಯೋ ನೀರ್ ಹಚ್ಚಗೆ..ಕೆರೆಯ
ನೀರ್ ಬೆಚ್ಚಗೆನೀ ಕೊಟ್ಟ ನೀರು ಸಮರುಚಿ"//
ಎಂದು ನಮ್ಮ ಜಾನಪದ ಕವಿಗಳು ಹಾಡಿದಂತೆ ೧೮೯೩ರ ನಂತರ ಈ ಕೆರೆಯ ನೀರನ್ನು ಇಡೀ ಹುಬ್ಬಳ್ಳಿ ಮಹಾನಗರಕ್ಕೆ ಕುಡಿಯುವ ನೀರಾಗಿ ಪೂರೈಕೆ ಮಾಡಲಾಗುತ್ತಿತ್ತು. ಆಗಿನಿಂದ ಮಹಾನಗರಕ್ಕೆ ಕುಡಿಯುವ ನೀರಿನ ಅಭಾವ ಇರಲಿಲ್ಲ. ಆದರೆ ಹೂಬಳ್ಳಿ ವಾಣಿಜ್ಯ ನಗರಿಯಾಗಿ ಭರ್ಜರಿ ಬೆಳೆಯಿತು. ಅಂದಿನಿಂದ ಸೂಕ್ಷ್ಮವಾಗಿ ಈ ಕೆರೆಗೆ ಸರ್ಜರಿ ಆರಂಭವಾಯಿತು. ಪರಿಣಾಮವಾಗಿ ೧೦೪ ವರ್ಷಗಳು ಸತತವಾಗಿ ಹುಬ್ಬಳ್ಳಿಗರ ದಾಹ ತೀರಿಸಿದ ಕೆರೆ ೧೯೯೭ ರಲ್ಲಿ ತನ್ನ ಅನುಪಮ ಸೇವೆಯಿಂದ ನಿವೃತ್ತಿ ಹೊಂದಿತು.
ಈ ಉಣಕಲ್ ಕೆರೆಯ ಒಟ್ಟು ವಿಸ್ತೀರ್ಣ ಒಟ್ಟು ೨೫೦ ಎಕರೆಗಳು. ಕೆರೆಯ ಪಾತಳಿ ೯೦ ಮೀಟರ್ ಉದ್ದವಾಗಿದೆ. ೧ ಕಿ.ಮೀ ಉದ್ದದ ಕಟ್ಟೆಯನ್ನು ಸಹ ತಡೆಗೋಡೆಯಾಗಿ ನಿರ್ಮಿಸಲಾಗಿದೆ. ೮೦ ಘನ ಚದುರ ಅಡಿಗಳ ಒಡಲು ಹೊಂದಿದೆ. ಗೋಕುಲ ರಸ್ತೆ ಮತ್ತು ರಾಯಾಪುರ ಮಾರ್ಗವಾಗಿ ಕಾಲುವೆಗಳ ಮೂಲಕ ಇಲ್ಲಿಗೆ ನೀರು ಹರಿದು ಬರುತ್ತದೆ. ಕ್ಯಾಚ್ ಮೆಂಟ್ ಪ್ರದೇಶ ವ್ಯಾಪ್ತಿ ಸುಮಾರು ೨೦ ಕಿ.ಮೀ. ಇದೆ ಎಂದರೆ ನಾಡು ಕಂಡ ಪ್ರತಿಭಾಶಾಲಿ ಇಂಜಿನೀಯರ್ ವಿಶ್ವೇಶ್ವರಯ್ಯನವರ ದೂರದೃಷ್ಟಿ ನಮಗೆ ಅರ್ಥವಾಗಬಹುದು.
ಆದರೆ ಕೆರೆಯ ಸ್ಥಿತಿ ಇಂದು ಶೋಚನೀಯ. ಕೆರೆ ತನ್ನ ನಾಲ್ಕೂ ಮೂಲೆಗಳಿಂದ ಈಗ ಮಲೀನಗೊಳ್ಳುತ್ತಿದೆ. ಕೆರೆಯ ಸುತ್ತ ಹಾಗೆಯೇ ವೀಕ್ಷಣೆ ಮಾಡಿದರೆ ನಮಗೆ ಮಾಲಿನ್ಯದ ನೈಜ ಚಿತ್ರಣ ಕಣ್ಣಿಗೆ ರಾಚುತ್ತದೆ. ಕೆರೆಯ ಸುತ್ತಲೂ ಬಿದ್ದ ಸಿಮೆಂಟ್ ತುಂಬಲು ಬಳಸುವ ಪಾಲಿಥಿನ್ ಚೀಲಗಳು, ರಾಶಿ ಪ್ರಮಾಣದಲ್ಲಿ ತೇಲುತ್ತಿರುವ ಭಕ್ತ ಮಹಾಶಯರ ಹರಕೆಯ ಪಳೆಯುಳಿಕೆಗಳು! ಪ್ಲಾಸ್ತಿಕ್ ತ್ಯಾಜ್ಯ ತೇಲಾಡುವುದನ್ನು ನಾವು ಕಾಣುತ್ತೇವೆ. ಕೆರೆಗೆ ಹೊಂದಿಕೊಂಡಂತೆ ಪಂಚತಾರಾ ಶ್ರೇಣಿಯ ಹೊಟೇಲ್ ಇದೆ. ಅದು ಹೊರ ಹಾಕುವ ಮಾಲಿನ್ಯ ಕೂಡ ಪಂಚತಾರಾಶ್ರೇಣಿಯದ್ದೇ! ಹಾಗೆಯೇ ಸುತ್ತಮುತ್ತಲೂ ಇರುವ ವಾಹನಗಳ ಶೋ ರೂಮ್, ಸರ್ವಿಸ್ ಸೆಂಟರ್ ಗಳಿಂದ ಗಟಾರುಗಳ ಮೂಲಕ ಹರಿದು ಬರುವ ಅಣ್ಣೆ, ಗ್ರೀಸ್ ನಂತಹ ತ್ಯಾಜ್ಯ ಕೆರೆಯ ಜೀವಿ ವೈವಿಧ್ಯಕ್ಕೆ ಮರಣ ಮೃದಂಗ ಬಾರಿಸುತ್ತಿದೆ. ಕೆಲವರು ತಮ್ಮ ರಿಕ್ಷಾ, ಜೀಪ್, ಟ್ರ್ಯಾಕ್ಟರ್, ಕಾರು, ಲಾರಿ ಮೊದಲಾದ ವಾಹನಗಳನ್ನು ನೇರವಾಗಿ ನೀರಿಗಳಿಸಿ ಸ್ನಾನ ಮಾಡಿಸುತ್ತಾರೆ! ಸುತ್ತಮುತ್ತಲಿನ ನಿವಾಸಿಗಳ ಕೊಡುಗೆಯೂ ಅನುಪಮವಾದದದ್ದೇ! ತಮ್ಮ ಮನೆಗಳ ಮುಂದಿನ ಗಟಾರುಗಳನ್ನು ಕೆರೆಯ ಕ್ಯಾಚ್ ಮೆಂಟ್ ವ್ಯಾಪ್ತಿಗೆ ಸೇರಿಸಿ ನಿತ್ಯವೂ ಕೈತೊಳೆದುಕೊಳ್ಳುತ್ತಿದ್ದಾರೆ.
ಕೆಟ್ಟ ಮೇಲೆ ಬುದ್ಧಿ ಬಂತು..ನಮ್ಮ ಪಾಲಿಕೆಗೆ!
ಇತ್ತೀಚೆಗೆ ಅವಳಿ ನಗರ ಪಾಲಿಕೆ ಉಣಕಲ್ ಕೆರೆಯ ಶುದ್ಧೀಕರಣ ಮತ್ತು ಸಮರ್ಪಕ ನಿರ್ವಹಣೆಗೆ ಹತ್ತು ಕೋಟಿ ರುಪಾಯಿಗಳ ಯೋಜನೆ ರೂಪಿಸಿದೆ. ಕೆರೆಗೆ ಸೇರುತ್ತಿರುವ ವಿಷಯುಕ್ತ ನೀರನ್ನು ತಡೆಯಲಾಗುವುದು ಎನ್ನುತ್ತಾರೆ ವಲಯದ ಉಪ ಆಯುಕ್ತ ಎಸ್.ಎನ್.ಗಣಾಚಾರಿ. ಪ್ರಕೃತಿದತ್ತವಾಗಿರುವ ನೀರಿನ ಮೂಲಗಳನ್ನು ಬರಿದು ಮಾಡಿ, ಬರವನ್ನು ಸೃಷ್ಠಿಸಿಕೊಂಡಿದ್ದೇವೆ. ಅಂದರೆ ಒಂದು ಲೀಟರ್ ನೀರಿನ ಹಿತ-ಮಿತ ಬಳಕೆ ಅಥವಾ ಉಳಿಕೆ ೨ ಲೀಟರ್ ನೀರಿನ ಉಳಿತಾಯಕ್ಕೆ ಸಮ ಎಂಬ ಸರಳ ಸೂತ್ರ ಅರ್ಥವಾಗಿಲ್ಲ. ನಾವೆಲ್ಲ ಜಲಯೋಧರಾಗಲು ಇದು ಸಕಾಲ. ಇಲ್ಲದೇ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು.
ಪ್ರಭಾಕರ ಎಸ್. ಚಂದ್ರಪ್ಪನವರ್
ಎಂ.ಎ.ಜೆ.ಎಂ. ೧ ಸೆಮ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ನನ್ನಲ್ಲಿ ವಿಶೇಷ ಜಿಜ್ಞಾಸೆ ಮೂಡಿಸಿದೆ.
"ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ; ನೋಟ ಸಮುದ್ರದಂತಹ ಪ್ರಾಣಿ" ಒಲುಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿಗಳ ಮಾತು ಡಾ. ಉಮೇಶ ನಾಗಲೋಟಿಮಠ ಅವರಿಗೆ ಅಕ್ಷರಶ: ಅನ್ವಯಿಸುತ್ತದೆ. ಕಾರಣ,
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ, ಇಡಿ ಆಸ್ಪತ್ರೆಗೆ ಇಂಧನ ಮೂಲವಾಗಿ ಬಳಸಿದ ಹೆಗ್ಗಳಿಕೆ ಹುಬ್ಬಳ್ಳಿಯ ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ದ್ದು. ಆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ ನಾಗಲೋಟಿಮಠ. ಅವರು ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿದ್ದ ದಿ. ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ.
ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಲ್ಲಿ ಕಿವಿ, ಗಂಟಲು ಹಾಗು ಮೂಗು ಶಸ್ತ್ರ ಚಿಕಿತ್ಸಾ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ
ಸುಜಾತಾ ವಜ್ರಳ್ಳಿ
ಎಂ.ಎ.ಜೆ.ಎಂ. ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯