Saturday, February 21, 2009

ಕೀರ್ತಿ ಪೇಪರ್ಸ್ ತನ್ನ ವ್ಯವಸಾಯದ ತ್ಯಾಜ್ಯ ಹಾಗು ಬಳಸಿದ ನೀರಿನ ವ್ಯವಸ್ಥಿತ ಪ್ರಬಂಧನೆಯಿಂದ ಗಮನ ಸೆಳೆದಿದೆ. ಜೊತೆಗೆ ಒಳ್ಳೆಯ ಗುಣಮಟ್ಟದ ಪೇಪರ್, ಕೈ ಚೀಲಗಳು,ಕಡತಗಳು, ಶುಭಾಶಯ ಪತ್ರಗಳು, ಪಾರ್ಸಲ್ ಲಕೋಟೆಗಳು ಸೇರಿದಂತೆ ಅನೇಕ ಗಮನ ಸೆಳೆಯುವ ಹಾಳೆಯ ವಸ್ತುಗಳನ್ನು ತಯಾರಿಸಿ, ವಿದೇಶಕ್ಕೆ ರಫ್ತು ಮಾಡುವ ಕಾರ್ಯದಲ್ಲಿ ನಿರತವಾಗಿದೆ.
೧೯೯೨ರಲ್ಲಿ ಕೇರಳ ಮೂಲದ ವಾಸುದೇವನ್ ಹಾಗು ಅವರ ಸಹೋದರರು ರೋಗಗ್ರಸ್ಥವಾಗಿದ್ದ ಈ ಕೈಗಾರಿಕೆಯನ್ನು ಕೊಂಡರು.
ನಂತರ ಅಹರ್ನಿಶಿ ದುಡಿದು ನಷ್ಟದಲ್ಲಿದ್ದ ಕಂಪನಿ ಲಾಭದತ್ತ ಹೊರಳುವಂತೆ ಮಾಡಿದರು. ಸಾಕಷ್ಟು ಸವಾಲುಗಳನ್ನು ದೈಹಿಕವಾಗಿ ಹಾಗು ಮಾನಸಿಕವಾಗಿ ಎದುರಿಸಿದ ವಾಸುದೇವನ್ ಇಂದಿಗೆ ೪೫ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ೧೯೯೫ರಲ್ಲಿ ಪೂರ್ಣಪ್ರಮಾಣದ ವ್ಯವಹಾರಕ್ಕೆ ಧುಮುಕಿದ ಕೀರ್ತಿ ಪೇಪರ್ಸ್, ನಿತ್ಯ ಪರಿಸರ ಸ್ನೇಹಿ ಕಾಗದ ತಯಾರಿಸಲು ಬಳಸುವ ನೀರಿನ ಪ್ರಮಾಣ ೨ ಸಾವಿರದಿಂದ ೩ ಸಾವಿರ ಲೀಟರ್. ಇಷ್ಟು ನೀರು ಬಳಸಿ ೨೩ x ೩೩ ಇಂಚುಗಳ ೮ ಸಾವಿರ ಕಾಗದಗಳನ್ನು ಉತ್ಪಾದಿಸಲಾಗುತ್ತದೆ. ಜೊತೆಗೆ ಹತ್ತಿರದಲ್ಲಿಯೇ ಇರುವ ಖಾದಿ ವಿಭಾಗದಲ್ಲಿಯೂ ಈ ಪ್ರಮಾಣದಲ್ಲಿಯೇ ನೀರು ಬಳಸಿ ಕಾಗದ ತಯಾರಿಸಲಾಗುತ್ತದೆ.

ಇನ್ನು ಬಳಸಿದ ನೀರನ್ನು ಶುದ್ಧೀಕರಿಸಿ ಕೈಗಾರಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ತೋಟಕ್ಕೆ ಬಿಟ್ಟುಕೊಳ್ಳಲಾಗುತ್ತದೆ. ಒಟ್ಟಾರೆ ಕಾಗದ ತಯಾರಿಕೆಯ ೮ ಹಂತಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಬಳಕೆಯಾಗುತ್ತದೆ. ಆದರೆ ಹಿತ-ಮಿತವಾದ ಜೊತೆಗೆ ನೀರು ದುರ್ಬಳಕೆಯಾಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಬಳಸಿದ ನೀರಿನ ಶುದ್ಧೀಕರಣ, ಪುನರ್ಬಳಕೆಗೆ ಸಹ ಇಲ್ಲಿ ಅವಕಾಶವಿದೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ವಾಸುದೇವನ್.
ಪ್ರಾಯೋಗಿಕವಾಗಿ ಚಿಂತಿಸುವುದಾದರೆ ಯಾವುದೇ ಕಾಗದ ತಯಾರಿಕೆ ಕಾರ್ಖಾನೆ ಇರಲಿ ಗಬ್ಬು ನಾತ ಹಾಗು ೪ ರಿಂದ ೬ ರೀತಿಯ ರಾಸಾಯನಿಕಗಳ ಬಳಕೆ ಇರಲೇ ಬೇಕು. ಬಹುತೇಕ ಕಡೆಗಳಲ್ಲಿ ಈ ಕಾಗದ ಕಾರ್ಖಾನೆಗಳನ್ನು ನದಿಗಳ ಪಕ್ಕದಲ್ಲಿಯೇ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ. ದೈತ್ಯ ಬಕಾಸುರನ ಹೊಟ್ಟೆಯ ಈ ಕಾರ್ಖಾನೆಗಳು ನೀರು ಕುಡಿಯುವುದು ಹಾಗೆಯೇ..ಮತ್ತೆ ಕಲುಷಿತ ಗೊಳಿಸಿ ಹೊರ ಬಿಡುವುದು ಸಹ ಅದೇ ಪ್ರಮಾಣದಲ್ಲಿ. ದಾಂಡೇಲಿಯ ಪೇಪರ್ ಮಿಲ್ ಕಾಳಿ ನದಿಯನ್ನು ಕಲುಷಿತ ಗೊಳಿಸಿದ ಬಗೆ ನಮ್ಮ ಜಂಘಾಬಲವನ್ನೇ ಉಡುಗಿಸುತ್ತದೆ. ಆದರೆ ಕೀರ್ತಿ ಪೇಪರ್ಸ್ ಈ ಬೆಳವಣಿಗೆಗಳಿಗೆ ಅಪವಾದ.ಹಾಗೆಯೇ ಬಳಸಿದ ನೀರನ್ನು ಕೊಂಚ ಮಟ್ಟಿಗೆ ಶುದ್ಧೀಕರಿಸಿ, ಸಮೀಪದ ಕೆರೆ-ಕಾಲುವೆಗಳಿಗೆ ಬಿಟ್ಟ ಉದಾಹರಣೆಗಳು ಕಡಿಮೆ ಏನಿಲ್ಲ. ಕೀರ್ತಿ ಪೇಪರ್ಸ್ ಕಾಗದ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸದೇ, ನೈಸರ್ಗಿಕ ಬಣ್ಣ, ಹೂವು, ಎಲೆ, ಗರಕಿ ಹುಲ್ಲಿ ಮೊದಲಾದವನ್ನು ಬಳಸಿ ಆದಷ್ಟು ತನ್ನ ಉತ್ಪನ್ನ ಪರಿಸರ ಸ್ನೇಹಿಯಾಗಿಡಲು ಪ್ರಯತ್ನಿಸುತ್ತದೆ.

ನಂತರ ಹೈಡ್ರೋಲಿಕ್ ಒತ್ತು ಯಂತ್ರಗಳ ಸಹಾಯದಿಂದ ಬಟ್ಟೆಯಲ್ಲಿ ಹುದುಗಿರುವ ನೀರನ್ನು ಹೊರ ಚಿಮ್ಮಿಸ
ಲಾಗುತ್ತದೆ. ಬಟ್ಟೆ ಒಣಗಿದಂತಾಗಿ ಕೇವಲ ತೇವಾಂಶ ಮಾತ್ರ ಹೊಂದಿ, ಕಾಗದ ಒಂದು ಆಕಾರ ಪಡೆದುಕೊಳ್ಳಲು ಮೊದಲು ಮಾಡುತ್ತದೆ. ನಂತರ ತುಸು ಒಣಗಿದ ನಂತರ ಸಿಲಿಂಡರ್ ಆಕೃತಿಯ ಮೌಲ್ಡ್ ಬಳಸಿ ಹಾಳೆಯನ್ನು ನಯವಾಗಿಸಲಾಗುತ್ತದೆ. ಆನಂತರ ಕಾಗದಗಳನ್ನು ಅಳತೆಗೆ ಅನುಸಾರವಾಗಿ ದಂಡೆಗಳನ್ನು ಕತ್ತರಿಸಿ ಅಂತಿಮ ರೂಪ ಕೊಡಲಾಗುತ್ತದೆ. ಈ ಎಲ್ಲ ಹಂತದಲ್ಲಿಯೂ ನೀರಿನ ಬಳಕೆ ಅತ್ಯಂತ ನ್ಯಾಯಯುತ ರೀತಿಯಲ್ಲಿ ನಡೆಯುತ್ತದೆ. ಯಾವ ಕಾರ್ಮಿಕ ಕೂಡ ಹದ್ದು ಮೀರಿ ನೀರಿನ ದುಂಡುವೆಚ್ಚ ಮಾಡುವುದಿಲ್ಲ ಎನ್ನುವುದು ಅವರ ಜಲ ಪ್ರತಿ ಕಾಳಜಿ ಎತ್ತಿ ತೋರಿಸುತ್ತದೆ.
ಹೀಗೆಯೇ ಎಲ್ಲ ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಚಿಂತಿಸಿದರೆ..ಎಷ್ಟು ಅನುಕೂಲವಲ್ಲವೇ?

ಹೀಗೆಯೇ ಎಲ್ಲ ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಚಿಂತಿಸಿದರೆ..ಎಷ್ಟು ಅನುಕೂಲವಲ್ಲವೇ?
ಶ್ರೀನಿವಾಸ ರೆಡ್ಡಿ
ಪಿ.ಜಿ.ಡಿ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
ಪಿ.ಜಿ.ಡಿ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
0 comments:
Post a Comment