ಜಲ ಶುದ್ಧೀಕರಣ ಘಟಕದಿಂದ ಅಮ್ಮಿನಬಾವಿಯ ಎರಡು ಕೆರೆಗಳು ಅಶುದ್ಧ!

Tuesday, February 24, 2009

ತುಂಬಿದ ಹೊಳೆಯಾಗ ಕೊಂಬು ಕಾಣಿಸತಾವ

ಇಂಬುಳ್ಳ ಇನಿಯಾ ಬಸವಣ್ಣ / ಬರುವಾಗ/
ಗಂಗೆದ್ದು ಕೈ ಮುಗಿದಾಳ//

ಅಂತ ನಮ್ಮೂರು ಅಮ್ಮಿನಬಾವಿಯ ಅಮ್ಮ ಗಂಗಮ್ಮ ಕಾಶಿ ಹಾಡುತ್ತಿದ್ದರೆ, ಕಣ್ಣಮುಂದೆ ಅಮ್ಮಿನಬಾವಿ ಅಲ್ಲಿನ ಕೆರೆಗಳು ಹಾಗು ಹಸುರಿನಿಂದ ಕಂಗೊಳಿಸಿದ್ದ ಚಿತ್ರ ಕಟ್ಟುತ್ತದೆ. ಆದರೆ ಈಗ ಊರಿನಕ್ೆರೆಗಳು ಕಾಲನ ಗರ್ಭ ಸೇರುವ ತವಕದಲ್ಲಿವೆ. ಅಮ್ಮಿನಬಾವಿಯ ಬಸವಣ್ಣ ಇನ್ನೆಂದೂ ಕೋಡು ಮುಳುಗಿಸಿಕೊಳ್ಳುವಷ್ಟು ನೀರು ಕಾಣಲಾರ ಎಂಬ ಹತಾಷಭಾವ ನಮ್ಮನ್ನು ಆವರಿಸುತ್ತದೆ.

ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ೨ ದೊಡ್ಡ ಕೆರೆಗಳು ಊರಿಗೆ ಗಂಗೆಯಾಗಿದ್ದವು. ಆದರೆ ಈಗ ಮಲೀನವಾಗಿ ಕೃಷಗೊಂಡು ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭಿಸಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರಗಳಿಗೆ ಮಲಪ್ರಭಾನದಿಗೆ ನಿರ್ಮಿಸಲಾಗಿರುವ ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ. ಈ ನೀರು ಶುದ್ಧೀಕರಣಗೊಂಡು ಪೂರೈಕೆಯಾಗುವುದು ಅಮ್ಮಿನಬಾವಿಯ ಜಾಕ್ ವೆಲ್ ನಿಂದ. ಈ ಶುದ್ಧೀಕರಣ ಘಟಕದಿಂದ ಸ್ವಚ್ಛ ನೀರು ಅವಳಿ ನಗರಗಳಿಗೆ ಸರಬರಾಜಾದರೆ, ಕಲ್ಮಶಯುಕ್ತ ಹೊಲಸು ನೀರು ಅಮ್ಮಿನಬಾವಿಯ ಬ್ಯಾಡರ ಕೆರೆ ಮತ್ತು ಮಮ್ಡಕಿಕೆರೆಗೆ ಮೀಸಲು.

ಅಮ್ಮಿನಬಾವಿಯಲ್ಲಿ ೭ ಗಡಗಡಿಗಳ ಒಂದು ದೊಡ್ಡ ಬಾವಿ ಇದೆ. ಈ ಬಾವಿಯಿಂದ ೩೦೦ ಅಡಿಗಳ ಅಂತರದಲ್ಲಿದೆ ಬ್ಯಾಡರ ಕೆರೆ. ಈ ಕೆರೆಯ ನೀರು ಬಾವಿಯ ಸೆಲೆಗಳಿಗೆ ಮೂಲವಾಗಿದೆ. ಜೊತೆಗ ಈ ಕೆರೆಯ ವ್ಯಾಪ್ತಿಗೆ ಬರುವ ೧೦ ಕೊಳವೆ ಬಾವಿಗಳು ಸಹ ಪುನರ್ಜೀವಿತ ಗೊಳ್ಳುವುದು ಈ ನೀರಿನಿಂದಲೇ. ಹಾಗೆಯೇ ಕೃಷಿ ಕಾಯಕ ನಂಬಿರುವ ಗ್ರಾಮಸ್ಥರಿಗೆ ಅವರ ಜಾನುವಾರುಗಳಿಗೆ ಈ ಕೆರೆ ಜೀವದಾಯಿಯಾಗಿತ್ತು. ಈ ಕೆರೆ ತುಂಬಿ ಕ್ರಮೇಣ ಉಕ್ಕಿದಾಗ ಅಮ್ಮಿನಬಾವಿಯ ಹೊರವಲಯದಲ್ಲಿರುವ ಮಡಿಕೆ ಕೆರೆಗೆ ನೀರು ಸೇರುತ್ತಿತ್ತು. ಈ ಕೆರೆ ಸಹ ತುಂಬಿದಾಗ ಉಕ್ಕಿ ಹರಿದು ಮುಂದೆ ಗಾಣಗ್ಯಾರ ಹಳ್ಳದ ಮೂಲಕ ಬೆಣ್ಣೆ ಹಳ್ಳವನ್ನು ಸೇರುತ್ತಿತ್ತು.

ಬ್ಯಾಡರಕೆರೆಯು ೧೯೯೧ ರಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ನೀರಿನ ರಭಸಕ್ಕೆ ಒಡ್ಡು ಒಡೆದು ಊರೊಳಕ್ಕೆ ನುಗ್ಗಿ ಜನರ ಆಸ್ತಿ-ಪಾಸ್ತಿಗೆಲ್ಲ ಹಾನಿ ಮಾಡಿತ್ತು. ನಂತರ ಊರ ಜನರೆಲ್ಲ ಸೇರಿ ಕೆರೆಯ ಒಡ್ಡನ್ನು ಗಾರೆಯಿಂದ ಭದ್ರ ಪಡಿಸಿ ನೀರು ಪೋಲಾಗದಂತೆ, ಮಳೆಗಾಲದಲ್ಲಿ ಜನ ಜೀವನ ಅಸ್ತವ್ಯಸ್ತಗೊಳಿಸದಂತೆ ವ್ಯವಸ್ಥೆ ಮಾಡಿದರು. ಆದರೆ ಈ ಗ್ರಾಮದ ಹತ್ತಿರದಲ್ಲಿಯೇ ಜಲ ಶುದ್ಧೀಕರಣ ಘಟಕ ಸ್ಥಾಪನೆಗೊಂಡನಂತರ ಈ ಹಳ್ಳಗಳಲ್ಲಿ ಹೂಳು ತುಂಬಲಾರಂಭಿಸಿತು. ಗ್ರಾಮ ಪಂಚಾಯಿತಿ ಸಹ ತನ್ನ ಮುತುವರ್ಜಿ ವಹಿಸಿ ಸಾಕಷ್ಟು ಬಾರಿ ಹೂಳೆತ್ತಿಸಿ, ಕೆರೆಯ ಪಾತಳಿ ಬರಿದು ಮಾಡಿತ್ತು. ಆದರೆ ಈದು ಬಿಡದ ಕರ್ಮ ಎಂಬುದು ಅನುಭವಕ್ಕೆ ಬರುತ್ತಲೇ ೨೦೦೩ರಲ್ಲಿ ಕೊನೆಯ ಬಾರಿಗೆ ಈ ಎರಡೂ ಕೆರೆಗಳ ಹೂಳೆತ್ತಿಸಿ ತನ್ನ ಕೈ ತೊಳೆದುಕೊಂಡಿತು.

೨೦೦೮ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರು ಜಲ ಶುದ್ಧೀಕರಣ ಘಟಕದಿಂದ ಕೆರೆಗೆ ಬರುವ ಮಣ್ಣು ಮಿಶ್ರಿತ ನೀರಿನಿಂದ ಹೂಳು ತುಂಬುತ್ತಿದ್ದು, ಅದನ್ನು ತಡೆಯುವಂತೆ ಹಾಗು ಸದ್ಯ ೨ ಕೆರೆಗಳ ಹೂಳೆತ್ತಿಸುವಂತೆ ಸಂಬಂಧಪಟ್ಟವರಿಗೆ ಅರಿಕೆ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಶುದ್ಧೀಕರಣ ಘಟಕದ ನೀರು ಕೆರೆಗೆ ಸೇರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಕೆರೆಗಳಲ್ಲ್ಲಿ 'ವಾಟರ್ ಹೈಸಿಂಥ್' ಹಾಗು 'ವಾಟರ್ ಲೆಟ್ಟೂಸ್' ಜಾತಿಯ ಕಸ ಬೆಳೆದು ಇಡೀ ಪ್ರದೇಶ ಆವರಿಸಿದೆ.ಗ್ರಾಮಸ್ಥರು ಶ್ರಮದಾನದ ಮೂಲಕ ತಮ್ಮ ಕೆರೆಗಳನ್ನು ಉಳಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಅದಕ್ಕೆ ತಗಲುವ ವೆಚ್ಚವನ್ನು ಧಾರವಾಡ ಜಿಲ್ಲಾ ಪಂಚಾಯಿತಿ ಅಥವಾ ಜಲಮಂಡಳಿ ವಹಿಸಿಕೊಂಡರೆ ಕಾಲನ ಗರ್ಭ ಸೇರುವ ತವಕದಲ್ಲಿರುವ ೨ ಕೆರೆಗಳೂ ಬದುಕಿಕೊಳ್ಳಲಿವೆ.

ಮಂಜುನಾಥ ಯಡಳ್ಳಿ
ಪಿ.ಜಿ.ಡಿ.ಜೆ.ಎಂ. ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯

1 comments:

Upendra said...

Good Blog.

Congratulations,

Keep it up.

Post a Comment