ಪೂರಕ ಇಂಧನವಾಗಿ ಮಾನವ ತ್ಯಾಜ್ಯ

Saturday, February 21, 2009

"ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ; ನೋಟ ಸಮುದ್ರದಂತಹ ಪ್ರಾಣಿ" ಒಲುಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿಗಳ ಮಾತು ಡಾ. ಉಮೇಶ ನಾಗಲೋಟಿಮಠ ಅವರಿಗೆ ಅಕ್ಷರಶ: ಅನ್ವಯಿಸುತ್ತದೆ. ಕಾರಣ,
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ, ಇಡಿ ಆಸ್ಪತ್ರೆಗೆ ಇಂಧನ ಮೂಲವಾಗಿ ಬಳಸಿದ ಹೆಗ್ಗಳಿಕೆ ಹುಬ್ಬಳ್ಳಿಯ ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ದ್ದು. ಆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ ನಾಗಲೋಟಿಮಠ. ಅವರು ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿದ್ದ ದಿ. ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ.
ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಲ್ಲಿ ಕಿವಿ, ಗಂಟಲು ಹಾಗು ಮೂಗು ಶಸ್ತ್ರ ಚಿಕಿತ್ಸಾ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ

ಡಾ.ಉಮೇಶ ಅವರ ಸಂದರ್ಶನದ ಆಯ್ದಭಾಗ.
ಶ್ರೀನಿವಾಸ:
ತಮಗೆ ಮೊಟ್ಟ ಮೊದಲಿಗೆ ಜೈವಿಕ ಅನಿಲ ಉತ್ಪಾದನೆ ಹಾಗು ಬಳಕೆಯ ಕುರಿತು ಯೋಚನೆ ಮೂಡಿದ್ದು ಹೇಗೆ?ಡಾ.ಉಮೇಶ: ನಾನು ಮೊದಲಿಗೆ ಸುಧಾ ವಾರಪತ್ರಿಕೆಯಲ್ಲಿ ಜೈವಿಕ ಅನಿಲ ಉತ್ಪಾದನೆಯ ಕುರಿತಾದ ನುಡಿಚಿತ್ರ ಓದಿದ್ದೆ. ಅದರಿಂದ ಒಂದು ಯೋಚನೆ ಮನಸ್ಸಿನಲ್ಲಿ ಮೂಡಿತು. ಆನಂತರ ಜೈವಿಕ ಅನಿಲದ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ತಿಳಿದುಕೊಂಡೆ. ಇದೆ ಸಂದರ್ಭದಲ್ಲಿ ಶಿಗ್ಲಿಯ ಸ್ವಾಮೀಜಿಯೊಬ್ಬರು ೫೦ ವರ್ಷಗಳ ಹಿಂದೆಯೇ ಜೈವಿಕ ಅನಿಲ ಉತ್ಪಾದನೆ ಸಾಹಸ ಕೈಗೊಂಡಿದ್ದರು. ಇದರಿಂದ ಯೋಚನೆ ಬಲಗೊಂಡಿತು.



ಶ್ರೀನಿವಾಸ: ಜೈವಿಕ ಅನಿಲ ಉತ್ಪಾದನೆ ಆರಂಭಿಸಿದಾಗ ನೀವು ಎದುರಿಸಿದ ಸವಾಲುಗಳೇನು?
ಡಾ.ಉಮೇಶ: ಮೊದಲಿಗೆ ನನ್ನ ಆಸ್ಪತ್ರೆಯ ಎಲ್ಲ ವೈದ್ಯರು ಇದರಿಂದ ಆಸ್ಪತ್ರೆಯ ವಾತಾವರಣ ಹದಗೆಡುತ್ತದೆ. ಅಲ್ಲದೇ ನಿರ್ವಹಣೆ ತೊಂದರೆದಾಯಕ, ಹಾಗಾಗಿ ಇದು ಬಹಳ ದಿನಗಳ ವರೆಗೆ ಕಾರ್ಯರೂಪದಲ್ಲಿರುವುದು ಕಷ್ಟವಾಗಬಹುದು ಎಂದರು. ಸಮಾಜದ ಭಯದಿಂದ ಹಾಗು ಆಚಾರಣೆ, ವಿಚಾರ, ಮಡಿವಂತಿಕೆಯ ಭಯದಿಂದ ಇದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ನನಗೆ ಮನದಟ್ಟಾಯಿತು. ನಾನು ಕೂಡ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. ಆನಂತರ ಶಿರಸಿಯಲ್ಲಿನ ಮನೆಯೊಂದರಲ್ಲಿ ಶೌಚಾಲಯವನ್ನು ಉಪಯೋಗಿಸಿಕೊಂಡು ಜೈವಿಕ ಅನಿಲ ಉತ್ಪಾದಿಸುತ್ತಿರುವುದನ್ನು ಕಂಡು ನನ್ನ ಮನೋಬಲ ವೃದ್ಧಿಸಿತು.


ಶ್ರೀನಿವಾಸ: ಜೈವಿಕ ಅನಿಲ ತಯಾರಿಕೆಗೆ ಬೇಕಾದ ಸಿದ್ಧತೆಗಳು ಯಾವವು?
ಡಾ.ಉಮೇಶ:ಮೊದಲಿಗೆ ಅಂತರ್ಜಾಲ ಜಾಲಾಡಿ. ಅಲ್ಲಿನ ಪ್ರಾಯೋಗಿಕ ಸಿದ್ಧತೆಗಳನ್ನು, ಇಂಜಿನೀಯರ್ ಅವರನ್ನು ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಸಂಪರ್ಕಿಸಿ. ನನ್ನ ಅನುಭವ ಹೇಳುವುದಾದರೆ, ಮಾನವ ತ್ಯಾಜ್ಯದ ಬಯೋ ಗ್ಯಾಸ್ ಪಡೆಯಲು ೨ ತೊಟ್ಟಿಗಳನ್ನು ನಿರ್ಮಿಸಿ, ಅದಕ್ಕೆ ಸೂರ್ಯನ ಕಿರಣಗಳು ಹಾಗು ಆಮ್ಲಜನಕ ಬೀಳದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿ ಕಟ್ಟಿಸುವುದು. ಅದಕ್ಕಾಗಿಯೇ ಇದನ್ನು ಭೂಮಿಯ ಕೆಳಗೆ ಅಳವಡಿಸುವುದು. ಅದಕ್ಕೆ ಶೌಚಾಲಯದ ಮಲ ಹಾಗು ಮೂತ್ರ ಪ್ರತ್ಯೇಕಿಸಿ ಸಂಗ್ರಹಿಸಿ, ಪೈಪ್ ಲೈನ್ ಮೂಲಕ ಈ ತೊಟ್ಟಿಗೆ ಸಂಪರ್ಕ ಕಲ್ಪಿಸುವುದು. ಆನಂತರ ಅಲ್ಲಿ ಸಂಗ್ರಹಗೊಳ್ಳುವ ಗ್ಯಾಸ್ ಬಿಡುಗಡೆ ಮಾಡಲು ವಿಶೇಷ ಪೈಪ್ ವ್ಯವಸ್ಥೆ ಮಾಡಿಕೊಂಡೆವು.


ಶ್ರೀನಿವಾಸ: ಜೈವಿಕ ಅನಿಲ ಉತ್ಪಾದನೆಯ ವಿವಿಧ ಹಂತಗಳ ಬಗ್ಗೆ ತಿಳಿಸಿ.
ಡಾ.ಉಮೇಶ: ನಮ್ಮ ಸುಶ್ರುತ ಆಸ್ಪತ್ರೆಯ ಶೌಚಾಲಯಗಳ ಮೂಲಕ ಮಾನವ ತ್ಯಾಜ್ಯ ಪೈಪ್ ಮೂಲಕ ತಾನಾಗಿಯೇ ಬಂದು, ಸೆಲ್ಲರ್ ನಲ್ಲಿ ನಿರ್ಮಿಸಲಾಗಿರುವ ಬೃಹತ್ ಪ್ರಮಾಣದ ೨ ತೊಟ್ಟಿಗಳಲ್ಲಿ ಸಂಗ್ರಹ ಗೊಳ್ಳುತ್ತದೆ. ಆನಂತರ ಕೆಲ ತಾಸುಗಳ ಬಳಿಕ ತ್ಯಾಜ್ಯವು 'ಆನ್ ಎರೋಬಿಕ್' ರೀತಿಯಲ್ಲಿ ಕರಗಿ, ಮೀಥೇನ್ ಅನಿಲವಾಗಿ ಮೇಲೆ ಬರುತ್ತದೆ. ಹೀಗೆ ಉತ್ಪತ್ತಿಯಾದ ಗ್ಯಾಸ್ ತೊಟ್ಟಿಯ ಮೇಲ್ಭಾಗದಲ್ಲಿ ಅಳವಡಿಸಲಾದ ಕೊಳವೆಗಳ ಮೂಲಕ ಹೊರ ಬರುತ್ತದೆ. ಈ ಕೊಳವೆಗಳನ್ನು ಆಸ್ಪತ್ರೆಯ ಎಲ್ಲ ವಿಭಾಗಗಳ ಒಲೆಗಳಿಗೆ ಜೋಡಿಸಲಾಗಿದೆ. ವಿದ್ಯುತ್ ಕೈಕೊಟ್ಟ ತುರ್ತು ಸಂದರ್ಭಗಳಲ್ಲಿ ಪೆಟ್ರೋಮ್ಯಾಕ್ಸ್ ಗೆ ಜೋಡಿಸಿ ಬೆಳಕನ್ನು ಸಹ ಪಡೆಯಲಾಗುತ್ತಿದೆ.


ಶ್ರೀನಿವಾಸ:ಈ ಪ್ರಯೋಗದಿಂದ ತಮ್ಮ ಆಸ್ಪತ್ರೆ ಭರಿಸುವ ಅಥವಾ ಉಳಿಸುವ ಹಣವೆಷ್ಟು?
ಡಾ.ಉಮೇಶ: ನನಗೆ ಜೈವಿಕ ಅನಿಲ ಉತ್ಪಾದನೆಯ ಪ್ರಕ್ರಿಯೆಯ ೨ ತೊಟ್ಟಿಗಳನ್ನು ನಿರ್ಮಿಸಲು ೬೦ ಸಾವಿರ ರುಪಾಯಿ ಖರ್ಚಾಗಿದೆ. ಹಾಗೆಯೇ ಪೈಪ್ ಲೈನ್ ಅಳವಡಿಸಲು ೧೦ ರಿಂದ ೧೫ ಸಾವಿರ ರುಪಾಯಿ ವೆಚ್ಚ ತಗುಲಿದೆ. ಹೀಗೆ ೨ ವರ್ಷಗಳಿಂದ ನನಗೆ ಖರ್ಚಾದ ಹಣ ಅಂದಾಜು ೭೦ ಸಾವಿರ ರುಪಾಯಿಗಳು. ಈ ಪ್ರಯೋಗ ಅನುಷ್ಠಾನಗೊಳಿಸದೇ ಹೋಗಿದ್ದರೆ ತಿಂಗಳಿಗೆ ೧೫ ರಿಂದ ೨೦ ಸಾವಿರ ರುಪಾಯಿ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತಿತ್ತು. ಅಲ್ಲದೇ ದಿನಕ್ಕೆ ೧೨ ರಿಂದ ೧೪ ತಾಸು ಈ ಗ್ಯಾಸ್ ಬಳಸುತ್ತಿರುವುದರಿಂದ ಇಂಧನದ ಆರ್ಥಿಕ ಹೊರೆ ಆಸ್ಪತೆಯ ಮೇಲಿಲ್ಲ.


ಶ್ರೀನಿವಾಸ: ಜೈವಿಕ ಅನಿಲ ಉತ್ಪಾದನೆಯಲ್ಲಿ ಆಸ್ಪತ್ರೆಯ ತ್ಯಾಜ್ಯವನ್ನು ಸಹ ಈ ಪ್ರಕ್ರಿಯೆಯಲ್ಲಿ ಬಳಸಬಹುದೇ?
ಡಾ.ಉಮೇಶ: ಇಲ್ಲ. ನಾವು ಬಳಸುತ್ತಿರುವುದು ಮಾನವ ತ್ಯಾಜ್ಯ ಮಾತ್ರ. ಇದರಲ್ಲಿ ಎಲ್ಲ ತ್ಯಾಜ್ಯಗಳು ಉದಾಹರಣೆ ಪ್ಲಾಸ್ಟಿಕ್, ಕಾಗದ, ಸಿರೀಂಜ್, ವಾಯರ್ ಮೊದಲಾದವುಗಳನ್ನು ಹಾಕುವುದರಿಂದ ಗ್ಯಾಸ್ ಪೈಪ್ ಮುಚ್ಚಿ ಪೂರೈಕೆ ತಲೆನೋವಾಗುತ್ತದೆ. ಕೆಲವೆಡೆ ಆಕಸ್ಮಾತ್ ಈ ಅನ್ಯ ಪದಾರ್ಥಗಳ ಸೇರ್ಪಡೆಯಿಂದ ಗ್ಯಾಸ್ ಸೋರಿಕೆ ಶುರುವಾಗಿ ಪ್ರಯೋಗ ಹಿನ್ನೆಡೆ ಅನುಭವಿಸುವಂತಾಗಿದೆ. ಹಾಗೆಯೇ ಕೆಲವೇ ತಿಂಗಳುಗಳಲ್ಲಿ ಮತ್ತೆ ಸಾಂಪ್ರದಾಯಿಕ ಇಂಧನಗಳಿಗೆ ನಾವು ಮೊರೆ ಹೋಗಬೇಕು.


ಶ್ರೀನಿವಾಸ:ಮಾನವ ತ್ಯಾಜ್ಯದಿಂದ ತಯಾರಿಸಲಾಗುವ ಗ್ಯಾಸ್ ಬಳಕೆಯ ಕುರಿತಂತೆ ತಾವು ಇತರೆ ಉದ್ಯಮದವರಿಗೆ ಹೇಳಬಯಸುವುದೇನು?
ಡಾ.ಉಮೇಶ: ಇತ್ತೀಚಿನ ದಿನಗಳಲ್ಲಿ ತಾವು ಗಮನಿಸಿರಬಹುದು. ಪೆಟ್ರೋಲ್ ಸೇರಿದಂತೆ ಅನೇಕ ಇಂಧನಗಳ ಬೆಲೆ ಗಗನಕ್ಕೇರಿದೆ. ಆದರೆ ಈ ಜೈವಿಕ ಅನಿಲ ಉತ್ಪಾದನೆಯಿಂದ ಒಂದು ಪೂರಕ ಹಾಗು ಪರ್ಯಾಯ ಇಂಧನ ನಾವು ಪಡೆದುಕೊಳ್ಳುವಂತಾಗಿದೆ. ಈ ಇಂಧನ ಬಳಕೆಯಿಂದ ಸಾಕಷ್ಟು ಹಣ ಹಾಗು ಶ್ರಮ ಉಳಿತಾಯವಾಗುತ್ತದೆ. ಮಡಿವಂತಿಕೆಯನ್ನು ಬಿಟ್ಟು ವಾಸನೆ ರಹಿತ, ಪರಿಸರ ಸ್ನೇಹಿಯಾದ ಈ ಇಂಧನ ಬಳಕೆಗೆ ನಾವೆಲ್ಲ ಮನಸ್ಸು ಮಾಡಿದರೆ ಗೃಹೋಪಯೋಗಿ ಸಿಲಿಂಡರ್ ಗಳ ಬೇಡಿಕೆಯ ಕೊರತೆಯನ್ನು ನೀಗಿಸಬಹುದು. ದೊಡ್ಡ ಹೋಟೆಲ್, ಆಸ್ಪತ್ರೆ, ವಸತಿ ಗೃಹಗಳು, ಕಾರ್ಖಾನೆ, ಹಾಸ್ಟೆಲ್ ಗಳಲ್ಲಿ ಇದನ್ನು ಅಳವಡಿಸಲು ವ್ಯಾಪಕ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಅವಶ್ಯಕತೆ ಇದೆ.


ಶ್ರೀನಿವಾಸ ರೆಡ್ಡಿ
ಪಿ.ಜಿ.ಡಿ.ಜೆ.ಎಂ. ಪತ್ರಿಕೋದ್ಯಮ ವಿದ್ಯಾರ್ಥಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ ಹುಬ್ಬಳ್ಳಿ- ೨೯

0 comments:

Post a Comment