ಮಾನವ ತ್ಯಾಜ್ಯ ಈ ಆಸ್ಪತ್ರೆಗೆ ಇಂಧನ ಮೂಲ.

Saturday, February 21, 2009


ಮ್ಮ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ, ಇಂಧನ ಮೂಲವಾಗಿ ಇಡಿ ಆಸ್ಪತ್ರೆಗೆ ಬಳಸಿದವರು ಯಾರು ಗೊತ್ತೆ?

ಬನ್ನಿ..ಹುಬ್ಬಳ್ಳಿಯ ಪ್ರತಿಷ್ಠಿತ ಸುಶ್ರುತ ಆಸ್ಪತ್ರೆಗೆ. ವೈದ್ಯ ವಿಜ್ಞಾನಿ ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿ ನಾಡಿನ ಗಮನ ಸೆಳೆದಿದ್ದ ಸೃಜನ, ಸಜ್ಜನ ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ, ಕಿವಿ, ಗಂಟಲು ಹಾಗು ಮೂಗು ತಜ್ಞ ಡಾ.ಉಮೇಶ ನಾಗಲೋಟಿಮಠ ಅವರೇ ಈ ವಿಶೇಷ ಪ್ರಯೋಗ ಮಾಡಿ ಗಮನ ಸೆಳೆದವರು.

ಇಲ್ಲಿಯ ವರೆಗೆ ನಾವು ಜಾನುವಾರುಗಳ ಸಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದಿಸಿ, ಬಳಸಿ ಅರಿತಿದ್ದೇವೆ. ಆದರೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ ಇಡೀ ಅಸ್ಪತ್ರೆಗೆ ನಿರಂತರ ಗ್ಯಾಸ್ ಪೂರೈಕೆ ಸಾದ್ಯವಾಗಿಸಿದ ಕೀರ್ತಿ ಡಾ. ಉಮೇಶ ನಾಗಲೋಟಿಮಠ ಅವರದ್ದು.
ಡಾ.ನಾಗಲೋಟಿಮಠ ಅವರಿಗೆ ಬಯೋ ಗ್ಯಾಸ್ ಉತ್ಪಾದನೆ ಮಾಡಲು ಸ್ಪೂರ್ತಿ ನೀಡಿದ್ದು ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಲೇಖನ. ಆ ನಂತರ ಅಂತರ್ಜಾಲವನ್ನು ಜಾಲಾಡಿ ಒಂದಿಷ್ಟು ಮಾಹಿತಿ ಕಲೆ ಹಾಕಿದರು. ನಂತರ ೫೦ ವರ್ಷಗಳ ಹಿಂದೆಯೇ ಶಿಗ್ಲಿಯ ಸ್ವಾಮೀಜಿಯೊಬ್ಬರು ಮಣ್ಣಿನ ಪೈಪ್ ಗಳನ್ನು ಬಳಸಿ ಈ ಪ್ರಯೋಗ ಕೈಗೊಂಡಿದ್ದ ಬಗ್ಗೆ ವಿಷಯ ತಿಳಿದಾಗಿನಿಂದ ಈ ಪ್ರಯೋಗನಾವೇಕೆ ಆಸ್ಪತ್ರೆಯಲ್ಲಿ ಮಾಡಬಾರದು ಅನಿಸಿತಂತೆ.

ಆಸ್ಪತ್ರೆಯಲ್ಲಾದರೆ ದಿನವೊಂದಕ್ಕೆ ೩೦೦ಕ್ಕಿಂತ ಅಧಿಕ ಜನರು ಕಕ್ಕಸವನ್ನು ಬಳಸುತ್ತಾರೆ. ಇದನ್ನು ಬಳಸುವ ಜನರ ಸಂಖ್ಯೆ ಕಡಿಮೆ ಇದ್ದಾಗ ಈ ಪ್ರಯೋಗ ಸಾಧ್ಯವಾಗಲಾರದು. ಜೈವಿಕ ಅನಿಲ ಉತ್ಪಾದನೆಯ ಸಾಧಕ ಹಾಗು ಬಾಧಕಗಳ ಅಧ್ಯಯನ ನಡೆಸಿದರು. ಗೋಬರ್ ಗ್ಯಾಸ್ ಉತ್ಪಾದನೆಯ ವೈಫಲ್ಯಕ್ಕೆ ಭೂಮಿಯ ಮೇಲೆ ರಚಿಸಲಾದ ಟ್ಯಾಂಕ್ ಗಳೇ ಮೂಲಕಾರಣ ಎಂದು ಅರಿತರು. ಈ ಟ್ಯಾಂಕ್ ಗಳು ತುಕ್ಕು ಹಿಡಿದು ಅಥವಾ ಸಣ್ಣ ಕೀಟಗಳು ಅದನ್ನು ತೂತು ಮಾಡಿ ಗ್ಯಾಸ್ ಅವ್ಯಾಹತವಾಗಿ ಸೋರುವ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಲೇ ಜನರಿಗೆ ಗೋಬರ್ ಗ್ಯಾಸ್ ನಿಂದ ದೀರ್ಘ ಕಾಲ ಗ್ಯಾಸ್ ಪೂರೈಕೆಯಾಗುವ ಬಗ್ಗೆ ಅಪನಂಬಿಕೆ ಹುಟ್ಟಿತ್ತು ಎನ್ನುತ್ತಾರೆ ಡಾ.ನಾಗಲೋಟಿಮಠ. ಈ ಕಾರಣದಿಂದಾಗಿಯೇ ಅವರು ತಮ್ಮ ಆಸ್ಪತ್ರೆಯಲ್ಲಿ ಚೀನಿ
ಮಾದರಿಯ 'ಅಂಡರ್ ಗ್ರೌಂಡ್ ಬಯೋಗ್ಯಾಸ್ ಟ್ಯಾಂಕ್' ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಲ್ಲಿ ನಿರ್ಮಿಸಿದ್ದಾರೆ.
ಮಾನವ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ವಿಧಾನದಲ್ಲಿ ತೊಟ್ಟಿಗೆ ಸೂರ್ಯನ ಕಿರಣಗಳು ಹಾಗು ಆಮ್ಲಜನಕದ ಪೂರೈಕೆ ನಿಷಿದ್ಧ. ಹಾಗಾಗಿ ಈ ಎರಡರ ಬಳಕೆ ವರ್ಜಿಸಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಮಾನವ ತ್ಯಾಜ್ಯ ತಾನಾಗಿಯೇ ಪೈಪ್ ಗಳ ಮೂಲಕ ಬಂದು ಈ ಅಂಡರ್ ಗ್ರೌಂಡ್ ತೊಟ್ಟಿಯಲ್ಲಿ ಶೇಖರಗೊಳ್ಳುತ್ತದೆ. ತೊಟ್ಟಿಯಲ್ಲಿ ತ್ಯಾಜ್ಯಗಳು 'ಸಾವಯವ ರೀತಿಯ ಸ್ಲರೀಕರಣ' ರೀತಿಯಲ್ಲಿ ಕರಗಿ ಮಿಥೇನ್ ಅನಿಲವಾಗಿ ಹೊರಹೊಮ್ಮುತ್ತದೆ. ಹೀಗೆ ಉತ್ಪಾದನೆಗೊಂಡ ಮೀಥೇನ್ ಅನಿಲವು ತೊಟ್ಟಿಯ ಮೇಲ್ಭಾಗದಲ್ಲಿರುವ ಕೊಳವೆಯ ಮೂಲಕ ಹೊರ ಬರುತ್ತದೆ. ಈ ಕೊಳವೆಯನ್ನು ಗ್ಯಾಸ್ ಒಲೆಗೆ ಜೋಡಿಸಲಾಗುತ್ತದೆ.
ಸ್ವಲ್ಪವೂ ವಾಸನೆ ಹೊಮ್ಮದ ಈ ಗ್ಯಾಸ್ ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಕುದಿಸಲು, ನೀರನ್ನು ಬಿಸಿ ಮಾಡಲು ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ಡಾ.ನಾಗಲೋಟಿಮಠ.
ಈ ಜೈವಿಕ ಅನಿಲ ಉತ್ಪಾದನಾ ವಿಧಾನವನ್ನು ಅಳವಡಿಸಿಕೊಂಡಲ್ಲಿ ಹಲವಾರು ಪ್ರಯೋಜನಗಳಿವೆ. ನಿರ್ವಹಣಾ ವೆಚ್ಚ ತೀರ ಕಡಿಮೆ. ಡಾ.ಉಮೇಶ ಅವರು ವಿವರಿಸುವಂತೆ ಆಸ್ಪತ್ರೆಯ ಸೂರಿನ ಅಡಿ ೨ ಬಯೋ ಗ್ಯಾಸ್ ಟ್ಯಾಂಕ್ ನಿರ್ಮಿಸಲು ೭೦ ಸಾವಿರ ರುಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ ಇದರಿಂದ ಆಸ್ಪತ್ರೆಗೆ ತಿಂಗಳಿಗೆ ೧೦ ರಿಂದ ೧೫ ಸಾವಿರ ರುಪಾಯಿಗಳ ಉಳಿತಾಯವಾಗುತ್ತದೆ. ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಕುದಿಸಲು ಹಾಗು ಪ್ರಯೋಗಾಲಯದಲ್ಲಿ ೧೨ ರಿಂದ ೧೪ ತಾಸುಗಳ ಕಾಲ ನಿರಂತರವಾಗಿ ಈ ಗ್ಯಾಸ್ ಉರಿಸಲಾಗುತ್ತಿದೆ. ಹಾಗೆಯೇ ಕಮೋಡ್ ಇರುವ ಶೌಚಾಲಯಗಳಲ್ಲಿ ನಿತ್ಯ ಒಂದು ಬಾರಿ ಫ್ಲಾಶ್ ಮಾಡಲಾಗಿ ಕನಿಷ್ಟ ೨೦ ರಿಂದ ೨೫ ಲೀಟರ್ ವ್ಯಯವಾಗುತ್ತದೆ. ಇದನ್ನು ಸಹ ತಕ್ಕ ಮಟ್ಟಿಗೆ ಕಡಿಮೆ ಗೊಳಿಸಿ ಜಲ ಪ್ರಬಂಧನೆಯ ಕುರಿತು ಸಹ ಪರಿಣಾಮಕಾರಿಯಾಗಿ ಹೆಜ್ಜೆ ಇಡಬಹುದಾಗಿದೆ.
ಅಲ್ಲದೇ ಈ ವಿಧಾನದಿಂದಾಗುವ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಮಾನವ ತ್ಯಾಜ್ಯದಲ್ಲಿರುವ ಕಾಲರಾ, ಟೈಫಾಯಿಡ್ ಮುಂತಾದ ರೋಗಗಳ ರೋಗಾಣುಗಳು ಈ ಸಂದರ್ಭದಲ್ಲಿ ಸತ್ತು ಹೋಗುತ್ತವೆ. ನಂತರ ಹೊರಬರುವ ಗ್ಯಾಸ್ ನಲ್ಲಿ ರೋಗ ಹರಡಬಹುದಾದ ರೋಗಾಣುಗಳ ಯಾವ ಸೋಂಕು ಇರುವುದಿಲ್ಲ. ತುಂಬ ಸರಳವಾದ ಈ ಜೈವಿಕ ಅನಿಲ ಉತ್ಪಾದನೆಗೆ ತಗಲುವ ವೆಚ್ಚ ಕಡಿಮೆ. ಡಾ. ನಾಗಲೋಟಿಮಠ ಈಗಾಗಲೇ ಅನೇಕರಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಈ ಪ್ರಯೋಗ ಕೈಗೊಳ್ಳಲು ಯಾರೂ ಮುಂದೆ ಬಂದಿಲ್ಲ ಎಂದು ವಿಷಾದಿಸುತ್ತಾರೆ.
ನಮ್ಮ ನಡುವೆಯೇ ಡಾ.ಉಮೇಶ ನಾಗಲೋಟಿಮಠ ಅವರಂತಹ ವಿಶಿಷ್ಠ ಪ್ರಯೋಗ ನಡೆಸಿದ ಸಾಧಕರಿದ್ದಾರೆ. ಆದರೆ ಆ ಸಾಧನೆ ಅಷ್ಟಾಗಿ ಬೆಳಕಿಗೆ ಬಂದಿರುವುದಿಲ್ಲ. ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಂತೆ ದೊಡ್ಡಾ ಆಸ್ಪತ್ರೆಗಳು ವಿದ್ಯಾರ್ಥಿ ನಿಲಯಗಳು, ಹೋಟೆಲ್ ಗಳು ಈ ವಿಧಾನವನ್ನು ಅನುಸರಿಸಿದಲ್ಲಿ ಇಂಧನ ಉಳಿತಾಯ ಮಾತ್ರವಲ್ಲದೇ ಹಣ ಉಳಿತಾಯವೂ ಸಾಧ್ಯವಾಗುತ್ತದೆ. ಹೀಗೆ ಉಳಿತಾಯವಾದ ಹಣ ಹೊಸ ಯೋಜನೆಗೆ ಬಂಡವಾಳವಾಗಬಲ್ಲದು. ಆದರೆ, ತೊಡಗಿಸಿಕೊಳ್ಳಬೇಕಾದ ಮನಸ್ಸು, ವಹಿಸಬೇಕಾದ ಶ್ರಮ, ಪರಿಸರದ ಪ್ರತಿ ಕಾಳಜಿ, ಪರಿಸರ ಸ್ನೇಹಿ ಪ್ರಯೋಗಗಳತ್ತ ಒಲವು ಮುಖ್ಯ ಅಲ್ಲವೇ?

ಸುಜಾತಾ ವಜ್ರಳ್ಳಿ
ಎಂ.ಎ.ಜೆ.ಎಂ. ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

0 comments:

Post a Comment