ಪರಿಸರದ ಪ್ರತಿ ಪ್ರೀತಿ ಇಲ್ಲದ ಪ್ರೇಮಿಗಳ ತಾಣ: ನೃಪತುಂಗ ಬೆಟ್ಟ.

Tuesday, February 24, 2009

ಹೂಬಳ್ಳಿಯ ಹುಬ್ಬಳ್ಳಿ ಹಲವಾರು ವಿಷಯಗಳಿಗೆ ಖ್ಯಾತಿವೆತ್ತ ನಗರ. ವಾಣಿಜ್ಯ ನಗರಿ ಎಂದು ಪ್ರಸಿದ್ಧಿ ಪಡೆದಿರುವ ನಗರ ಅನೇಕ ಸುಂದರ ತಾಣಗಳ ಬೀಡು. 'ಐಕಾನಿಕ್' ತಾಣಗಳ ದೃಷ್ಟಿಯಿಂದ ಇಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲವುಗಳು ಎಂದರೆ, ಮೂರುಸಾವಿರ ಮಠ, ನೃಪತುಂಗ ಬೆಟ್ಟ ಹಾಗು ಉಣಕಲ್ ಕೆರೆ.

ಜನ ಇಂದಿನ ಯಾಂತ್ರಿಕ ಜೀವನಕ್ಕೆ ಅಂಟಿಕೊಂಡು ಯಂತ್ರಮಾನವರಾಗಿದ್ದಾರೆ. ಈ ಭರಾಟೆಯ ಜೀವನದಿಂದ ತುಸು ಪ್ರಶಾಂತತೆ, ಮಾನಸಿಕ ನೆಮ್ಮದಿ ಅರಸಿ ನೃಪತುಂಗ ಬೆಟ್ಟದ ತಪ್ಪಲಿಗೆ ಜನ ಚಾರಣ ಕೈಗೊಳ್ಳುತ್ತಾರೆ. ನಗರದ ಗಲಿಬಿಲಿಯಿಂದ ದೂರ ಉಳಿಯಲು, ರಜೆಯ ಮಜಾ ಅನುಭವಿಸಲು ಸಹ ಜನ ಇಲ್ಲಿಗೆ ಪ್ರತಿ ಭಾನುವಾರ ಭೇಟಿ ನೀಡುತ್ತಾರೆ. ಹಾಗಾಗಿ ಎಲ್ಲ ವಯೋಮಾನದವರನ್ನು ಆಕರ್ಷಿಸಿರುವ ತಾಣವಿದು. ನಗರದಿಂದ ೪ ಕಿ.ಮೀ. ದೂರದಲ್ಲಿ ಹಾಗು ಉಣಕಲ್ ರೈಲು ನಿಲ್ದಾಣದಿಂದ ಅತಿ ಸಮೀಪದಲ್ಲಿದೆ ನೄಪತುಂಗ ಬೆಟ್ಟ.

ಮೊದಲಿನಿಂದಲೂ ಆರೋಗ್ಯದ ಪ್ರತಿ ಕಾಳಜಿ ಇರುವ ಕೆಲ ಜನ ನಿತ್ಯ ವಾಯು ವಿಹಾರಕ್ಕೆ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಜಯಕರ ಮಸ್ಲೆ ಕೂಡ ಒಬ್ಬರು. ಇಲ್ಲಿನ ಬೆಟ್ಟದ ರಸ್ತೆಗಳು ಯುವ ವಾಹನ ಚಾಲಕರಿಗೆ ಮೋಜಿನ ತಾಣವಾಗಿ ಪರಿಣಮಿಸಿದ್ದು, ಕುಣಿತ ಹಾಗು ಕುಡಿತ ಎರಡಕ್ಕೂ ಹಿಡಿತವಿಲ್ಲ ಎನ್ನುತ್ತಾರೆ. ಡಾ.ರವಿ ಕಲಘಟಗಿ ಅವರು ಹೇಳುವಂತೆ, ರಸ್ತೆಯ ತಿರುವುಗಳಲ್ಲಿ ಅತ್ಯಂತ ವೇಗವಾಗಿ ವಾಹನ ಓಡಿಸುವ ಚಾಳಿ ಇಟ್ಟುಕೊಂಡಿರುವ ಯುವಕರು ಅನೇಕರ ಪ್ರಾಣಕ್ಕೆ ಎರವಾಗಿ ಪರಿಣಮಿಸಿದ್ದಾರೆ ಎಂದು ಬೇಸರದಿಂದ ನುಡಿಯುತ್ತಾರೆ.

ರಜಾದಿನಗಳಂದು ಇಲ್ಲಿಗೆ ಭೇಟಿ ನೀಡುವ ಜನ, ತಮ್ಮೊಂದಿಗೆ ತಂದ ತಿನ್ನುವ ಸಾಮಗ್ರಿ ಬಳಸಿ ನಂತರ ಬಿಸಾಕಿ ಹೋಗುವ ಪರಿ ಪರಿಸರ ಪ್ರೇಮಿಗಳ ಮನ ಕಲಕುತ್ತದೆ. ಬಳಸಿದ ಮೇಲೆ ವ್ಯವಸ್ಥಿತವಾಗಿ ಬಿಸಾಡಲು ಅಲ್ಲಲ್ಲಿ ಕಸದ ತೊಟ್ಟಿಯ ವ್ಯವಸ್ಥೆ ಮಾಡಲಾಗಿದ್ದರೂ ಬಳಸುವ ಪೌರ ಪ್ರಜ್ಞೆಯ ಕೊರತೆ ಎದ್ದುಕಾಣುತ್ತದೆ. ಹಾಗೆಯೇ ವಿಘ್ನ ಸಂತೋಷಿಗಳ ಹಲವಾರು ಭಿತ್ತಿ ಬರಹ, ಕುಚೇಷ್ಟೆಗಳು ಸಹ ಈ ತಾಣವನ್ನು ತಕ್ಕ ಮಟ್ಟಿಗೆ ಅಂದ ಗೆಡಿಸುವಲ್ಲಿ ಯಶಸ್ವಿಯಾಗಿವೆ.

ಆದರೂ ಈ ಬೆಟ್ಟ ಹಾಗು ಅಲ್ಲಿನ ಪರಿಸರವನ್ನು ಮೊದಲಿನಂತೆ ಕಾಪಾಡಲು ಕೆಲ ಯುವಜನ ಪಡೆ ಟೊಂಕಕಟ್ಟಿ ನಿಂತಿದೆ ಎನ್ನುವುದೇ ಸಮಾಧಾನದ ಸಂಗತಿ. ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಫೆಲೋಷಿಪ್ ಪಡೆದು 'ಸೋಸಿಯಲ್ ಆಂತ್ರಿಪ್ರ್ಯುನರ್ ಶಿಪ್' ತರಬೇತಿ ಪಡೆಯುತ್ತಿರುವ ಕೆಲ ಸಾಹಸಿಗಳ ತಲೆಯಲ್ಲಿ ಈ ವಿಷಯ ಹೊಕ್ಕಿದ್ದೇ ತಡ ಕ್ರಿಯಾಯೋಜನೆ ಸಿದ್ಧವಾಯಿತು. 'ಪ್ರೊಜೆಕ್ಟ್ ಫ್ಲೇಮ್ ಆರೆಂಜ್' ಹೆಸರಿನ ಪಡೆ ವಿಶೇಷ ಯೋಜನೆಯನ್ನು ಶ್ರಮದಾನದೊಂದಿಗೆ ಅನುಷ್ಠಾನಗೊಳಿಸಲು ಮುಂದಾಯಿತು. ಸರಿ ಹಣ ಹೊಂದಿಸುವುದು ಹೇಗೆ?

ಈ ಯೋಜನೆಯ ಕರ್ಣಧಾರತ್ವ ವಹಿಸಿದ ಕೇರಳದ ಅಶುತೋಷ, ಮುಂಬೈಯ ಸಾಹಿನಾ ಹಾಗು ಬೆಂಗಳೂರಿನ ಮಧು ಅತ್ಯಂತ ಆಶಾವಾದಿಗಳಾಗಿ ಕಾರ್ಯಾರಂಭ ಮಾಡಿದರು. ಬೆಳಿಗ್ಗೆ ವಾಯು ವಿಹಾರಕ್ಕೆಂದು ಬರುವ ಜನರಿಂದಲೇ ಬೆಟ್ಟದ ಸೌಂದರ್ಯೀಕರಣಕ್ಕಾಗಿ ಹಣ ಪಡೆಯಲು ಹುಂಡಿ ತಯಾರಿಸಿದರು. ಮೊದಲನೇ ದಿನ ವಿಷಯದ ಅರಿಕೆ ಮಾಡಿಸಿದರು. ಕ್ರಮೇಣ ಅಲ್ಲಿನ ಜನಕ್ಕೆ ಇವರ ಕತೃತ್ವ ಶಕ್ತಿಯಲ್ಲಿ ನಂಬಿಕೆ ಹುಟ್ಟಿ ಉದಾರ ಮನಸ್ಸಿನಿಂದ ದೇಣಿಗೆ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ೨೦ ಜನ ಸ್ವಯಂ ಸೇವಕರು, ಅಂದ ಗೆಟ್ಟಿದ್ದ ಅಲ್ಲಿನ ಕಾಂಕ್ರೀಟ್ ಬೆಂಚ್, ಬಸ್ ನಿಲ್ದಾಣ ಹಾಗು ಮಾರ್ಗ ಸೂಚಿ ಫಲಕಗಳಿಗೆ ತಮ್ಮ ಕೈಯಾರೆ ಬಣ್ಣ ಬಳಿದರು. ಕಿತ್ತು ಹೋಗಿದ್ದ ಮಕ್ಕಳ ಆಟಿಕೆಗಳಿಗೆ ತುಸು ದುರಸ್ಥಿ ಮಾಡಿ ಬಳಕೆಯ ಸ್ಥಿತಿಗೆ ತಂದರು.

ಹಾಗೆಯೇ, ಒಣಗಿ ನಿಂತ ಮರಗಳ ಪಾಲನೆಗೆ ತುಸು ಜೀವದಾನ ಮಾಡುವ ಅವಶ್ಯಕತೆ ಇತ್ತು. ಶ್ರಮದಾನದ ಮೂಲಕ ಗಿಡ ನೆಡುವುದು ಹಾಗು ಕಸದ ಕೊಂಪೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ಬದಲಾಯಿಸುವ ಪಣ ತೊಟ್ಟ ಹಸಿರು ಪಡೆ, ಸುಮಾರು ೧೦೦ ಗಿಡಗಳನ್ನು ತಂದು ವೃಕ್ಷಾರೋಪಣ ಸಹ ನೆರವೇರಿಸಿತು. ದೈನಂದಿನ ದೈಹಿಕ ಶ್ರಮದಾನದ ಭಾಗವಾಗಿ ಅವುಗಳಿಗೆ ಒಡ್ಡು ಕಟ್ಟಿ, ನೀರು ನಿಲ್ಲಿಸುವ ಕೆಲಸ ಸಹ ಮಾಡಲಾಯಿತು. ಬೆಟ್ಟದಿಂದ ಹರಿದು ಬರುವ ನೀರು ಪೋಲಾಗದಂತೆ ಈ ಮರಿ ಗಿಡಗಳಿಗೆ ಸಂಪರ್ಕ ಕಲ್ಪಿಸಿದ್ದಾಯಿತು. ಆದರೆ ಮಳೆ ಬಾರದಿದ್ದ ಸಂದರ್ಭದಲ್ಲಿ? ಮಹಾನಗರ ಪಾಲಿಕೆಯ ನೀರಿನ ಟ್ಯಾಂಕರ್ ಸ್ಥಳಕ್ಕೆ ತರಿಸಿ, ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಪ್ರತಿಯೊಂದು ಗಿಡಕ್ಕೂ ನೀರು ಹಣಿಸಿ ಬದುಕಿಸುವ ಹರ ಸಾಹಸ ಈ ಪಡೆ ಮಾಡಿದೆ.

ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ದಿವಂಗತ ಪುಂಡಲೀಕ ಹುಗ್ಗಿ ಅವರ ಶ್ರಮ ಸದ್ಯ ಸಾರ್ಥಕವಾಗಿದೆ. ಅವರು ಹಚ್ಚಿ ಬೆಳೆಸಿದ, ಪಾತಿ ಕಟ್ಟಿ ಬೆಟ್ಟದ ನೀರನ್ನು ಎಲ್ಲ ಮನೆಗಳ ಗಿಡಗಳಿಗೆ ಉಣಿಸುತ್ತಿದ್ದ ಚಿತ್ರ ಇಂದಿಗೂ ಅಲ್ಲಿನ ನಿವಾಸಿಗಳ ಕಣ್ಣಿಗೆ ಕಟ್ಟಿದಂತಿದೆ. ಆದರೆ ಅವರ ನಂತರ ಯಾರು? ಎಂಬ ಯಕ್ಷ ಪ್ರಶ್ನೆಗೆ ಸಮರ್ಪಕ ಉತ್ತರ ಈಗ ಈ ಯುವ ಪಡೆ ನೀಡಿದೆ. ಬೆಳಿಗ್ಗೆ ವಾಯು ವಿಹಾರಕ್ಕೆ ಬರುವ ಹಿರಿಯ ಚೇತನಗಳೂ ಸಹ ಈಗ ಬಾಟಲಿಯಲ್ಲಿ ನೀರು ತಂದು ಕೆಲ ಗಿಡಗಳಿಗೆ ನೀರು ಉಣಿಸುವ ಕಾಯಕದಲ್ಲಿ ಸಂತೋಷದಿಂದ ತೊಡಗಿಕೊಂಡಿದ್ದಾರೆ. ಅಂತೂ ಗಟಾರುಗಳ ಮೂಲಕ ಬೆಟ್ಟದ ನೀರು ಪೋಲಾಗಿ ಹೋಗುತ್ತಿದ್ದುದನ್ನು ತಡೆದು ಇಂಗಿಸುವ ಪ್ರಯತ್ನಕ್ಕೆ ಕೈಹಾಕಿದ 'ಪ್ರೊಜೆಕ್ಟ್ ಆರೇಂಜ್ ಫ್ಲೇಮ್' ಪಡೆ ನಿಜಕ್ಕೂ ಅಭಿನಂದನೀಯ.

ಶಿಲ್ಪಾ ಭೋವಿ
ಎಂ.ಎ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿನಿ
ಐ.ಎಂಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯

1 comments:

arivina marevu said...

Article has been planeed well. But little bit of value addition is required. The writer wolud have been suggested some concrete measures and solutions to save the tank.

Post a Comment