ಹುಬ್ಬಳ್ಳಿಯ ಉಣಕಲ್ ಕೆರೆ ಕಾಲನ ಗರ್ಭ ಸೇರುವತ್ತ.

Tuesday, February 24, 2009

ಪ್ರಕೃತಿದತ್ತ ಜೀವಿ ದ್ರವ್ಯ ನೀರು. ಜಗತ್ತಿನ ಎಲ್ಲ ಜೀವ ಕೋಟಿಗಳಿಗೆ ಇದು ಬದುಕಿಗೆ ಆಧಾರ. ನೀರನ್ನು ಸತತವಾಗಿ ಕುಡಿಯುವುದರಿಂದ ನೈಸರ್ಗಿಕವಾಗಿಯೇ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು. ಭಾರತೀಯ ಯೋಗ ವಿಜ್ಞಾನ ನೀರಿನ ಅಮೂಲ್ಯತೆಯನ್ನು ಸಮರ್ಪಕವಾಗಿ ಸಾರಿದೆ. ಆದರೂ ನಾವು ನೀರಿನ ಮೂಲಗಳನ್ನು ನ್ಯಾಯೋಚಿತವಾಗಿ ಬಳಸುವ ಮಾರ್ಗಗಳನ್ನು ಶೋಧಿಸುತ್ತಿಲ್ಲ ಎಂಬುದು ಆರೋಪ. ನಮ್ಮ ಭೂಮಿಯನ್ನು ಆವರಿಸಿರುವ ಒಟ್ಟು ನೀರಿನಲ್ಲಿ ಬಳಕೆಗೆ ಯೋಗ್ಯವಾದ ನೀರು ಶೇ. ೩ ರಷ್ಟು ಮಾತ್ರ! ಇದು ಚಿಂತನೆಗೆ ಈಡುಮಾಡುವಂತಹುದು.


ನಮ್ಮ ಹೂಬಳ್ಳಿಯ ಹತ್ತಿರದ ಉಣಕಲ್ ಕೆರೆ ಇಡೀ ನಗರಕ್ಕೆ ಮೆರಗು. ನಿತ್ಯ ಅವಳಿ ನಗರಗಳ ಮಧ್ಯೆ ಸಂಚರಿಸುವವರಿಗೆ ಈ ಕೆರೆ ವಿಶೇಷ ಆಕರ್ಷಣೆ. ಪ್ರಯಾಣಿಸುವವರು ಅತ್ತ ತಿರುಗಿ ಒಮ್ಮೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡ ಭಾವ. ಧಾರವಾಡದಿಂದ ಬರುವಾಗ ಎಡಬದಿಗೆ, ಹುಬ್ಬಳ್ಳಿಯಿಂದ ಹೋಗುವಾಗ ಬಲಬದಿಗೆ ಕಿಟಕಿಯ ಸೀಟು ಅಪೇಕ್ಷಿಸುವುದು ನಿತ್ಯದ ಪ್ರಯಾಸ. ಕಾರಣ ೧೮ ಕಿ.ಮೀ. ತಾಸುಗಟ್ಟಲೇ ಪ್ರವಾಸ ಪ್ರಯಾಸವಾಗದಿರಲಿ ಎಂದು! ಹಾಗೆಯೇ ಇಳಿಯಬೇಕಾದ ಸ್ಟಾಪ್ ಲೆಕ್ಕಹಾಕುವ ಗುಂಗಿನಲ್ಲಿ ಕೆರೆಯತ್ತ ಕಣ್ಣು ಹಾಯಿಸುವುದನ್ನು ಮರೆತಿದ್ದರೆ ಸಂಜೆ ಮರಳುವಾಗಾದರೂ ಒಮ್ಮೆ ನೋಡಿಯೇ ಹೋಗಬೇಕು ಎಂಬ ಮನದ ಇಂಗಿತ ತಣಿಸುವುದು ಸುಲಭವಲ್ಲ.

೧೮೯೩ರಲ್ಲಿ ಈ ಕೆರಯನ್ನು ಕಟ್ಟಲಾಯಿತು. ಇದು ಭಾರತರತ್ನ, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕಲ್ಪನೆಯ ಕೂಸು. ಅವರ ಕೆರೆ ಅಭಿವೃದ್ಧಿ ಯೋಜನೆಯ ಫಲವಾಗಿ ಹೂಬಳ್ಳಿಯವರಿಗೆ ದೊರಕಿದ ಕೆರೆ ಉಣಕಲ್ ಕೆರೆ.

"ನೀರು ಕೊಡಲ್ಯಾಕೆ ನಾನ್ಯಾರೋ..ನೀನ್ಯಾರೋಹೋಗಯ್ಯಾ ಹರಿಯೋ ಹೊಳೆಗಾಗಿ//

ಹರಿಯೋ ನೀರ್ ಹಚ್ಚಗೆ..ಕೆರೆಯ

ನೀರ್ ಬೆಚ್ಚಗೆನೀ ಕೊಟ್ಟ ನೀರು ಸಮರುಚಿ"//

ಎಂದು ನಮ್ಮ ಜಾನಪದ ಕವಿಗಳು ಹಾಡಿದಂತೆ ೧೮೯೩ರ ನಂತರ ಈ ಕೆರೆಯ ನೀರನ್ನು ಇಡೀ ಹುಬ್ಬಳ್ಳಿ ಮಹಾನಗರಕ್ಕೆ ಕುಡಿಯುವ ನೀರಾಗಿ ಪೂರೈಕೆ ಮಾಡಲಾಗುತ್ತಿತ್ತು. ಆಗಿನಿಂದ ಮಹಾನಗರಕ್ಕೆ ಕುಡಿಯುವ ನೀರಿನ ಅಭಾವ ಇರಲಿಲ್ಲ. ಆದರೆ ಹೂಬಳ್ಳಿ ವಾಣಿಜ್ಯ ನಗರಿಯಾಗಿ ಭರ್ಜರಿ ಬೆಳೆಯಿತು. ಅಂದಿನಿಂದ ಸೂಕ್ಷ್ಮವಾಗಿ ಈ ಕೆರೆಗೆ ಸರ್ಜರಿ ಆರಂಭವಾಯಿತು. ಪರಿಣಾಮವಾಗಿ ೧೦೪ ವರ್ಷಗಳು ಸತತವಾಗಿ ಹುಬ್ಬಳ್ಳಿಗರ ದಾಹ ತೀರಿಸಿದ ಕೆರೆ ೧೯೯೭ ರಲ್ಲಿ ತನ್ನ ಅನುಪಮ ಸೇವೆಯಿಂದ ನಿವೃತ್ತಿ ಹೊಂದಿತು.

ಈ ಉಣಕಲ್ ಕೆರೆಯ ಒಟ್ಟು ವಿಸ್ತೀರ್ಣ ಒಟ್ಟು ೨೫೦ ಎಕರೆಗಳು. ಕೆರೆಯ ಪಾತಳಿ ೯೦ ಮೀಟರ್ ಉದ್ದವಾಗಿದೆ. ೧ ಕಿ.ಮೀ ಉದ್ದದ ಕಟ್ಟೆಯನ್ನು ಸಹ ತಡೆಗೋಡೆಯಾಗಿ ನಿರ್ಮಿಸಲಾಗಿದೆ. ೮೦ ಘನ ಚದುರ ಅಡಿಗಳ ಒಡಲು ಹೊಂದಿದೆ. ಗೋಕುಲ ರಸ್ತೆ ಮತ್ತು ರಾಯಾಪುರ ಮಾರ್ಗವಾಗಿ ಕಾಲುವೆಗಳ ಮೂಲಕ ಇಲ್ಲಿಗೆ ನೀರು ಹರಿದು ಬರುತ್ತದೆ. ಕ್ಯಾಚ್ ಮೆಂಟ್ ಪ್ರದೇಶ ವ್ಯಾಪ್ತಿ ಸುಮಾರು ೨೦ ಕಿ.ಮೀ. ಇದೆ ಎಂದರೆ ನಾಡು ಕಂಡ ಪ್ರತಿಭಾಶಾಲಿ ಇಂಜಿನೀಯರ್ ವಿಶ್ವೇಶ್ವರಯ್ಯನವರ ದೂರದೃಷ್ಟಿ ನಮಗೆ ಅರ್ಥವಾಗಬಹುದು.

ಆದರೆ ಕೆರೆಯ ಸ್ಥಿತಿ ಇಂದು ಶೋಚನೀಯ. ಕೆರೆ ತನ್ನ ನಾಲ್ಕೂ ಮೂಲೆಗಳಿಂದ ಈಗ ಮಲೀನಗೊಳ್ಳುತ್ತಿದೆ. ಕೆರೆಯ ಸುತ್ತ ಹಾಗೆಯೇ ವೀಕ್ಷಣೆ ಮಾಡಿದರೆ ನಮಗೆ ಮಾಲಿನ್ಯದ ನೈಜ ಚಿತ್ರಣ ಕಣ್ಣಿಗೆ ರಾಚುತ್ತದೆ. ಕೆರೆಯ ಸುತ್ತಲೂ ಬಿದ್ದ ಸಿಮೆಂಟ್ ತುಂಬಲು ಬಳಸುವ ಪಾಲಿಥಿನ್ ಚೀಲಗಳು, ರಾಶಿ ಪ್ರಮಾಣದಲ್ಲಿ ತೇಲುತ್ತಿರುವ ಭಕ್ತ ಮಹಾಶಯರ ಹರಕೆಯ ಪಳೆಯುಳಿಕೆಗಳು! ಪ್ಲಾಸ್ತಿಕ್ ತ್ಯಾಜ್ಯ ತೇಲಾಡುವುದನ್ನು ನಾವು ಕಾಣುತ್ತೇವೆ. ಕೆರೆಗೆ ಹೊಂದಿಕೊಂಡಂತೆ ಪಂಚತಾರಾ ಶ್ರೇಣಿಯ ಹೊಟೇಲ್ ಇದೆ. ಅದು ಹೊರ ಹಾಕುವ ಮಾಲಿನ್ಯ ಕೂಡ ಪಂಚತಾರಾಶ್ರೇಣಿಯದ್ದೇ! ಹಾಗೆಯೇ ಸುತ್ತಮುತ್ತಲೂ ಇರುವ ವಾಹನಗಳ ಶೋ ರೂಮ್, ಸರ್ವಿಸ್ ಸೆಂಟರ್ ಗಳಿಂದ ಗಟಾರುಗಳ ಮೂಲಕ ಹರಿದು ಬರುವ ಅಣ್ಣೆ, ಗ್ರೀಸ್ ನಂತಹ ತ್ಯಾಜ್ಯ ಕೆರೆಯ ಜೀವಿ ವೈವಿಧ್ಯಕ್ಕೆ ಮರಣ ಮೃದಂಗ ಬಾರಿಸುತ್ತಿದೆ. ಕೆಲವರು ತಮ್ಮ ರಿಕ್ಷಾ, ಜೀಪ್, ಟ್ರ್ಯಾಕ್ಟರ್, ಕಾರು, ಲಾರಿ ಮೊದಲಾದ ವಾಹನಗಳನ್ನು ನೇರವಾಗಿ ನೀರಿಗಳಿಸಿ ಸ್ನಾನ ಮಾಡಿಸುತ್ತಾರೆ! ಸುತ್ತಮುತ್ತಲಿನ ನಿವಾಸಿಗಳ ಕೊಡುಗೆಯೂ ಅನುಪಮವಾದದದ್ದೇ! ತಮ್ಮ ಮನೆಗಳ ಮುಂದಿನ ಗಟಾರುಗಳನ್ನು ಕೆರೆಯ ಕ್ಯಾಚ್ ಮೆಂಟ್ ವ್ಯಾಪ್ತಿಗೆ ಸೇರಿಸಿ ನಿತ್ಯವೂ ಕೈತೊಳೆದುಕೊಳ್ಳುತ್ತಿದ್ದಾರೆ.

ಕೆಟ್ಟ ಮೇಲೆ ಬುದ್ಧಿ ಬಂತು..ನಮ್ಮ ಪಾಲಿಕೆಗೆ!
ಇತ್ತೀಚೆಗೆ ಅವಳಿ ನಗರ ಪಾಲಿಕೆ ಉಣಕಲ್ ಕೆರೆಯ ಶುದ್ಧೀಕರಣ ಮತ್ತು ಸಮರ್ಪಕ ನಿರ್ವಹಣೆಗೆ ಹತ್ತು ಕೋಟಿ ರುಪಾಯಿಗಳ ಯೋಜನೆ ರೂಪಿಸಿದೆ. ಕೆರೆಗೆ ಸೇರುತ್ತಿರುವ ವಿಷಯುಕ್ತ ನೀರನ್ನು ತಡೆಯಲಾಗುವುದು ಎನ್ನುತ್ತಾರೆ ವಲಯದ ಉಪ ಆಯುಕ್ತ ಎಸ್.ಎನ್.ಗಣಾಚಾರಿ. ಪ್ರಕೃತಿದತ್ತವಾಗಿರುವ ನೀರಿನ ಮೂಲಗಳನ್ನು ಬರಿದು ಮಾಡಿ, ಬರವನ್ನು ಸೃಷ್ಠಿಸಿಕೊಂಡಿದ್ದೇವೆ. ಅಂದರೆ ಒಂದು ಲೀಟರ್ ನೀರಿನ ಹಿತ-ಮಿತ ಬಳಕೆ ಅಥವಾ ಉಳಿಕೆ ೨ ಲೀಟರ್ ನೀರಿನ ಉಳಿತಾಯಕ್ಕೆ ಸಮ ಎಂಬ ಸರಳ ಸೂತ್ರ ಅರ್ಥವಾಗಿಲ್ಲ. ನಾವೆಲ್ಲ ಜಲಯೋಧರಾಗಲು ಇದು ಸಕಾಲ. ಇಲ್ಲದೇ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು.

ಪ್ರಭಾಕರ ಎಸ್. ಚಂದ್ರಪ್ಪನವರ್
ಎಂ.ಎ.ಜೆ.ಎಂ. ೧ ಸೆಮ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

0 comments:

Post a Comment